
ASIA CUP : ಪಾಕಿಸ್ತಾನವನ್ನು ಪುಡಿಗಟ್ಟಿದ ಭಾರತ, “7” ವಿಕೆಟ್ ಜಯ. ಗೆಲುವನ್ನು ಪಹಾಲ್ಗಾಮ್ ಹುತಾತ್ಮರಿಗೆ, ಭಾರತೀಯ ಸೇನೆಗೆ ಅರ್ಪಿಸಿದ ನಾಯಕ ಸೂರ್ಯಕುಮಾರ್,

India Dominates Pakistan in Asia Cup 2025: ದುಬೈನಲ್ಲಿ ನಡೆದ ಏಷ್ಯಾ ಕಪ್ 2025 ರ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಏಕಪಕ್ಷೀಯವಾಗಿ ಸೋಲಿಸಿದೆ. ಪಾಕಿಸ್ತಾನ 127 ರನ್ಗಳಿಗೆ ಆಲೌಟ್ ಆಗಿತು. ಭಾರತ ಸುಲಭವಾಗಿ ಗೆಲುವು ಸಾಧಿಸಿತು.ಫಲಿಸಿತು ಕೋಟ್ಯಾಂತರ ಭಾರತೀಯರ ಪ್ರಾರ್ಥನೆ…

news.ashwasurya.in
ಅಶ್ವಸೂರ್ಯ/ಶಿವಮೊಗ್ಗ :
ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ ನಂತರ ಮಾತನಾಡಿದ ಭಾರತ ತಂಡದ ನಾಯಕ ಸೂರ್ಯಕುಮಾರ್ ತಮ್ಮ ತಂಡವು ಪಹಾಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದವರಿಗೆ ಮತ್ತು ಭಾರತೀಯ ಸೇನೆಗೆ ಈ ಗೆಲುವನ್ನು ಅರ್ಪಿಸುತ್ತೇವೆ. ಈ ವರ್ಷ ಆರಂಭದಲ್ಲಿ ಕಾಶ್ಮೀರದಲ್ಲಿ ನಡೆದ ಈ ದಾಳಿಯಲ್ಲಿ 26 ಅಮಾಯಕ ಜನರು ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯ ನಂತರ ಭಾರತವು ಆಪರೇಷನ್ ಸಿಂಧೂರ್ ಕಾರ್ಯಾಚಾರಣೆ ನಡೆಸಿ, ಪಾಕಿಸ್ತಾನ ಮತ್ತು ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳನ್ನ ಧ್ವಂಸ ಮಾಡಿತ್ತು.

ಪಂದ್ಯದ ನಂತರ ಮಾತನಾಡಿದ,ಸೂರ್ಯ “ಇದು ನಾವು ಕಳೆದುಕೊಂಡ ನಮ್ಮವರಿಗೂ ನಮ್ಮ ಸೇನೆಗು ಗೌರವಿಸಲು ಸರಿಯಾದ ಸಮಯ ಮತ್ತು ಸಂದರ್ಭ. ನಾವು ಪಹಾಲ್ಗಾಂ ದಾಳಿಯಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದವರ ಕುಟುಂಬಗಳ ಜೊತೆಗೆ ನಿಲ್ಲುತ್ತೇವೆ ಮತ್ತು ಸಹಾನುಭೂತಿ ತೋರುತ್ತೇವೆ. ಇದಕ್ಕಿಂತ ಮುಖ್ಯವಾಗಿ, ಈ ಗೆಲುವನ್ನು ನಮ್ಮ ಸೇನೆಯ ಧೀರ ಯೋಧರಿಗೆ ಅರ್ಪಿಸುತ್ತೇನೆ, ಇವರು ತಮ್ಮ ಧೈರ್ಯ ಮತ್ತು ಸಾಹಸ ತೋರಿಸಿದ್ದಾರೆ. ನಾವು ನಮ್ಮ ಯೋಧರು ನಮ್ಮನ್ನೆಲ್ಲಾ ಪ್ರೇರೇಪಿಸುವ ಕೆಲಸವನ್ನ ಮುಂದುವರಿಸುತ್ತಾರೆಂದು ಬಯಸುತ್ತೇನೆ ಮತ್ತು ಭವಿಷ್ಯದಲ್ಲಿ ಅವರ ಮುಖದಲ್ಲಿ ಸಂತೋಷ ತರುವಂತೆ ನಾವು ಕೂಡ ಮೈದಾನದಲ್ಲಿ ಗೆಲುವಿಗಾಗಿ ಹೋರಾಡಲು ಪ್ರಯತ್ನಿಸುತ್ತೇವೆ ” ಎಂದು ಭಾರತ ತಂಡದ ನಾಯಕ ತಿಳಿಸಿದರು.

