ಯಾವ ಶಾಸಕನ ಮಗ ಆದ್ರೂ ನನಗೆ ಕೌಂಟ್ ಆಗೋಲ್ಲ! ಬಸವನ ವಿರುದ್ಧ ಮಹಿಳಾ ಆಯೋಗದ ಆಧ್ಯಕ್ಷೆ ಆಕ್ರೋಶ.
ashwasurya/Shivamogga
ಅಶ್ವಸೂರ್ಯ/ಬೀದರ್: ಅಕ್ರಮ ಮರಳು ಮಾಫಿಯಾ (Illegal Sand Mafia)ದಂಧೆಕೋರರು ಭದ್ರಾವತಿ ತಾಲ್ಲೂಕಿನ ಸೀಗೆಬಾಗಿ ಸಮೀಪ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಮಾಹಿತಿ ಸಿಕ್ಕ ಕೂಡಲೆ ಅದನ್ನು ತಡೆಯಲು ಹೋದ ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ಶಾಸಕ ಬಿ ಕೆ ಸಂಗಮೇಶ್ ಪುತ್ರ ಬಸವೇಶ್ ಮಹಿಳಾ ಅಧಿಕಾರಿಗೆ ಸೊಂಟದ ಕೆಳಗಿನ ಪದಗಳನ್ನು ಬಳಸಿ ನಿಂದಿಸಿರುವ ವಿಡಿಯೋ ಒಂದು ವೈರಲ್ ಆಗಿತ್ತು. ಈ ಸಂಬಂಧ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿ ಜೋತಿ ಅವರು ಭದ್ರಾವತಿ ಡಿವೈಎಸ್ಪಿಗೆ ಶಾಸಕರ ಪುತ್ರನ ವಿರುದ್ಧ ದೂರು ದಾಖಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಶಾಸಕನ ಪುತ್ರನ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಯಾವ ಶಾಸಕನ ಮಗ ಆದ್ರೂ ನನಗೆ ಕೌಂಟ್ ಆಗೋಲ್ಲ
ಮಹಿಳಾ ಅಧಿಕಾರಿಗೆ ಸಂಗಮೇಶ್ ಪುತ್ರ ಬಸವೇಶ್ ನಿಂದನೆ ಕುರಿತು ಬೀದರ್ನಲ್ಲಿ ಪ್ರತಿಕ್ರಿಯೆ ನೀಡಿದ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ, ಮಹಿಳಾ ಆಯೋಗದಿಂದ ಸಮನ್ಸ್ ನೋಟಿಸ್ ಕಳುಹಿಸಲಾಗಿದೆ. ಯಾವುದೇ ಶಾಸಕನ ಮಗನಾಗಿದ್ರೂ ನನಗೆಲ್ಲಾ ಕೌಂಟ್ ಆಗುವುದಿಲ್ಲ.ಒಂದು ಹೆಣ್ಣು ಕೆಟ್ಟ ಪದಗಳಿಂದ ನಿಂದನೆಗೋಳಗಾಗಿರುವುದು ನಮಗೆ ಮುಖ್ಯವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರಕರಣದ ಕುರಿತು ಶಿವಮೊಗ್ಗದ ಎಸ್ಪಿ ಅವರಿಗೆ ಸಂಪೂರ್ಣ ವರದಿ ಕೊಡುವಂತೆ ಕೇಳಿದ್ದೇನೆ. ಯಾರೇ ಆಗಿದ್ರೂ ತಪ್ಪು ತಪ್ಪೇ. ಅಧಿಕಾರಿ ಆಗಿರಲಿ, ಸಾಮಾನ್ಯ ಮಹಿಳೆ ಆಗಿರಲಿ ಯಾವುದೇ ಹೆಣ್ಣಿಗೂ ಈ ರೀತಿ ಕೆಟ್ಟ ಪದಗಳಿಂದ ನಿಂದನೆ ಮಾಡಕೂಡದು ಎಂದು ಬೀದರ್ನಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಆಕ್ರೋಶ ಹೊರಹಾಕಿದ್ದಾರೆ.