ಒಣಶುಂಠಿಗೆ ಗಂಧಕ ಬಳಕೆ ಪರಿಸರಕ್ಕೆ ಮಾರಕ..!!
ಅಶ್ವಸೂರ್ಯ/ರಿಪ್ಪನ್ಪೇಟೆ: ಕಳೆದೆರಡು ವರ್ಷದಿಂದ ಹಸಿ ಶುಂಠಿಗೆ ಬೆಲೆ ಇಲ್ಲದಂತಾಗಿದೆ.ಈ ಕಾರಣದಿಂದಲೇ ಕೆಲವು ಶುಂಠಿ ವ್ಯಾಪಾರಸ್ಥರು, ದಲ್ಲಾಳಿಗಳು, ಶ್ರೀಮಂತ ರೈತರು ಕಂಡು ಕೊಂಡ ಪರಿಹಾರವೆ ಹಸಿ ಶುಂಠಿಗೆ ಗಂಧಕ ಬಳಸಿ ಒಣ ಶುಂಠಿ ಮಾಡುವುದು !
ಶುಂಠಿಗೆ ಬಣ್ಣ ಬರಲು ಹಾಗೂ ಮಾರುಕಟ್ಟೆ ಆಕರ್ಷಿಸಲು ಗಂಧಕ ಬಳಸುವ ತಂತ್ರಕ್ಕೆ ಇವರುಗಳು ಮೊರೆ ಹೋಗಿದ್ದಾರೆ.ಗಂಧಕ ಬಳಕೆಯಿಂದ ಅವರ ಕೆಲಸವೇನೋ ಸಲಿಸಾಗಿ ಆಗಬಹುದು. ಆದರೆ ಶುಂಠಿ ಸಂಸ್ಕರಣೆಗೆ ಬಳಸುವ ಗಂಧಕದ ಹೊಗೆಯು ವಾತಾವರಣದಲ್ಲಿ ಸೇರಿ ದುರ್ನಾತ ಬೀರುತ್ತಿದೆ. ಶುಂಠಿಗೆ ಗಂಧಕ ಬಳಸುವುದರಿಂದ ಈಗಾಗಲೇ ಅನಾರೋಗ್ಯ ಪೀಡಿತರ ಅಸಹನೆ, ನೋವು ಹೇಳತೀರದಾಗಿದೆ.
ರಾಜ್ಯದ ಪ್ರಮುಖ ಶುಂಠಿ ಕಣಜ ಮಲೆನಾಡು ಭಾಗದಲ್ಲಿ. ಕೇರಳ ರಾಜ್ಯದ ವಲಸಿಗರು ವಾಣಿಜ್ಯ ಬೆಳೆಯಾಗಿ ಶುಂಠಿ ಬೆಳೆಯಲು ಪ್ರಾರಂಭಿಸಿದ್ದರಿಂದ ಇಲ್ಲಿನ ರೈತರು ಆರ್ಥಿಕವಾಗಿ ಪ್ರಗತಿ ಹೊಂದಿದ್ದಾರೆ.ಇತ್ತೀಚೆಗೆ ಹಸಿ ಶುಂಠಿಗೆ ಬೆಲೆ ಇಲ್ಲದ ಕಾರಣ ಕೆಲವರು ಒಣಶುಂಠಿ ಮಾಡಿ ವ್ಯಾಪರಕ್ಕೆ ಮುಂದಾಗಿದ್ದಾರೆ.! ಹಸಿ ಶುಂಠಿಯನ್ನು ತಕ್ಷಣವೇ ಒಣ ಶುಂಟಿ ಮಾಡಲು ಗಂಧಕವನ್ನು ಬಳಸುತ್ತಿತುವುದರಿಂದ ಪರಿಸರದ ಜೊತೆಗೆ ಜನಸಾಮಾನ್ಯರ ಆರೋಗ್ಯದ ಮೇಲು ಕೆಟ್ಟ ಪರಿಣಾಮ ಬೀರುತ್ತಿದೆ.
ಹೊಸನಗರ, ಸಾಗರ, ತೀರ್ಥಹಳ್ಳಿ, ಶಿಕಾರಿಪುರ, ಸೊರಬ, ಶಿವಮೊಗ್ಗ ಗ್ರಾಮಾಂತರ ಪ್ರದೇಶಗಳಲ್ಲಿ ಅಧಿಕೃತ ಹಾಗೂ ಅನಧಿಕೃತವಾಗಿ ಶುಂಠಿ ವಹಿವಾಟು ನಡೆಸುವ ವ್ಯಾಪಾರಸ್ಥರ ಸಂಖ್ಯೆ 500 ಕ್ಕಿಂತ ಅಧಿಕ ಸಂಖ್ಯೆಯಲ್ಲಿ ಬೀಡು ಬಿಟ್ಟಿದ್ದಾರೆ.! ಹಳ್ಳಿಗಳಲ್ಲಿ ನೂರಾರು ಒಣ ಶುಂಠಿಯ ಕಣಗಳಿವೆ. ಇಲ್ಲಿ ನಿತ್ಯ ಸಾವಿರಾರು ಮಹಿಳೆಯರು ಮತ್ತು ಕೃಷಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ಪ್ರತಿ ಒಂದು ಕ್ವಿಂಟಾಲ್ ಹಸಿ ಶುಂಠಿಗೆ 300 ಗ್ರಾಂ. ಗಂಧಕವನ್ನು ಬಳಸಲಾಗುತ್ತಿದೆ ಎಂದು ಹೇಳಲಾಗಿತ್ತಿದ್ದು.!ಈ ಗಂಧಕವನ್ನು ಬೆರಸಿ ತಿಕ್ಕಿದ ಹಸಿಶುಂಠಿ ಬಹು ಬೇಗನೆ ಒಣಗುತ್ತದೆ. ಜೊತೆಗೆ ಒಣಗಿದ ನಂತರ ಶುಂಠಿಗೆ ಹೊಳಪಿನ ಡಿಲಕ್ಸ್ ಕಲರ್ ಬರುತ್ತದೆಯಂತೆ.! ಒಣ ಶುಂಠಿ ತಯಾರು ಮಾಡುವಾಗ ಎರಡು ಬಾರಿ ಗಂಧಕ ಬಳಸುತ್ತಾರೆ. ಬಳಿಕ ಒಣ ಶುಂಠಿ ಆಕರ್ಷಣೆ ಹೊಂದುತ್ತದೆ. ಹೀಗಾಗಿ ಅಧಿಕವಾಗಿ ಗಂಧಕ ಬಳಸಲಾಗುತ್ತಿದೆ ಎನ್ನುತ್ತಾರೆ ಶುಂಠಿ ಕಣದಲ್ಲಿ ಕೆಲಸ ಮಾಡುವವರೊಬ್ಬರು.
