ವಿಶೇಷ ಲೇಖನ :
“ಕ್ರಾಫ್ಟ್ ಆಫ್ ಮಲೆನಾಡು”
ಕಣ್ಮನ ಸೆಳೆಯುವ ಫಲಪುಷ್ಪ ಪ್ರದರ್ಶನ – ಮಲೆನಾಡ ಕರಕುಶಲ ಉತ್ಸವ
news.ashwasurya.in/Shivamogga
ಅಶ್ವಸೂರ್ಯ/ಶಿವಮೊಗ್ಗ: ರೈತರು ಬೆಳೆದ ಫಲ-ಪುಷ್ಪ-ಬೆಳೆಗಳು ಹಾಗೂ ಮಹಿಳೆಯರು ತಯಾರಿಸಿದ ಕಣ್ಮನ ಸೆಳೆಯುವ ಮಲೆನಾಡ ಕರಕುಶಲ ಉತ್ಪನ್ನಗಳ ಪ್ರದನರ್ಶನ ಮತ್ತು ಮಾರಾಟ ಮೇಳಕ್ಕೆ ನಗರದ ಅಲ್ಲಮಪ್ರಭು ಉದ್ಯಾನ(ಫ್ರೀಡಂ ಪಾರ್ಕ್) ಸಜ್ಜಾಗಿದೆ.
ಜ.24 ರಿಂದ ಮೂರು ದಿನಗಳ ಕಾಲ ಬೃಹತ್ ಮತ್ತು ಆಕರ್ಷಣೀಯವಾದ ಪುಷ್ಪಸಿರಿ ಫಲಪುಷ್ಪ ಪ್ರದರ್ಶನ ಮತ್ತು ವಿಶೇಷವಾದ ಮಲೆನಾಡ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಉದ್ಯಾನ ಕಲಾ ಸಂಘ ಇವರುಗಳ ಸಹಯೋಗದೊಂದಿಗೆ ಏರ್ಪಡಿಸಲಾಗಿದೆ.
ರೈತರು ಬೆಳೆದ ವಿಶೇಷವಾದ ಹೂವುಗಳು, ಹಣ್ಣುಗಳು ಮತ್ತು ಬೆಳೆಗಳ ಪ್ರದರ್ಶನವಿರುತ್ತದೆ. ವಿಶೇಷವಾದ ಮತ್ತು ಅತ್ಯುತ್ತಮವಾದ ಬೆಳೆಗೆ ಬಹುಮಾನವಿರುತ್ತದೆ.
ರಾಷ್ಟ್ರೀಯ ಜೀವನೋಪಾಯ ಅಭಿಯಾನ ಸಂಜೀವಿನಿ ಯೋಜನೆಯಡಿ ಶಿವಮೊಗ್ಗ ಜಿಲ್ಲಾ ಪಂಚಾಯತಿಯು “ಕ್ರಾಫ್ಟ್ ಆಫ್ ಮಲೆನಾಡು” ಎಂಬ ಬ್ರಾಂಡ್ ಮೂಲಕ ಜಿಲ್ಲೆಯ ಮಹಿಳಾ ಸ್ವಸಹಾಯ ಗುಂಪುಗಳ ಮಹಿಳೆಯರು ತಯಾರಿಸಿದ ಕರಕುಶಲ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಒಂದು ಬೃಹತ್ ಅವಕಾಶವನ್ನು ನೀಡಲಾಗಿದೆ. ತಮ್ಮ ಆಸೆ, ಕನಸುಗಳನ್ನು ದೊಡ್ಡ ಮಟ್ಟದಲ್ಲಿ ಕಾಣಲು ಇಲ್ಲಿ ವೇದಿಕೆ ಸಜ್ಜಾಗಿದ್ದು, ಈಗ ನಗರದಲ್ಲಿ ಸ್ವಸಹಾಯ ಸದಸ್ಯರಿಗೆ ತಮ್ಮ ತಮ್ಮ ಪ್ರತಿಭೆಗಳನ್ನು ಮತ್ತು ಕುಶಲಕರ್ಮಿ ಶ್ರೇಷ್ಠತೆಯನ್ನು ಮಾರುಕಟ್ಟೆ ಒದಗಿಸಲು ಸದಾವಕಾಶ ಒದಗಿ ಬಂದಿದೆ. ಮಹಿಳೆಯರು ತಯಾರಿಸಿದ ಹಸೆ ಚಿತ್ತಾರ, ಗೃಹಾಲಂಕಾರ ಉತ್ಪನ್ನಗಳು, ಟೆರಾಕೊಟ, ಕುಂಬಾರಿಕೆ, ಸಿದ್ದ ಉಡುಪು, ತಿನಿಸು ಪದಾರ್ಥಗಳು ಇತ್ಯಾದಿ ಉತ್ಪನ್ನಗಳ ಮಾರಾಟ ಮಾಡಲಾಗುವುದು.
