ಬೆಂಗಳೂರು : 7 ಕೋಟಿ ದರೋಡೆ ಪ್ರಕರಣ, ಗೋವಿಂದಪುರ ಠಾಣೆ ಕಾನ್ಸ್ಟೇಬಲ್ ಸೇರಿ ಇಬ್ಬರ ಬಂಧನ.!
news.ashwasurya.in
ಅಶ್ವಸೂರ್ಯ/ಬೆಂಗಳೂರು: ರಾಜಧಾನಿ ಬೆಂಗಳೂರು ಸದಾ ಜನಜಂಗುಳಿಯಿಂದ ಕೂಡಿರುವ ನಗರ.ಯಾವುದೇ ರಸ್ತೆಯಲ್ಲೂ ವಾಹನಗಳ ಸಂಚಾರ ದಟ್ಟವಾಗಿರುತ್ತದೆ. ಬೆಂಗಳೂರು ಟ್ರಾಫಿಕ್ ನಲ್ಲಿ ಸಂಚರಿಸುವುದೇ ಹರಸಹಾಸವೇ ಹೌದು. ಇಂತಹ ಜನಜಂಗುಳಿ ಇದ್ದು ನಗರದ ಡೈರಿ ಸರ್ಕಲ್ನಲ್ಲಿ ಮಟ-ಮಟ ಮಧ್ಯಾಹ್ನವೇ 7 ಕೋಟಿ ಹಣವನ್ನು ದರೋಡೆ ಮಾಡಿದ ಘಟನೆಯೊಂದು ನಡೆದು ಹೋಗಿದೆ. ಒಂದು ಕಡೆ ಜನಸಂದಣಿ ಮತ್ತೊಂದು ಕಡೆ ಬಿಟ್ಟು ಬಿಡದೆ ವಾಹನಗಳ ಸಂಚಾರ ಇರುವ ಏರಿಯಾದಲ್ಲಿ ಬರೋಬ್ಬರಿ 7 ಕೋಟಿ 11 ಲಕ್ಷ ಹಣವನ್ನು ದೋಚಿ ದರೋಡೆಕೋರರು ಸಿನಿಮಿಯಾ ರೀತಿಯಲ್ಲಿ ಎಸ್ಕೇಪ್ ಆಗಿದ್ದಾರೆ. ಇದೀಗ ಪ್ರಕರಣದ ಬೆನ್ನತ್ತಿರುವ ಪೊಲೀಸರು ಗೋವಿಂದಪುರ ಠಾಣೆಯ ಕಾನ್ಸ್ಟೇಬಲ್ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.!

ದರೋಡೆಕೋರರಿಗೆ ಇನ್ನೋವಾ ಕಾರು ಕೊಟ್ಟಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಚಿತ್ತೂರು ಗುಡಿಪಲ್ಲಿ ಬಳಿ ಪತ್ತೆಯಾಗಿದ್ದ ಕಾರು ಎಂಜಿನ್ನ ಚಾರ್ಸಿ ನಂಬರ್ ಆಧರಿಸಿ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚಾರ್ಸಿ ನಂಬರ್ ಆಧಾರದ ಮೇಲೆ ಮೂಲ ಮಾಲೀಕನನ್ನು ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಕಾರನ್ನು ಮಾರಾಟ ಮಾಡಿರುವುದು ಗೊತ್ತಾಗಿದೆ. ಇಬ್ಬರು ಬಂದು ಕಾರು ಖರೀದಿಸಿದ್ದಾರೆ ಅಂತ ಮೊದಲ ಮಾಲೀಕರು ಹೇಳಿದ್ದಾರೆ. ಆ ಬಳಿಕ ದರೋಡೆಗೆ ಉದ್ದೇಶಪೂರಿತವಾಗಿಯೇ ಕಾರನ್ನು ಕೊಟ್ಟಿರ ಬಹುದಾ? ಅನ್ನುವ ದಿಕ್ಕಿನಲ್ಲೂ ವಿಚಾರಣೆ ನಡೆಸಲಾಗುತ್ತಿದೆ.
ಇನ್ನೂ ದರೋಡೆಕೋರರು ಚಿತ್ತೂರು ಮೂಲದವರೇ ಆಗಿದ್ದಾರೆ. ಅದೇ ಕಾರಣಕ್ಕೆ ಚಿತ್ತೂರು ಬಳಿಯೇ ದರೋಡೆಗೆ ಬಳಸಿದ ವಾಹನ ಬಿಟ್ಟು ಪರಾರಿಯಾಗಿದ್ದಾರೆ ಎಂಬುದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.
