ಕೊಣಂದೂರು: ಮಾದ್ಯಮದವರ ಖಡಕ್ ವರದಿಗೆ ಕಿವಿಚೈನ್ ಅಡಮಾನದ ಕೇಸ್ ಕ್ಲಿಯರ್! ಫ್ರೀಡಂ ಫೈಟರ್ ಮನೆಗೆ ಬಂತು, ಸಾಲಕ್ಕೆ ಕಟ್ ಆಗಿದ್ದ ಹಣ..!
Ashwasurya Shivamogga
ಫ್ರೀಡಂ ಫೈಟರ್ ಮಡದಿ ಪರವಾದ ಹೋರಾಟಕ್ಕೆ ಜಯ! | ಮಾಧ್ಯಮದವರ ಖಡಕ್ ವರದಿಗೆ ಮನೆ ಅಡ್ರೆಸ್ ಹುಡ್ಕೊಂಡು ಬಂದ್ರು ಮ್ಯಾನೇಜರ್!
ಪಿಂಚಣಿ ಆಧಾರದ ಸಾಲಕ್ಕೆ ಕಟ್ ಆಗಿದ್ದ ಸ್ವಾತಂತ್ರ್ಯ ಹೋರಾಟಗಾರರ ಮಡದಿಯ ಕಿವಿಚೈನ್ ಕಾಸು.. ಮನೆಗೆ ಬಂತು ವಾಪಸ್… ಪೋಸ್ಟ್ ಮ್ಯಾನ್ ನ್ಯೂಸ್ ಸುದ್ದಿ ಇಂಪ್ಯಾಕ್ಟ್ಗೆ ಅಡ್ರೆಸ್ ಹುಡ್ಕೊಂಡು ಬಂದ್ರು ಕೋಣಂದೂರಿನ ಕೆನರಾ ಬ್ಯಾಂಕ್ ಮ್ಯಾನೇಜರ್!
ಅಶ್ವಸೂರ್ಯ/ಶಿವಮೊಗ್ಗ: ಹೌದು ಕಳೆದ ಶುಕ್ರವಾರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ಕೆನರಾ ಬ್ಯಾಂಕ್ ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪತ್ನಿಯ ಕಿವಿಯ ಓಲೆಯನ್ನು ಪಿಂಚಣಿ ಆಧಾರದ ಸಾಲಕ್ಕೆ ಅಡಮಾನ ಇಟ್ಟುಕೊಂಡ ಬಗ್ಗೆ ಮಾದ್ಯಮದವರೊಂದಿಗೆ 87 ರ ಹರೆಯದ ಬಡ ವೃದ್ದೆ ತಮ್ಮ ಅಳಲನ್ನು ತೋಡಿಕೊಂಡ ಹಿನ್ನಲೆಯಲ್ಲಿ ವೃದ್ದೆಗೆ ಕನಿಷ್ಟ ಗೌರವ ಹಾಗೂ ನ್ಯಾಯ ಕೊಡಿಸುವ ಸದುದ್ದೇಶದಿಂದ ವಿಸ್ತೃತ ವರದಿಯನ್ನು ಪ್ರಕಟಿಸಲಾಗಿತ್ತು.
ವರದಿಗೆ ಎಚ್ಚೆತ್ತ ಕೋಣಂದೂರಿನ ಕೆನರಾ ಬ್ಯಾಂಕ್ ಮ್ಯಾನೇಜರ್ ನರೇಂದ್ರ ರವರು ಹೊಸನಗರ ತಾಲೂಕಿನ ಬಿಲ್ಲೇಶ್ವರ ಗ್ರಾಮದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರನ ಮಡದಿ ಹಾಲಮ್ಮ ರವರ ಮನೆಗೆ ತೆರಳಿ ಬ್ಯಾಂಕ್ ನಿಂದ ನಡೆದ ಅಚಾತುರ್ಯಕ್ಕೆ ಕ್ಷಮೆ ಕೋರಿ ಮಹಿಳೆ ಔಷಧಿಗಾಗಿ ಕಿವಿಯೋಲೆ ಅಡವಿಟ್ಟ ಹಣವನ್ನು ನೀಡಿದ್ದಾರೆ.