ಒಣ ಶುಂಠಿ ಕಣದಿಂದ ಸುಮಾರು ಎರಡು ಮೂರು ಕಿ.ಮೀ.ಅಂತರದಲ್ಲಿ ಶುಂಠಿ ಸಂಸ್ಕರಣೆಗೆ ಬಳಸುವ ಗಂಧಕದ ಹೊಗೆಯ ದುರ್ನಾತ ಯಾವ ವ್ಯಕ್ತಿಯು ಸಹಿಸಲು ಸಾಧ್ಯವಿಲ್ಲ.ಅ ಮಟ್ಟದಲ್ಲಿ ದುರ್ನಾತ ಪರಿಸರವನ್ನು ಹಾಳುಗೇಡುವುತ್ತಿದೆ. ಶುಂಠಿಗೆ ಗಂಧಕ ಬಳಸುವುದರಿಂದ ಈಗಾಗಲೇ ಅನಾರೋಗ್ಯ ಪೀಡಿತರಿಂದ ದೂರುಗಳು, ಕೆಲವೆಡೆ ಗಲಾಟೆ, ವಿರೋಧಗಳು ವ್ಯಕ್ತವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಗಮನಹರಿಸಿ,ಪರಿಸರದ ಜೋತೆಗೆ ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬಿರುತ್ತಿರುವ ಈ ಗಂಧಕ ಬಳಕೆಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶುಂಠಿ ಕಣದ ಸುತ್ತಮುತ್ತಲಿನ ಪರಿಸರದಲ್ಲಿ ಗಂಧಕದ ಹೊಗೆಯಿಂದ ವಾತಾವರಣ ಕಲುಷಿತಗೊಂಡು ಆರೋಗ್ಯದಲ್ಲಿ ತೀವ್ರ ಪರಿಣಾಮ ಎದುರಿಸುವಂತಾಗಿದೆ. ಈ ಬಗ್ಗೆ ಕೆಲವು ವರ್ಷಗಳ ಹಿಂದೆ ರೈತರು, ನಾಗರಿಕರ ದೂರು ನೀಡಿದ ಮೇರೆಗೆ ಅಧಿಕಾರಿಗಳು ಶುಂಠಿ ಕಣಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಗಂಧಕದ ಬಳಕೆಯಿಂದಾಗಿ ಉಂಟಾಗುವ ದುಷ್ಪರಿಣಾಮ ಬಗ್ಗೆ ವರದಿ ತಯಾರಿಸಿ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ನೀಡಿದ್ದಾರೆ. ಆದರೂ ಇಲಾಖೆಯ ವರದಿ ಧಿಕ್ಕರಿಸಿ ಪುನಃ ಒಣಶುಂಠಿ ಕಣಗಳು ತಲೆ ಎತ್ತಿ ನಿಂತಿವೆ.
ಒಣ ಶುಂಠಿಗೆ ಬಳಸುವ ಗಂಧಕದ ಹೊಗೆಯ ಸೇವನೆಯಿಂದ ಹಲವರಲ್ಲಿ ಅಸ್ತಮಾ, ಶ್ವಾಸಕೋಶ ಸಂಬಂಧಿ ಕಾಯಿಲೆ ಹಾಗೂ ರಕ್ತ ಹೀನತೆ ಕಾಣಿಸಿಕೊಳ್ಳುವುದರೊಂದಿಗೆ ವಿಚಿತ್ರ ರೋಗ ಹರಡುವ ಸ್ಥಿತಿಯಲ್ಲಿ ಸಾರ್ವಜನಿಕರು ಭಯಭೀತ ರಾಗಿದ್ದಾರೆ. ಸಾರ್ವಜನಿಕರ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬಿರುತ್ತಿರುವ ಈ ಗಂಧಕ ಬಳಕೆಗೆ ಕಡಿವಾಣ ಹಾಕಬೇಕೆಂದು ದೂರುಗಳು ಬಂದಿದ್ದು ಜನಸಾಮಾನ್ಯರ ಜೋತೆಗೆ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಗಂಧಕದ ಬಳಕೆಯನ್ನು ನಿಯಂತ್ರಿಸಲು ಪ್ರತ್ಯೇಕ ವಿಜಿಲೆನ್ಸ್ ಸ್ಕ್ವಾಡ್ ರಚಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಗಮನಹರಿಸಿಬೇಕಿದೆ.
- ✍️ ರಫ಼ಿ ರಿಪ್ಪನ್ಪೇಟೆ