ಪೊಲೀಸ್ ಕಾನ್ಸ್ಟೇಬಲ್ ಸೇರಿ ಇಬ್ಬರ ಬಂಧನ.!

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡು ವಿಶೇಷ ತಂಡಗಳನ್ನು ರಚಿಸಿ ಕಾರ್ಯಚರಣೆಗೆ ಇಳಿದ ಪೊಲೀಸರು, ಗೋವಿಂದಪುರ ಠಾಣೆಯ ಕಾನ್ಸ್ಸ್ಟೇಬಲ್ ಅಣ್ಣಪ್ಪನಾಯ್ಕ್, ಕೇರಳ ಮೂಲದ ದೇವಿಯರ್ ಇಬ್ಬರನ್ನು ಬಂಧಿಸಿದ್ದಾರೆ.! ನಿನ್ನೆ ರಾತ್ರಿಪಾಳಿಯಲ್ಲಿಯೇ ಇದ್ದ ಅಣ್ಣಪ್ಪನಾಯ್ಕ್ ಇಂದು ಬೆಳಗ್ಗೆ ಕೆಲಸ ಮುಗಿಸಿ ಮನೆಗೆ ಹೋಗುವಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೇವಿಯರ್ ಸಿಎಂಎಸ್ ಸಂಸ್ಥೆಯ ಮಾಜಿ ನೌಕರನಾಗಿದ್ದು, ಕೆಲ ದಿನಗಳ ಹಿಂದೆ ಕೆಲಸ ಬಿಟ್ಟಿದ್ದ. ಅಲ್ಲದೇ ದೇವಿಯರ್ ಅಣ್ಣಪ್ಪ ನಾಯ್ಕ್ ಕಳೆದ 6 ತಿಂಗಳಿಂದ ಸ್ನೇಹಿತರಾಗಿದ್ದರು. ಈ ಹಿಂದೆಯೂ ಅಪರಾಧ ಕೆಲಸಗಳಲ್ಲಿ ಪರಿಚಯ ಆಗಿದ್ದ ಎನ್ನಲಾಗ್ತಿದೆ. ದರೋಡೆಗೆ ಸಾಕಷ್ಟು ದಿನಗಳಿಂದ ಪ್ಲ್ಯಾನ್ ಮಾಡಿಕೊಂಡಿದ್ದರು ಅನ್ನೋ ಆರೋಪಗಳೂ ಕೇಳಿಬಂದಿವೆ.
7 ಕೋಟಿಯ ದೊಡ್ಡ ಮೊತ್ತವನ್ನು ದರೋಡೆಮಾಡಿ ದರೋಡೆಕೋರರು ಹೋಗಿದ್ದಾದರು ಎಲ್ಲಿಗೆ.?
ಈ ದರೋಡೆ ಪ್ರಕರಣ ಕ್ಷಣಕ್ಷಣಕ್ಕೂ ಒಂದೊಂದು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸಿಎಂಎಸ್ ಏಜೆನ್ಸಿಯ ಇಬ್ಬರು ಸಿಬ್ಬಂದಿ ಮೇಲೆಯೇ ಅನುಮಾನ ಶುರುವಾಗಿತ್ತು. ಸಿಬ್ಬಂದಿಯ ಸಹಾಯದಿಂದಲೇ 7 ಕೋಟಿ ಹಣ ದರೋಡೆಯಾಗಿರುವ ಶಂಕೆ ವ್ಯಕ್ತವಾಗಿದೆ. ದರೋಡೆ ನಡೆದ 45 ನಿಮಿಷಗಳ ಬಳಿಕ ವಾಹನದಲ್ಲಿದ್ದ ಚಾಲಕ ಹಾಗೂ ಸಿಬ್ಬಂದಿ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ, ಘಟನೆ ನಡೆದು 1 ಕಿಲೋ ಮೀಟರ್ ದೂರದಲ್ಲಿ ಪೊಲೀಸ್ ಠಾಣೆ ಇದ್ದರೂ ಮಾಹಿತಿ ನೀಡುವುದಕ್ಕೆ ವಿಳಂಬ ಮಾಡಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ದರೋಡೆಕೋರರು ವೆಲ್ಲೂರು ಮೂಲಕ ಆಂಧ್ರಪ್ರದೇಶ ತಲುಪಿರುವ ಶಂಕೆ ವ್ಯಕ್ತವಾಗಿದ್ದು. ಅವರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.ದರೋಡೆಯ ವಿಷಯ ತಿಳಿಯುತ್ತಿದ್ದಂತೆ ನಾಕಾಬಂಧಿ ಹಾಕಿದರು ಯಾವುದೇ ಪ್ರಯೋಜನವಾಗಲಿಲ್ಲ
ಘಟನೆ ನಡೆದ ಒಂದು ಗಂಟೆಯ ಬಳಿಕ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.!