ಸಚಿವರಿಂದ ಉದ್ಘಾಟನೆ: 75 ನೇ ಗಣರಾಜ್ಯೋತ್ಸವದ ಅಂಗವಾಗಿ ಜ.24 ರಿಂದ 26 ರ ಬೆಳಿಗ್ಗೆ 9 ಗಂಟೆಯಿಂದ ರಿಂದ ರಾತ್ರಿ 9 ಗಂಟೆವರಗೆ ನಗರದ ಅಲ್ಲಮಪ್ರಭು ಉದ್ಯಾನವನದಲ್ಲಿ (ಫ್ರೀಡಂ ಪಾರ್ಕ್) ಪುಷ್ಪಸಿರಿ ಹೆಸರಿನಲ್ಲಿ 62ನೇ ಫಲ-ಪುಷ್ಪ ಪ್ರದರ್ಶನ, ಮಲೆನಾಡು ಕರಕುಶಲದ ಸರಸ್ ಮೇಳ ಉತ್ಸವ ಹಾಗೂ ಮನರೇಗಾ ಯೋಜನೆಯ ಮಾಹಿತಿ ಮೇಳವನ್ನು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರು ಉದ್ಘಾಟಿಸುವರು.
ಜಗತ್ತೇ ಅಂತರ್ಜಾಲದ ಅಧೀನದಲ್ಲಿದ್ದರೆ ಹಳ್ಳಿಗಳು ಹಾಗೂ ಹಳ್ಳಿಗಳಲ್ಲಿ ತಯಾರಾದ ವಸ್ತುಗಳು ಮಾತ್ರ ಇನ್ನೂ ತನ್ನದೇ ಆದ ಬಲೆ ಎಣೆದುಕೊಂಡು ಬದುಕುತ್ತಿವೆ. ಅದನ್ನು ತೊಡೆದು ಹಾಕಲು ಈ “ಕ್ರಾಫ್ಟ್ ಆಫ್ ಮಲೆನಾಡು” ಮುಂದಾಗಿದ್ದು, ಆನ್ಲೈನ್ ಮಾರುಕಟ್ಟೆಯ ಮೂಲಕ ಹಳ್ಳಿಗಳಲ್ಲಿ ತಯಾರಿಸಿರುವ ವಸ್ತುಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಬೆನ್ನೆಲುಬಾಗಿ ನಿಲ್ಲಲಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲಾಗುತ್ತಿದ್ದು, ಸ್ವ-ಸಹಾಯ ಸಂಘದ ಸದಸ್ಯರಿಗೆ ದನದ ಕೊಟ್ಟಿಗೆ, ಕುರಿ ಶೆಡ್ ನಿರ್ಮಾಣ ಮತ್ತು ಸ್ವ-ಸಹಾಯ ಸಂಘದ ಕಾರ್ಯಚಟುವಟಿಕೆಗಳಿಗೆ ಎನ್.ಆರ್.ಎಲ್.ಎಂ ಶೆಡ್ ನಿರ್ಮಾಣ ಮಾಡಲಾಗುತ್ತದೆ ಹಾಗೂ ನರೇಗಾ ಯೋಜನೆಯಡಿ, ತೋಟಗಾರಿಕೆ ಇಲಾಖೆಯಡಿ ಗ್ರಾಮೀಣ ಭಾಗದ ರೈತರಿಗೆ ತೋಟಗಾರಿಕೆ ಬೆಳೆಗಳಾದ ಅಡಿಕೆ ತೋಟ, ಕಾಳು ಮೆಣಸು, ಎಲೆ ಬಳ್ಳಿ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಇದರ ಜೊತೆಗೆ ಮಹಾತ್ಮ ಗಾಂಧಿ ನರೇಗಾ ಯೋಜನೆ, ಎನ್.ಆರ್.ಎಲ್.ಎಂ ಯೋಜನೆ ಮತ್ತು ತೋಟಗಾರಿಕೆ ಇಲಾಖೆಯಡಿ ನೀಡಲಾಗುವ ಸೌಲಭ್ಯಗಳ ಕುರಿತು ಅರಿವು ಮೂಡಿಸಲು ಮೇಳ ಸಿದ್ದವಾಗಿದೆ.