ಈ ಸಂಧರ್ಭದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬ ಗ್ರಾಹಕರ ಖಾತೆ ನಿರ್ವಹಣೆ ಮೈನ್ ಸರ್ವರ್ ನಲ್ಲಿ ನಡೆಯುವದರಿಂದ ವೃದ್ದೆಯ ಖಾತೆಗೆ ಜಮಾಗೊಂಡಿದ್ದ ಹಣ ಅವರ ಪಿಂಚಣಿ ಆಧಾರ ಸಾಲಕ್ಕೆ ಜಮೆಯಾಗಿತ್ತು ಆದರೆ ಮೇಲಾಧಿಕಾರಿಗಳು ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸೂಚನೆಯ ಮೇರೆಗೆ ನಮ್ಮ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರ ಹಣವನ್ನು ಹಿಂದಿರುಗಿಸುತಿದ್ದೇವೆ ನಮಗೂ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಗೌರವವಿದೆ ಎಂದರು.
ಈ ಸಂಧರ್ಭದಲ್ಲಿ ಪತ್ರಕರ್ತ ರಫ಼ಿ ರಿಪ್ಪನ್ಪೇಟೆ , ಜಯ ಕರ್ನಾಟಕ ಸಂಘಟನೆಯ ತಾಲೂಕ್ ಅಧ್ಯಕ್ಷ ಚಂದನ್ ಗೌಡ , ಕೋಣಂದೂರಿನ ಮುಖಂಡರಾದ ರಾಘವೇಂದ್ರ ಕಂಠಿ , ಪೊಲೀಸ್ ಸಿಬ್ಬಂದಿಗಳಾದ ಪ್ರವೀಣ್ , ವಿಜೇತ್ ಇದ್ದರು.
ಘಟನೆಯ ಹಿನ್ನಲೆ :
ಹಾಲಮ್ಮರ ಪತಿ ಚನ್ನವೀರಪ್ಪ ಸ್ವಾತಂತ್ರ್ಯ ಹೋರಾಟಗಾರರಾದ ಹಿನ್ನಲೆಯಲ್ಲಿ ಪ್ರತಿ ತಿಂಗಳು ಸರ್ಕಾರದಿಂದ ಪಿಂಚಣಿ ಹಣ ಬರುತಿತ್ತು ಆ ಆಧಾರದ ಮೇಲೆ ವೃದ್ದೆ ಮನೆ ದುರಸ್ಥಿಗೆ ಕೆನರಾ ಬ್ಯಾಂಕ್ ನಲ್ಲಿ ಸಾಲ ಮಾಡಿದ್ದರು.ಆದರೆ ಕಳೆದ ನಾಲ್ಕೈದು ತಿಂಗಳಿನಿಂದ ಸರ್ಕಾರದಿಂದ ಯಾವುದೇ ಪಿಂಚಣಿ ಹಣ ಬಿಡುಗಡೆ ಆಗಿರುವುದಿಲ್ಲ ಆದ್ದರಿಂದ ಸಾಲ ಮರು ಪಾವತಿ ಸಾಧ್ಯವಾಗಿಲ್ಲ…
ದಿನಾಂಕ 10-02-2025 ರಂದು ಮನೆಯಲ್ಲಿ ದಿನಸಿ ಸಾಮಾನು ಖಾಲಿಯಾಗಿದ್ದರಿಂದ ವೃದ್ದೆಯು ತನ್ನ ಕಿವಿಯಲ್ಲಿದ್ದ ಓಲೆ ಚೈನ್ ನ್ನು ಅಡವಿಟ್ಟು ತನ್ನ ಹೊಟ್ಟೆಯ ಚೀಲ ತುಂಬಿಸಿಕೊಳ್ಳಲು ಬ್ಯಾಂಕ್ ಗೆ ಹೋಗಿದ್ದಾರೆ. ಆ ಸಂಧರ್ಭದಲ್ಲಿ ಬ್ಯಾಂಕ್ ವ್ಯವಸ್ಥಾಪಕರು ಓಲೆ ಚೈನ್ ನ್ನು ಪಡೆದು ವೃದ್ದೆಯ ಬಳಿ ಯಾವುದೇ ಸಹಿ ಹಾಕಿಸದೇ ಬದಿಯಲ್ಲಿ ಕೂರಲು ತಿಳಿಸಿದ್ದಾರೆ.
