ಕುಖ್ಯಾತ ರೌಡಿ ಸುನೀಲ್ @ ಹಾವೇರಿ ಕಾಲಿಗೆ ಗುಂಡು ತೂರಿಸಿದ ಪೊಲೀಸರು.!
ಅಶ್ವಸೂರ್ಯ/ಬೆಂಗಳೂರು,ಡಿ.26 : ಕೊಲೆ, ಕೊಲೆಯತ್ನ, ಸುಲಿಗೆ,ಬೆದರಿಕೆ ಸೇರಿ ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿಶೀಟರ್ ಸುನೀಲ್ ಅಲಿಯಾಸ್ ಹಾವೇರಿಗೆ ಅತ್ತಿಬೆಲೆ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.
ಪೊಲೀಸರ ಗುಂಡೇಟು ಕಾಲಿಗೆ ತಗುಲಿ ಗಾಯಗೊಂಡಿರುವ ರೌಡಿ ಸುನೀಲ್ ಅಲಿಯಾಸ್ ಹಾವೇರಿಯನ್ನು
ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರೌಡಿ ಸುನೀಲ್ ಅನೇಕಲ್ಗೆ ಬರುತ್ತಿರುವ ಖಚಿತ ಮಾಹಿತಿಯನ್ನು ಆಧಾರಿಸಿ ಆತನ ಬಂಧನಕ್ಕೆ ಅತ್ತಿಬೆಲೆ ಪೊಲೀಸರು ಕಾರ್ಯಾಚರಣೆ ಇಳಿದಿದ್ದರು. ಬಂಡಾಪುರ ಸಮೀಪದ ಮಡಿವಾಳದಲ್ಲಿ ರೌಡಿ ಸುನೀಲ್ ಪೊಲೀಸರನ್ನು ನೋಡಿ ಓಡುತ್ತಿದ್ದಾಗ ಆತನಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಆತ ಬೆನ್ನತ್ತಿ ಬಂದ ಪೊಲೀಸರ ಮೇಲೆ ಹಲ್ಲೆಗೆ ನಡೆಸಿದ್ದರಿಂದ ಕಾನ್ಸ್ಟೇಬಲ್ ವಿನಯ್ ಕೈಗೆ ಗಾಯವಾಗಿದೆ.
ಶರಣಾಗುವಂತೆ ಸೂಚಿಸಿದರೂ ಮತ್ತೆ ಹಲ್ಲೆಗೆ ಮುಂದಾದಾಗ ಅತ್ತಿಬೆಲೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಘವ್ ಗೌಡ ಆರೋಪಿಯ ರೌಡಿಶೀಟರ್ ಸುನೀಲ್ ಕಾಲಿಗೆ ಗುಂಡು ತೂರಿಸಿ ಬಂಧಿಸಿದ್ದಾರೆ.
ಕಳೆದ ನವೆಂಬರ್ನಲ್ಲಿ ಜಿಗಣಿ ಬಳಿ ರೌಡಿ ಮನೋಜ್ ಗ್ಯಾಂಗ್ ಮೇಲೆ ದಾಳಿ ನಡೆದಿತ್ತು. ಈ ಪ್ರಕರಣ ಆರೋಪಿಯಾಗಿದ್ದ ಸುನೀಲ್ ಮೇಲೆ ಜಿಗಣಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದಾದ ಬಳಿಕ ಸುನೀಲ್ ತಲೆಮರೆಸಿಕೊಂಡಿದ್ದ. ಅಲ್ಲದೇ, ಆರೋಪಿ ವಿರುದ್ಧ ಮರಸೂರು ಗೇಟ್ ಪೆಟ್ರೋಲ್ ಬಂಕ್ ಗಲಾಟೆ, ಒಂದು ಕೊಲೆ ಎರಡು ಕೊಲೆ ಯತ್ನ ಸೇರಿದಂತೆ ಒಟ್ಟು 7 ಪ್ರಕರಣಗಳಿವೆ. ಆತನ ವಿರುದ್ಧ ಅರೆಸ್ಟ್ ವಾರೆಂಟ್ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಯಿಂದ ಗಾಯಗೊಂಡಿರುವ ವಿನಯ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ನಾಗೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಪ್ರಕರಣ ದಾಖಲಿಸಿರುವ ಅತ್ತಿಬೆಲೆ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಡಿಸಿಪಿ ಸಿಕೆ ಬಾಬಾ ತಿಳಿಸಿದ್ದಾರೆ.