ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ.! ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾದ ಯುವಕ.?

news.ashwasurya.in
ಅಶ್ವಸೂರ್ಯ/ದಾವಣಗೆರೆ: ಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ಬೇಸತ್ತು ಯುವಕನೊಬ್ಬ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವುದು ನ್ಯಾಮತಿ ತಾಲೂಕಿನ ಮಾಚಿಗೊಂಡನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ನೇಣಿಗೆ ಶರಣಾದ ಯುವಕ ಯಶವಂತ್ ನಾಯ್ಕ (24) ಎಂದು ತಿಳಿದುಬಂದಿದೆ. ಈ ಯುವಕ ಶಿವಮೊಗ್ಗದ ಫೈನಾನ್ಸ್ ಒಂದರಲ್ಲಿ 5 ಲಕ್ಷ ರೂ. ಸಾಲ ಪಡೆದಿದ್ದನಂತೆ. ಸಾಲ ಕಟ್ಟಲಿಲ್ಲ ಎಂದರೆ ಮನೆ ಜಪ್ತಿ ಮಾಡುವುದಾಗಿ ಖಾಸಗಿ ಪೈನಾನ್ಸ್ ಸಿಬ್ಬಂದಿ ಬೆದರಿಕೆ ಹಾಕಿದ್ದರಂತೆ. ಇನ್ನೊಂದು ಕಡೆ ಬೈಕ್ ಅಡವಿಟ್ಟು ಶಿವಮೊಗ್ಗದ ವ್ಯಕ್ತಿಯೊಬ್ಬರ ಬಳಿ 40 ಸಾವಿರ ರೂ. ಸಾಲ ಮಾಡಿದ್ದ. ಸಾಲ ಕಟ್ಟದ ಹಿನ್ನೆಲೆ ಮನೆ ಮುಂದೆ ಬಂದು ಅವರು ಗಲಾಟೆ ಮಾಡಿದ್ದರು. ಇದರ ಜೊತೆ ಖಾಸಗಿ ಫೈನಾನ್ಸ್ ಸಿಬ್ಬಂದಿ ಸಹ ಕಿರುಕುಳ ನೀಡುತ್ತಿದ್ದರು ಎಂದು ಯುವಕನ ತಾಯಿ ಆರೋಪಿಸಿದ್ದಾರೆ.

ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಮೃತ ಯುವಕನ ತಾಯಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆಗೆ ಮುಂದಾಗಿದ್ದಾರೆ.
ಆತ ಬರೆದಿಟ್ಟ ಸಾವಿನ ಪತ್ರದಲ್ಲಿ ಏನಿದೆ.!?

ಸಾಲಗಾರರ ಕಿರುಕುಳಕ್ಕಾಗಿ ಸಾಯುತ್ತಿದ್ದೇನೆ. ಅಪ್ಪ ನೀನು ಅಂದು ಕೊಂಡಂತೆ ನಾನು ದುಡ್ಡು ಹಾಳು ಮಾಡಿಲ್ಲ. ಈ ಕೇಸ್ನಲ್ಲಿ ನಾನು ಇಷ್ಟಪಡುತ್ತಿದ್ದ ಹುಡುಗಿಯನ್ನು ಎಳೆದು ತರಬೇಡಿ. ಅವಳು ಎಲ್ಲಿದ್ದರೂ ಚೆನ್ನಾಗಿರಬೇಕು. ಅವಳು ನನ್ನ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದಳು ಎಂದು ಬರೆದಿದ್ದಾನೆ. ಅಲ್ಲದೇ ತಾನು ಮಾಡಿದ್ದ ಸಾಲದ ಬಗ್ಗೆ ಬರೆದು, ದಯವಿಟ್ಟು ನನ್ನನ್ನು ಕ್ಷಮಿಸಿ ಅಪ್ಪ ಅಮ್ಮ ಎಂದು ಕೊನೆಯದಾಗಿ ಬರೆದಿದ್ದಾನೆ.