ಉಚಿತ ಪ್ರವೇಶ: ಫಲಪುಷ್ಪ ಪ್ರದರ್ಶನಕ್ಕೆ ಪ್ರವೇಶ ಉಚಿತವಾಗಿದೆ. ಪ್ರದರ್ಶನದಲ್ಲಿ ಒಟ್ಟು 34 ವಿವಿಧ ಉತ್ಪನ್ನಗಳ ಹಾಗೂ ವಿವಿಧ ಇಲಾಖೆಗಳ ಮಳಿಗೆಗಳು ಇರಲಿವೆ. ಹೊರಭಾಗದಲ್ಲಿ 25 ಮಳಿಗೆಗಳನ್ನು ಸ್ಥಾಪಿಸಲಾಗುವುದು. ರೈತರ ವಿಶೇಷ ಬೆಳೆಗಳಿಗೆ ಪ್ರಶಸ್ತಿ ನೀಡಲಾಗುವುದು.
ವಿಶೇಷ ಹೂವಿನ ಕಲಾಕೃತಿ: ಈ ಬಾರಿ ಗುಲಾಬಿ, ಆರ್ಕಿಡ್, ಸೇವಂತಿಗೆ, ಕಾರ್ನೇಷನ್, ಲಿಲ್ಲೀಸ್, ಪೊಲೀಯೆಜ್ ಮುಂತಾದ ಬಗೆಗಿನ 4.80 ಲಕ್ಷ ಹೂವುಗಳನ್ನು ಬಳಸಿ ಸುಮಾರು 28 ಅಡಿ ಎತ್ತರದ ವಿಶ್ವಮಾನವ, ರಾಷ್ಟçಕವಿ ಕುವೆಂಪು ಅವರ ಕುಪ್ಪಳಿಯ ಮನೆಯನ್ನು ತಯಾರಿ ನಿರ್ಮಾಣ ಮಾಡಲಾಗಿದೆ. ಹಾಗೂ 14 ಅಡಿ ಎತ್ತರದ ಚಂದ್ರಗುತ್ತಿಯ ರೇಣುಕಾ ದೇವಾಲಯವನ್ನು ಮರುಸೃಷ್ಟಿಸಲಾಗುತ್ತಿದ್ದು ಪ್ರದರ್ಶನದ ಆಕರ್ಷಣೆಯಾಗಲಿದೆ.
- ಭಾಗ್ಯ ಎಂ.ಟಿ, ವಾರ್ತಾ ಸಹಾಯಕರು, ವಾರ್ತಾ ಇಲಾಖೆ
ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಇಷ್ಟು ದೊಡ್ಡ ಮಟ್ಟದ ಪುಷ್ಪಸಿರಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ರೈತರು ಬೆಳೆದ ಫಲ-ಪುಷ್ಪ- ಬೆಳೆಗಳ ಜೊತೆಗೆ ವಿಶೇಷವಾಗಿ ಈ ಬಾರಿ ಮಹಿಳೆಯರು ತಯಾರಿಸಿದ ಹಸೆ ಚಿತ್ತಾರ, ಟೆರಾಕೋಟಾ ಶಿಲ್ಪಗಳ ಉತ್ಪನ್ನಗಳು, ಗುಡಿ ಕೈಗಾರಿಕೆ ಮತ್ತು ವೈರ್ಬ್ಯಾಗ್, ವಿವಿಧ ವಿನ್ಯಾಸ ಕಲೆ ಚಿತ್ತಾರ, ಗೃಹ ಅಲಂಕಾರ ವಸ್ತುಗಳು ಸೇರಿದಂತೆ ವಿವಿಧ ಬಗೆಯ 100ಕ್ಕೂ ಹೆಚ್ಚು ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟವಿರುತ್ತದೆ. ಮತ್ತು ವಿಶೇಷವಾದ ಹೂವಿನ ಕಲಾಕೃತಿಗಳೂ ಇರುತ್ತವೆ.
ಮೊದಲ ಹಂತದಲ್ಲಿ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಈ ಮೇಳ, ಎರಡನೇ ಹಂತದಲ್ಲಿ ವೆಬ್ಸೈಟ್ ಸಿದ್ದಪಡಿಸಿ ರಾಷ್ಟ್ರೀಯ, ಅಂತರಾಷ್ಟೀಯ ಮಟ್ಟದಲ್ಲಿ ಮಾರುಕಟ್ಟೆ ಒದಗಿಸುವುದು ಹಾಗೂ ಮೂರನೇ ಹಂತದಲ್ಲಿ ಇವರ ಉತ್ಪನ್ನಗಳ ಮಾರಾಟಕ್ಕೆ ಸ್ಟೋರ್ ತೆರೆಯುವ ಯೋಜನೆ ಇದೆ. ಜಿಲ್ಲೆಯ ಎಲ್ಲಾ ಆತ್ಮೀಯ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಉತ್ಸವದಲ್ಲಿ ಭಾಗವಹಿಸಿ ಈ ಅದ್ಭುತ ಪ್ರದರ್ಶನವನ್ನು ಆನಂದಿಸಬೇಕು.
- ಹೇಮಂತ್ ಎನ್. ಜಿ.ಪಂ ಸಿಇಓ