ಸ್ವಲ್ಪ ಹೊತ್ತು ಕಾದ ಮಹಿಳೆ ಹಣಕ್ಕಾಗಿ ಅವರ ಬಳಿ ಹೋಗಿ ಕೇಳಿದಾಗ ಯಾವುದೇ ಹಣ ಕೊಡಲು ಸಾಧ್ಯವಿಲ್ಲ ಎಂದು ಖಾರವಾಗಿ ನಿಂದಿಸಿ ಕಳುಹಿಸಿದ್ದಾರೆ ಹಾಗೂ ಚಿನ್ನ ಅಡಮಾನ ಇಟ್ಟ ಬಗ್ಗೆ ಯಾವುದೇ ಖಾತರಿ ಚೀಟಿ ಕೊಟ್ಟಿರುವುದಿಲ್ಲ, ವೃದ್ದೆ ಬೇಸರದಿಂದ ಮನೆಗೆ ವಾಪಾಸು ಹೋಗಿದ್ದಾರೆ.ಈ ಬಗ್ಗೆ ದಿನಾಂಕ 14-02-2025 ರಂದು ವೃದ್ದೆಯ ಮಗಳು ಶಕುಂತಳಾ ಬ್ಯಾಂಕ್ ನಲ್ಲಿ ವಿಚಾರಿಸಿದಾಗ ಅದನ್ನು ಲೋನ್ ಅಮೌಂಟ್ ಗೆ ಮುರಿದುಕೊಂಡಿದ್ದೇವೆ ಎಂದು ಚೀಟಿಕೊಟ್ಟಿದ್ದಾರೆ..
ಬಡ ಮಹಿಳೆಗೆ ಪಿಂಚಣಿ ಹಣ ಬರದೇ ಇರುವುದು ಸರ್ಕಾರದ ವೈಫಲ್ಯವೇ ಹೊರತು ಬಡ ಮಹಿಳೆಯದಲ್ಲ , ಮಾನವೀಯತೆಯ ಆಧಾರದ ಮೇಲೆ ಸ್ವಾತಂತ್ರ್ಯ ಹೋರಾಟಗಾರನ ಪತ್ನಿ ಎಂಬ ನೆಲೆಗಟ್ಟಿನಲ್ಲಿ ತಾಳ್ಮೆಯಿಂದ ವರ್ತಿಸಿ ಆ ಮಹಿಳೆಗೆ ಸಹಾಯ ಮಾಡಡೇ ಇರುವುದು ದುರದೃಷ್ಟಕರ,
ಸ್ವಾತಂತ್ರ್ಯ ಹೋರಾಟಗಾರನ ಮಡದಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ ಶಾಸಕ ಆರಗ ಜ್ಞಾನೇಂದ್ರ , ತೀರ್ಥಹಳ್ಳಿ ಪಿಎಸ್ಐ ಶಿವಣ್ಣಗೌಡ ಪಾಟೀಲ್ ಹಾಗೂ ಸಿಬ್ಬಂದಿಗಳಿಗೆ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆ ಅಭಿನಂದನೆಗಳನ್ನು ಸಲ್ಲಿಸುತ್ತದೆ.
ಬ್ಯಾಂಕಿನವರ ಕಣ್ಣು ತೆರೆಸುವಲ್ಲಿ ಪ್ರಮುಖಪಾತ್ರ ವಹಿಸಿದ್ದು ಪೋಸ್ಟ್ ಮ್ಯಾನ್ ನ್ಯೂಸ್ ನ ಸಂಪಾದಕರಾದ ರೀಪ್ಪನಪೇಟೆ ಯ ರಫಿ ಅವರು. ಅವರು ಈ ಪ್ರಕರಣದ ವಿಸ್ತೃತ ವರದಿಮಾಡಿ ವೃದ್ಧೆಯ ಬೆನ್ನಿಗೆ ನಿಂತ ಕಾರಣದಿಂದ ಸತ್ಯಕ್ಕೆ ಜಯ ಸಿಕ್ಕಿದೆ ಸಹೋದರ ಮಿತ್ರ ರಫಿ ಅವರ ಹೋರಾಟದ ಫಲದಿಂದ ಬ್ಯಾಂಕಿನವರು ವೃದ್ಧೆಯ ಮನೆಗೆ ಹೋಗಿ ಆಕೆಯ ಕೈಗೆ 6000 ಸಾವಿರ ರೂಪಾಯಿ ನೀಡಿ ತಮ್ಮ ಬ್ಯಾಂಕಿನ ಗೌರವ ಉಳಿಸಿಕೊಂಡಿದ್ದಾರೆ.ಒಟ್ಟಿನಲ್ಲಿ ವೃದ್ಧೆಗೆ ನ್ಯಾಯ ಸಿಕ್ಕಿದ್ದು ಅ ನಂತರದಲ್ಲಿ ಈ ಪ್ರಕರಣದ ವರದಿಮಾಡಿದ ಎಲ್ಲಾ ಮಾಧ್ಯಮ ಮಂದಿಗೂ ಖುಷಿ ತಂದಿದೆ…..