ಕ್ರಿಮಿನಲ್ ಜೋತೆ ಕೈಮಿಲಾಯಿಸಿ ಅವನ ಜೊತೆಗೆ ಪೊಲೀಸ್ ಪೇದೆ ಎಸ್ಕೇಪ್.! ಈಗ ಹುಬ್ಬಳ್ಳಿ ಪೊಲೀಸರ ಅತಿಥಿ.!
ಅಶ್ವಸೂರ್ಯ/ಶಿವಮೊಗ್ಗ: ನಟೋರಿಯಸ್ ಕ್ರಿಮಿನಲ್ ಜೊತೆಗೆ ಬಂದಿದ್ದ ಗೋವಾ ಪೊಲೀಸನನ್ನು ಹಳೇ ಹುಬ್ಬಳ್ಳಿಯ ಪೊಲೀಸರು ಕಳೆದ ಶುಕ್ರವಾರ ತಡರಾತ್ರಿ ವಶಕ್ಕೆ ಪಡೆದಿದ್ದಾರೆ. ಈಗ ಆತನನ್ನು ಗೋವಾ ಪೊಲೀಸರಿಗೆ ಒಪ್ಪಿಸಿದ್ದು ಆರೋಪಿ ಕ್ರಿಮಿನಲ್ ತಲೆಮರೆಸಿಕೊಂಡಿದ್ದಾನೆ. ಹಳೇಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡಿದಿದ್ದ ಪೇದೆ ಅಮಿತ್ ನಾಯಕ ಗೋವಾ ಪೊಲೀಸ್ ಕ್ರೈಂ ಬ್ರಾಂಚ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎನ್ನುವುದು ತಿಳಿದುಬಂದಿದೆ.
ಆರೋಪಿ ಸುಲೇಮಾನ್ ಸಿದ್ದಿಕಿ ಹೈದರಾಬಾದ್, ಪುಣೆ, ದೆಹಲಿ, ಗೋವಾ ರಾಜ್ಯಗಳ ಪೊಲೀಸರಿಗೆ ಮೋಸ್ಟ್ ವಾಂಟೆಡ್ ಆಗಿದ್ದು ಈತನ ವಿರುದ್ಧ ಕೊಲೆ, ಕೊಲೆಯತ್ನ, ಬೆದರಿಕೆ, ವಂಚನೆ, ಭೂ ಮಾಫಿಯಾ ದಂಧೆ, ಸಾರ್ವಜನಿಕ ವಲಯದಲ್ಲಿ ಅವರಿವರನ್ನು ಹೆದರಿಸಿ ಬೆದರಿಸಿ ರೋಲ್ಕಾಲ್ ಮಾಡಿ ಹಣ ಕೀಳುವುದು, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಹತ್ತಕ್ಕೂ ಹೆಚ್ಚು ರಾಜ್ಯಗಳಿಗೆ ಬೇಕಾಗಿರುವ ನಟೋರಿಯಸ್ ಕ್ರಿಮಿನಲ್ ಸುಲೇಮಾನ್ ಸಿದ್ದಿಕಿಯನ್ನು ಗೋವಾ ಪೊಲೀಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿ ಕಸ್ಟಡಿಯಲ್ಲಿಟ್ಟಿದ್ದರು. ಈತನನ್ನು ಕಾಯಲು ಪೇದೆ ಅಮಿತ್ ನಾಯಕನನ್ನು ನೇಮಕ ಮಾಡಲಾಗಿತ್ತು.
ಆದರೆ ಪೇದೆ ಅಮಿತ್ ನಾಯಕ ನಟೋರಿಯಸ್ ಸುಲೇಮಾನ್ ಸಿದ್ದಿಕಿಯನ್ನು ಶುಕ್ರವಾರ ಕಸ್ಟಡಿಯಿಂದ ಬಿಟ್ಟಿದ್ದಲ್ಲದೆ, ಆತನೊಂದಿಗೆ ತಾನು ಪರಾರಿಯಾಗಿ ತಲೆಮರೆಸಿಕೊಳ್ಳಲು ಹುಬ್ಬಳ್ಳಿ ಕಡೆಗೆ ಬಂದಿದ್ದ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಗೋವಾ ಪೊಲೀಸರ ಖಚಿತ ಮಾಹಿತಿ ಮೇರೆಗೆ ಇಬ್ಬರ ಪತ್ತೆಗಾಗಿ ಕಾರ್ಯಾಚರಣೆಗೆ ಮುಂದಾಗಿದ್ದಾಗ ಪೇದೆ ಅಮಿತ ನಾಯಕ್ ಹಳೇಹುಬ್ಬಳ್ಳಿ ಠಾಣೆಗೆ ಆಗಮಿಸಿ ಶರಣಾಗಿದ್ದಾನೆ. ನಟೋರಿಯಸ್ ಕ್ರಿಮಿನಲ್ ಸುಲೇಮಾನ್ ಸಿದ್ದಿಕಿ ತಲೆಮರೆಸಿಕೊಂಡಿದ್ದಾನೆ. ಪೇದೆ ಅಮಿತ್ ನಾಯಕನನ್ನು ಗೋವಾ ಪೊಲೀಸರಿಗೆ ಒಪ್ಪಿಸಲಾಗಿದ್ದು ಪೆದೆ ಅಮಿತ್ ನಾಯಕ್ ಕ್ರಿಮಿನಲ್ ನನ್ನು ಯಾಕೆ ಕಸ್ಟಡಿಯಿಂದ ಬಿಟ್ಟ.? ಅವನ ಜೊತೆಯಲ್ಲೇ ಯಾಕೆ ಎಸ್ಕೇಪ್ ಅದ.? ಎನ್ನುವುದು ಗೋವಾ ಪೋಲಿಸರ ತನಿಖೆಯಿಂದ ಇನ್ನಷ್ಟೇ ತಿಳಿಯ ಬೇಕಿದೆ.