ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಮಾಸಾಚರಣೆ,ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಕುರಿತು ಜಾಗೃತಿ.
news.ashwasurya.in/Shivamogga
ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಮಾಸಾಚರಣೆಯ ಅಂಗವಾಗಿ ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ, ಜನವರಿ 31ರಿಂದ ಪೆಬ್ರವರಿ 01ರ ತನಕ ನಗರದ ಕೋಟೆ ರಸ್ತೆಯ ಕೋಟೆ ಪೊಲೀಸ್ ಠಾಣೆಯ ಸಮೀಪದ ಪೊಲೀಸ್ ಗೆಸ್ಟ್ ಹೌಸ್ ಆವರಣದಲ್ಲಿ ರಸ್ತೆ ಸಂಚಾರ ನಿಯಮಗಳ ಜಾಗೃತಿ ಪ್ರದರ್ಶನ – 2025 ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮವನ್ನು ಈ ದಿನ (ಜ,31) ಬೆಳಗ್ಗೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್, ಶಿವಮೊಗ್ಗ ಜಿಲ್ಲೆ ರವರು ಸದರಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರ ಕುರಿತು ಮಾತನಾಡುತ್ತಾ.
ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸುವ ಸಂಬಂಧ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ವಿನೂತನ ರೀತಿಯ ಕ್ರಿಯಾತ್ಮಕ ರೂಪದಲ್ಲಿ ಅರಿವು ಕಾರ್ಯಮವನ್ನು ಹಮ್ಮಿಕೊಂಡಿದ್ದು, ಅಪಘಾತ ಮುಕ್ತ ಸಮಾಜದ ನಿರ್ಮಾಣವೇ ಮುಖ್ಯ ಗುರಿಯಾಗಿರುತ್ತದೆ ಎಂದು ತಿಳಿಸಿದರು.
ಇತ್ತೀಚಿನ ದಿನಮಾನಗಳಲ್ಲಿ ಸಂಚಾರ ದಟ್ಟಣೆ ಹಾಗೂ ರಸ್ತೆ ಅಪಘಾತಗಳು ಹೆಚ್ಚುತ್ತಿವೆ. ಹೆಚ್ಚಿನದಾಗಿ ಯುವಕರೇ ರಸ್ತೆ ಅಪಘಾತಗಳಿಗೆ ಒಳಗಾಗಿ ತಮ್ಮ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಸಂದರ್ಭಗಳಲ್ಲಿ ಮೃತರ ಕುಟುಂಬ ಹಾಗೂ ಅವಲಂಬಿತರು ತೊಂದರೆಗೆ ಒಳಗಾಗುತ್ತಾರೆ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ರಸ್ತೆ ಸಂಚಾರ ನಿಯಮಗಳನ್ನು ಪಾಲನೆ ಮಾಡೋಣ.
ನಮ್ಮ ಸುರಕ್ಷತೆಯ ದೃಷ್ಠಿಯಿಂದ ಎಲ್ಲರೂ ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕು. ದ್ವಿ ಚಕ್ರ ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದರಿಂದ ಹಾಗೂ ಕಾರು/ನಾಲ್ಕು ಚಕ್ರದ ವಾಹನಗಳಲ್ಲಿ ಪ್ರಯಾಣಿಸುವಾಗ ಎಲ್ಲರೂ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸುವುದರಿಂದ ರಸ್ತೆ ಅಪಘಾತಗಳು ಜರುಗಿದಾಗ ಆಗ ಬಹುದಾದ ಪ್ರಾಣ ಹಾನಿಯನ್ನು ತಡೆಯಲು ಸಾಧ್ಯವಾಗುತ್ತದೆ.
ಅಜಾಗರೂಕತೆಯ ಚಾಲನೆಯು ಸಹಾ ಅಪಘಾತಗಳಿಗೆ ಕಾರಣವಾಗುತ್ತವೆ. ಆದ್ದರಿಂದ ಕಡ್ಡಾಯವಾಗಿ ವೇಗದ ಮಿತಿಯಲ್ಲಿಯೇ ವಾಹನ ಚಲಾಯಿಸಿ. ವಾಹನಗಳಿಗೆ ಇನ್ಸೂರೆನ್ಸ್ ಮಾಡಿಸಿ ಎಂದು ತಿಳಿಸಿರುತ್ತಾರೆ.
ಈ ಕಾರ್ಯಕ್ರಮದಲ್ಲಿ ರಸ್ತೆ ಅಪಘಾತಗಳು ಜರುಗಿದಾಗ ಗಾಯಾಳುಗಳ ಜೀವ ರಕ್ಷಣೆ ಮಾಡಿದಂತಹ ಸಾರ್ವಜನಿಕರಾದ, ಕಿರಣ್ ಕುಮಾರ್, ಸಂತೋಷ್ ಮತ್ತು ಆಶಿಶ್ ಹಾಗೂ ಪ್ರವೀಣ್ ಕುಮಾರ್ ಮತ್ತು ಶ್ರೀಕಾಂತ್ ರವರಿಗೆ ಜೀವ ರಕ್ಷಕ ಪ್ರಶಸ್ತಿಯನ್ನು ಈ ಸಂದರ್ಭದಲ್ಲಿ ನೀಡಲಾಯಿತು.
ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಸಂಚಾರ ಸಹಾಯವಾಣಿ ಸಂಖ್ಯೆ 8277983404 ಗೆ ಚಾಲನೆ ನೀಡಲಾಯಿತು ಮತ್ತು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಮಾಸಾಚರಣೆಯ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರ ಕಲಾ ಸ್ಪರ್ದೆಯನ್ನು ಆಯೋಜಿಸಿದ್ದು,ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.
ಸದರಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ವಿಧ್ಯಾರ್ಥಿಗಳಲ್ಲಿ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸುವ ಸಂಬಂಧ ಕೋಟೆ ಪೊಲೀಸ್ ಗೆಸ್ಟ್ ಹೌಸ್ ಆವರಣದಲ್ಲಿ ಅಣಕು ಪ್ರದರ್ಶನವನ್ನು ಆಯೋಜಿಸಿದ್ದು, ಇದರಲ್ಲಿ ರೋಡ್ ಮಾರ್ಕಿಂಗ್, ಸೂಚನಾ ಫಲಕಗಳು, ಎಚ್ಚರಿಕೆ ಫಲಕಗಳು ಹಾಗೂ ಅಪಘಾತದಿಂದ ಉಂಟಾಗುವ ಪರಿಣಾಮಗಳ ಕುರಿತು ಪ್ರಾತ್ಯಕ್ಷಿಕೆಗಳ ಮೂಲಕ
ಹಾಗೂ ಸಂಚಾರ ಉಪಕರಣಗಳ, ಅಪ್ರಾಫ್ತ ವಯಸ್ಕರ ವಾಹನ ಚಾಲನೆಯ ದುಷ್ಪರಿಣಾಮ ಮತ್ತು ದಂಡ, ವಾಹನ ಚಾಲನೆ ಸಂದರ್ಭದಲ್ಲಿ ಮೊಬೈಲ್ ಫೋನ್ ಬಳಕೆಯ ದುಷ್ಪರಿಣಾಮ ಮತ್ತು ದಂಡ, 112 ಪೊಲೀಸ್ ತುರ್ತು ಸಹಾಯವಾಣಿ, ಪ್ರಥಮ ಚಿಕಿತ್ಸೆ, ಗುಡ್ ಸಮರ್ಟನ್,ಸ್ಮಾರ್ಟ್ ಸಿಟಿ ಕ್ಯಾಮೆರಾ ಮತ್ತು ಫೈನ್ , ಹೆಲ್ಮೆಟ್ ಜಾಗೃತಿ, ಡ್ರಂಕ್ ಅಂಡ್ ಡ್ರೈವ್, ಸೈಬರ್ ಕ್ರೈಂ, ಆರ್.ಟಿ.ಓ ಗೆ ಸಂಬಂಧಪಟ್ಟ ದಾಖಲಾತಿ, ವಾಹನಗಳ ವಿಮೆ, ಎಮಿಷನ್ ಟೆಸ್ಟ್ ಸರ್ಟಿಫಿಕೇಟ್ ಮತ್ತು ಫೀಡ್ ಬ್ಯಾಕ್ ಸೇರಿದಂತೆ ರಸ್ತೆ ಸುರಕ್ಷತೆಗೆ ಸಂಭಂದಿತ ಹಲವು ಮಾಹಿತಿಯನ್ನು ನೀಡುವ ಸಲುವಾಗಿ ಒಟ್ಟು 16 ಕೌಂಟರ್ ಗಳನ್ನು ತೆರೆಯಲಾಗಿರುತ್ತದೆ.
ಸದರಿ ಕಾರ್ಯಕ್ರಮದಲ್ಲಿ ಅನಿಲ್ ಕುಮಾರ್ ಭುಮರಡ್ಡಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕರು-1,ಶಿವಮೊಗ್ಗ ಜಿಲ್ಲೆ. ಕಾರಿಯಪ್ಪ ಎ ಜಿ ಹೆಚ್ಚುವರಿ ಪೊಲೀಸ್ ಅಧಿಕ್ಷಕರು-2,ಶಿವಮೊಗ್ಗ ಜಿಲ್ಲೆ. ಬಾಬು ಆಂಜನಪ್ಪ, ಡಿವೈಎಸ್.ಪಿ ಶಿವಮೊಗ್ಗ ಎ ಉಪ ವಿಭಾಗ, ಸಂಜೀವ್ ಕುಮಾರ್ ಟಿ ಡಿವೈಎಸ್.ಪಿ ಶಿವಮೊಗ್ಗ ಬಿ ಉಪ ವಿಭಾಗ, ಸಂತೋಷ್ ಕುಮಾರ್ ಸಿಪಿಐ ಶಿವಮೊಗ್ಗ ಸಂಚಾರ ವೃತ್ತ ಹಾಗೂ ಶಿವಮೊಗ್ಗ ನಗರದ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಉಪ ಸ್ಥಿತರಿದ್ದರು.