ಪವಿತ್ರಯಾತ್ರ ಸ್ಥಳ ಶಬರಿಮಲೆಗೆ ಲಕ್ಷಾಂತರ ಭಕ್ತರು. 29 ದಿನಗಳಲ್ಲಿ 22 ಲಕ್ಷ ಭಕ್ತರು – 164 ಕೋಟಿ ಆದಾಯ.
ASHWASURYA/SHIVAMOGGA
ಅಶ್ವಸೂರ್ಯ/ಕೇರಳ : ಶಬರಿಮಲೆ ಯಾತ್ರೆಯು ಕಳೆದ ಒಂದು ತಿಂಗಳಿಂದ ಆರಂಭವಾಗಿದ್ದು ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ಭಕ್ತರ ದಂಡೆ ಹರಿದು ಬರುತ್ತಿದೆ. ಈ ಬಾರಿ ಶಬರಿಮಲೆ ಯಾತ್ರೆಗೆ ಭಕ್ತ ಜನಸಾಗರವೇ ಹರಿದು ಬರುತ್ತಿದ್ದು, ಕಳೆದ 29 ದಿನಗಳಲ್ಲಿ 22 ಲಕ್ಷ ಮಂದಿ ಭಕ್ತರು ಸ್ವಾಮಿ ಅಯ್ಯಪ್ಪನ ದರ್ಶನಮಾಡಿ ಪುನಿತರಾಗಿದ್ದಾರೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ತಿರುವಾಂಕೂರು ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ವಂ ಬೋರ್ಡ್ ಅಧ್ಯಕ್ಷ ಪಿಎಸ್ ಪ್ರಶಾಂತ್ ಕಳೆದ ಡಿಸೆಂಬರ್ 14ರವರೆಗೆ 29 ದಿನಗಳಲ್ಲಿ 22 ಲಕ್ಷ ಮಂದಿ ಅಯ್ಯಪ್ಪ ಸ್ವಾಮಿ ಭಕ್ತರು ಶಬರಿಮಲೆಗೆ ಭೇಟಿ ನೀಡಿದ್ದಾರೆ. ಕಳೆದ ವರ್ಷದಲ್ಲಿ ಇದೇ ಅವಧಿಗೆ ಹೋಲಿಸಿದರೆ 4.51 ಲಕ್ಷ ಹೆಚ್ಚಿಗೆ ಯಾತ್ರಾರ್ಥಿಗಳು ಸ್ವಾಮಿ ಅಯ್ಯಪ್ಪನ ದರ್ಶನ ಮಾಡಿದ್ದಾರೆ. ಈ ಅವಧಿಯಲ್ಲಿ ಒಟ್ಟು 163.89 ಕೋಟಿ ರೂ ಆದಾಯ ಬಂದಿದ್ದು, ಅದರಲ್ಲಿ 82.67 ಕೋಟಿ ರೂ.ಅರವಣ (ಪ್ರಸಾದ) ಮಾರಾಟದಿಂದ ಬಂದಿದ್ದು, 52.27 ಕೋಟಿ ನೈವೇದ್ಯ ಪೆಟ್ಟಿಗೆಯಿಂದ ಸಂಗ್ರಹವಾಗಿದೆ ಎಂದರು. ಒಟ್ಟು ಆದಾಯದಲ್ಲಿ 22.76 ಕೋಟಿ ರೂ.ಗಳಷ್ಟು ಏರಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಬಾರಿ ಶಬರಿಮಲೆಯಲ್ಲಿ ಯಾತ್ರಾರ್ಥಿಗಳಿಗೆ ಕೇರಳ ಸರಕಾರ ಉತ್ತಮ ಮೂಲ ಸೌಕರ್ಯ ಕಲ್ಪಿಸಿದೆ . ಶಬರಿಮಲೆ ವಿಚಾರದಲ್ಲಿ ಕೇರಳದ ಹೈಕೋರ್ಟ್ ಸದಾ ಕಣ್ಣಿಟ್ಟಿರುವುದರಿಂದ ಕೇರಳ ಸರಕಾರ ಈ ಬಾರಿ ಯಾವುದೇ ಗೊಂದಲವಾಗದಂತೆ ಕೆಲಸ ನಿರ್ವಹಿಸುತ್ತಿದೆ.