ಪಂದ್ಯದ ಮುನ್ನ ಸಾಮಾಜಿಕ ಮಾಧ್ಯಮದ ಆಕ್ರೋಶ ವ್ಯಕ್ತವಾಗಿತ್ತು, ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತದಲ್ಲಿ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ಆರಂಭವಾಗಿತ್ತು. ಅಭಿಮಾನಿಗಳು ಬಿಸಿಸಿಐ ತೆಗೆದುಕೊಂಡಿರುವ ಈ ಪಂದ್ಯವನ್ನು ಆಡುವ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇತ್ತೀಚಿನ ಪಹಾಲ್ಗಾಮ್ ದಾಳಿಯ ನಂತರ ದೇಶದ ಭಾವನೆಗಳನ್ನು ಗಮನದಲ್ಲಿ ಇಟ್ಟುಕೊಂಡು, ಪಾಕಿಸ್ತಾನ ವಿರುದ್ಧ ಆಡುವುದನ್ನು ತೊರೆಯಬೇಕೆಂದು ಅವರು ಒತ್ತಾಯಿಸಿದ್ದರು.
ಪಂದ್ಯ ಆರಂಭದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಪರಸ್ಪರ ಕೈಕುಲಕಲಿಲ್ಲ. ಇಬ್ಬರ ನಡುವೆ ಕಣ್ಣು ಸಂಪರ್ಕವೂ ಆಗಲಿಲ್ಲ, ಇದು ರಾಜಕೀಯ ಮತ್ತು ಭಾವನಾತ್ಮಕ ಒತ್ತಡವನ್ನು ತೋರಿಸಿತು. ಪಂದ್ಯ ಮುಗಿದ ನಂತರವೂ ಆಟಗಾರರ ನಡುವೆ ಯಾವುದೇ ರೀತಿಯ ಕೈಕುಲುಕುವ ಸಂಪ್ರದಾಯ ನಡೆಯಲಿಲ್ಲ. ಇದು ಎರಡೂ ದೇಶಗಳ ನಡುವಿನ ಉದ್ವಿಗ್ನತೆಯನ್ನು ಪ್ರತಿಬಿಂಬಿಸಿತು.
ಪಂದ್ಯದ ನಂತರದ ಸಮಾರಂಭದಲ್ಲಿ ಮಾತನಾಡಿದ ಮಾಜಿ ಭಾರತ ಆಟಗಾರ ಸಂಜಯ್ ಮಂಜ್ರೇಕರ್ ತಂಡದ ನಾಯಕ ಸೂರ್ಯಕುಮಾರ್ಗೆ “ಹ್ಯಾಪಿ ಬರ್ತಡೇ” ಎಂದು ಶುಭಾಶಯ ಕೋರಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಸೂರ್ಯಕುಮಾರ್, “ಇದು ಅದ್ಭುತ ಅನುಭವ. ಈ ಗೆಲುವು ಭಾರತದ ಅಭಿಮಾನಿಗಳಿಗೆ ನನ್ನ ಜನ್ಮದಿನದ ಉಡುಗೊರೆಯಾಗಿದೆ. ಇಂತಹ ಪಂದ್ಯವನ್ನು ಗೆಲ್ಲುವುದು ನಮ್ಮ ಗುರಿಯಾಗಿದ್ದು, ಗೆದ್ದಾಗ ಇದು ಒಂದು ಉತ್ತಮ ಭಾವನೆಯನ್ನು ತರುತ್ತದೆ,” ಎಂದು ಹೇಳಿದರು.

ಪದ್ಯದಲ್ಲಿ ಪಾಕಿಸ್ತಾನವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 127 ರನ್ ಗಳಿಸಿತು,ಭಾರತದ ಪರ ಬೌಲಿಂಗ್ ಮಾಡಿದ ಕುಲ್ದೀಪ್ ಯಾದವ್ 3, ಅಕ್ಷರ್ ಪಟೇಲ್ ಮತ್ತು ಬುಮ್ರಾ ತಲಾ 2 ವಿಕೆಟ್ ಗಳಿಸಿ ಪಾಕಿಸ್ತಾನವನ್ನು ದೊಡ್ಡ ಮೊತ್ತ ಕಲೆಹಾಕದಂತೆ ಕಡಿವಾಣ ಹಾಕಿದರು, ಭಾರತದ ಪರ ಬ್ಯಾಟಿಂಗ್ ಮಾಡಿದ ಅಭಿಷೇಕ್ ಶರ್ಮಾ 13 ಎಸೆತಗಳಲ್ಲಿ 31 ರನ್ ಗಳಿಸಿದರೆ,ತಂಡದ ನಾಯಕ ಸೂರ್ಯಕುಮಾರ್ ಅಜೇಯ 47 ರನ್ ಗಳಿಸಿದರು ಉಳಿದಂತೆ ಶಿವಮ್ ದುಬೆ 10 ರನ್ ಗೆಲ್ಲುವಿನ ದಾರಿಯನ್ನು ಸುಗಮ ಮಾಡಿದರು, ಇದರೊಂದಿಗೆ ಭಾರತವು ತಮ್ಮ ಗುಂಪು “A” ನಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದೆ.