ದರೋಡೆ ನೆಡೆದ ಘಟನಾ ಸ್ಥಳಕ್ಕೆ ಬಂದ ಪೊಲೀಸರು, ಸೋಕೋ ಟೀಂ, ಶ್ವಾನ ದಳ ಸಿಬ್ಬಂದಿಯಿಂದ ಸ್ಥಳ ಪರಿಶೀಲನೆ ನಡೆಸಿದ್ದರು, ಆದರೆ ಪೊಲೀಸರು ಎಚ್ಚೆತ್ತುಕೊಳ್ಳುವಷ್ಟರಲ್ಲಿ ದರೋಡೆಕೋರರು ಹಣದೊಂದಿಗೆ ರಾಜ್ಯದ ಗಡಿಯನ್ನು ದಾಟಿ ಹೋಗಿದ್ದಾರೆ ಎನ್ನಲಾಗಿದೆ. ಅತ್ತ ಬೆಂಗಳೂರಿನಾದ್ಯಂತ ನಾಕಾಬಂಧಿ ಹಾಕಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಪ್ರತಿಯೊಂದು ಟೋಲ್ನ ಸಿಸಿಟಿವಿ ದೃಶ್ಯಾವಳಿಗಳನ್ನು ಕಲೆ ಹಾಕಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ದರೋಡೆ ಮಾಡಿದ ಹಣದೊಂದಿಗೆ ಎಲೆಕ್ಟ್ರಾನಿಕ್ ಸಿಟಿ ಕಡೆಯಿಂದ ಹೋಗಿದ್ದು ಎಲ್ಲಿಗೆ.? ಅತ್ತಿಬೆಲೆ ಮೂಲಕ ತಮಿಳುನಾಡು ಕಡೆ ಹೋದ್ರಾ? ಹೊಸೂರಿನಿಂದ ಆಂಧ್ರಪ್ರದೇಶ ಕಡೆ ಹೋದ್ರಾ..? ಎಂಬುದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು ದರೋಡೆಕೋರರ ಬಂಧನದ ನಂತರವೇ ಅಸಲಿ ಸತ್ಯ ಬಯಲಾಗಲಿದೆ.

ನಗರದಲ್ಲಿ ನಿನ್ನೆ 7 ಕೋಟಿ ಹಣ ದರೋಡೆ ಮಾಡಿ ಪರಾರಿಯಾಗಿರುವ ಆರೋಪಿಗಳ ಬಂಧನಕ್ಕಾಗಿ 16 ತಂಡಗಳನ್ನು ರಚಿಸಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ತಿಳಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು ಈ ಎಲ್ಲಾ ತಂಡಗಳು ಒಂದೊಂದು ಮಾಹಿತಿಗಳನ್ನು ಸಂಗ್ರಹಿಸುತ್ತಿವೆ. ಒಂದು ತಂಡ ಸಿಸಿ ಕ್ಯಾಮೆರಾಗಳನ್ನು, ಇನ್ನೊಂದು ತಂಡ ಮೊಬೈಲ್ ಟವರ್ಗಳನ್ನು ಹೀಗೆ ಎಲ್ಲಾ ತಂಡಗಳು ಒಂದೊಂದು ಮಾಹಿತಿಗಳನ್ನು ಕಲೆಹಾಕುತ್ತಿವೆ ಎಂದು ಹೇಳಿದರು. ಇದುವರೆಗೂ ಆರೋಪಿಗಳು ಸಿಕ್ಕಿಲ್ಲ. ಬೇರೆ ರಾಜ್ಯಕ್ಕೆ ಪರಾರಿಯಾಗಿರುವ ಶಂಕೆ ಇದೆ. ನಮ ಟೀಮ್ ಕಾರ್ಯಾಚರಣೆ ಮಾಡುತ್ತಿವೆ. ಆದಷ್ಟು ಬೇಗ ಬಂಧಿಸುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದರೋಡೆ ನಡೆದ 2 ಗಂಟೆಗಳ ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ತಡ ಮಾಡಿದ್ದರಿಂದಾಗಿ ಆರೋಪಿಗಳನ್ನು ನಗರದಲ್ಲಿ ಬಂಧಿಸಲು ಸಾಧ್ಯವಾಗಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.


