ಶಿವಮೊಗ್ಗ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಯಿತು
ASHWASURYA/SHIVAMOGGA
ಸುಧೀರ್ ವಿಧಾತ
ಅಶ್ವಸೂರ್ಯ/ಶಿವಮೊಗ್ಗ; ಕರ್ನಾಟಕ ಪೊಲೀಸ್ ಕಾಯ್ದೆಯು 1963 ರಲ್ಲಿ ಅಸ್ತಿತ್ವಕ್ಕೆ ಬಂದ ನಂತರ ದಿನಾಂಕ: 02-04-1965 ರಂದು ಸರ್ಕಾರವು ಪೊಲೀಸ್ ಇಲಾಖೆಗೆ ಪ್ರತ್ಯೇಕ ಧ್ವಜವನ್ನು ರೂಪಿಸಿ, ಇಲಾಖೆಗೆ ಹಸ್ತಾಂತರಗೊಳಿಸಿರುತ್ತದೆ. ಆದುದರಿಂದ ಪ್ರತಿ ವರ್ಷ ಏಪ್ರಿಲ್ 2ನೇ ದಿನಾಂಕದಂದು ಪೊಲೀಸ್ ಧ್ವಜಾ ದಿನಾಚರಣೆಯನ್ನು ರಾಜ್ಯದಾದ್ಯಾಂತ ಆಚರಿಸಲಾಗುತ್ತಿದೆ ಮತ್ತು ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾಡಿರುವ ಶ್ಲಾಘನೀಯ ಸೇವೆಯನ್ನು ಸ್ಮರಿಸಿ, ಅವರಿಗಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಇವರ ಕ್ಷೇಮಾಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು “ನಿವೃತ್ತ ಪೊಲೀಸರ ಕಲ್ಯಾಣ ನಿಧಿಯನ್ನು” ಸ್ಥಾಪಿಸಲಾಗಿದೆ. ಇದರ ಪ್ರಯುಕ್ತ ಈ ದಿನದಂದು ಪೊಲೀಸ್ ಸಾಂಕೇತಿಕ ಧ್ವಜಗಳನ್ನು ಪೊಲೀಸ್ ಅಧಿಕಾರಿಗಳಿಗೆ, ಆಹ್ವಾನಿತ ಉನ್ನತ ಅಧಿಕಾರಿಗಳಿಗೆ, ಗಣ್ಯರಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡಿ ಸಂಗ್ರಹವಾಗಿ ಬಂದ ಹಣದಲ್ಲಿ ಶೇಕಡಾ 50 ರಷ್ಟು ಮೊತ್ತವನ್ನು ಘಟಕದ ನಿವೃತ್ತ ಕ್ಷೇಮ ನಿಧಿಗೆ ಮತ್ತು ಶೇಕಡಾ 50 ರಷ್ಟು ಮೊತ್ತವನ್ನು ಕೇಂದ್ರ ಕಲ್ಯಾಣ ನಿಧಿಗೆ ಜಮಾ ಮಾಡಲಾಗುತ್ತದೆ.
ಈ ದಿನ ದಿನಾಂಕ 02-04-2024 ರಂದು ಬೆಳಗ್ಗೆ ಶಿವಮೊಗ್ಗ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಗಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಿಥುನ್ ಕುಮಾರ್. ಜಿ. ಕೆ. ಐಪಿಎಸ್, ಮಾನ್ಯ ಪೋಲಿಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆಯವರು ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಗಂಗಾಧರಪ್ಪ, ನಿವೃತ್ತ ಅರ್.ಎಸ್.ಐ, ಡಿಎಆರ್, ಶಿವಮೊಗ್ಗರವರು ಆಗಮಿಸಿ, ಪೊಲೀಸ್ ತುಕಡಿಗಳಿಂದ ಗೌರವ ವಂದನೆಗಳನ್ನು ಸ್ವೀಕರಿಸಿದರು. ಶ್ರೀ ರುದ್ರೇಶ್, ಆರ್. ಪಿ. ಐ ರವರು ಪೆರೇಡ್ ಕಮಾಂಡರ್ ಆಗಿ ನೇತೃತ್ವವನ್ನು ವಹಿಸಿದ್ದರು.
ದಿನಾಂಕ: 01-04-2023 ರಿಂದ ದಿನಾಂಕ: 31-03-2024 ರವರೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ನಲ್ಲಿ ಕರ್ತವ್ಯ ನಿರ್ವಹಿಸಿದ 03 ಪಿಎಸ್ಐ, 01 ಮಹಿಳಾ ಪಿಎಸ್ಐ, 23 ಎಎಸ್ಐ, 02 ಆರ್.ಎಸ್.ಐ, 04 ಎ.ಆರ್.ಎಸ್.ಐ, 01 ಸಿಹೆಚ್ಸಿ, 03 ಸಿಪಿಸಿ ಮತ್ತು 1 ಎಫ್.ಡಿ.ಎ ಸೇರಿದಂತೆ ಒಟ್ಟು 38 ಜನ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳು ನಿವೃತ್ತಿ ಹೊಂದಿದ್ದು, ಇವರುಗಳ ಸೇವೆಯನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ, ಶ್ರೀ ಕಾರಿಯಪ್ಪ ಎ ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ ಹಾಗೂ ಶಿವಮೊಗ್ಗ ಜಿಲ್ಲೆಯ ಎಲ್ಲಾ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರು,
ಪೋಲಿಸ್ ಉಪಾಧೀಕ್ಷಕರುಗಳು, ಪೋಲಿಸ್ ವೃತ್ತ ನಿರೀಕ್ಷಕರು / ಪೋಲಿಸ್ ನಿರೀಕ್ಷಕರು, ಪೋಲಿಸ್ ಉಪ ನಿರೀಕ್ಷಕರು, ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಕುಟುಂಬ ವರ್ಗದವರು ಹಾಜರಿದ್ದರು.