ಬೆಳ್ತಂಗಡಿ : ಧರ್ಮಸ್ಥಳ ಷಡ್ಯಂತ್ರದ ಸತತ 3ನೇ ದಿನವು ಸುಜಾತ ಭಟ್ ಗೆ ಎಸ್ಐಟಿ ವಿಚಾರಣೆ.?ಎಲ್ಲವನ್ನೂ ಬಾಯಿ ಬಿಟ್ರಾ ಭಟ್.?
news.ashwasurya.in
ಅಶ್ವಸೂರ್ಯ/ಬೆಳ್ತಂಗಡಿ : ತನ್ನ ಪುತ್ರಿ ಅನನ್ಯ ಭಟ್ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿ ದೊಡ್ಡ ಸುದ್ದಿ ಮಾಡಿದ್ದ ಸುಜಾತ ಭಟ್ ಅವರ ಮುಖವಾಡ ಕಳಚಿ ಬಿದ್ದಿದೆ.!ಸುಜಾತ ಕಟ್ಟಿದ ಕಥೆ ಸುಳ್ಳು ಎಂದು ಬಯಲಾಗುತ್ತಿದ್ದಂತೆ ಪ್ರಕರಣಕ್ಕೆ ಸಂಬಂಧಿಸಿ ದೂರುದಾರೆ ಸುಜಾತಾ ಭಟ್ ಅವರನ್ನು ಎಸ್ಐಟಿ ಅಧಿಕಾರಿಗಳು ಸತತ ಮೂರನೇ ದಿನ ಬೆಳ್ತಂಗಡಿ ಎಸ್ಐಟಿ ಕಚೇರಿಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದರು.
ಎಸ್ಐಟಿ ತನಿಖೆಗೆ ದಿಗಿಲು ಬಿದ್ದಿರುವ ಸುಜಾತಾ ಭಟ್ ದೂರು ವಾಪಸ್ ಪಡೆಯುವುದಾಗಿ ಅಧಿಕಾರಿಗಳಿಗೆ ಮನವಿ ಮಾಡಿದರಾದರೂ, ದೂರು ವಾಪಸ್ಗೆ ಎಸ್ಐಟಿ ಅಧಿಕಾರಿಗಳು ಸಮ್ಮತಿ ನೀಡಲಿಲ್ಲ.

ಮೊದಲು, ಅನನ್ಯಾ ಭಟ್ ತನ್ನ ಪುತ್ರಿ, ಧರ್ಮಸ್ಥಳಕ್ಕೆ ಹೋದವಳು ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ತನಿಖೆ ನಡೆಸಿ ಎಂದು ಎಸ್ಐಟಿಗೆ ದೂರು ನೀಡಿದ್ದ ಸುಜಾತಾ ಭಟ್, ಬಳಿಕ, ತಾನು ಮಾಡಿದ ಆರೋಪ ಸುಳ್ಳು ಎಂದು ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದರು. ಇದೀಗ ವಿಚಾರಣೆ ಎದುರಿಸುತ್ತಿರುವ ಸುಜಾತಾ, ಎಸ್ಐಟಿ ಅಧಿಕಾರಿಗಳ ಪ್ರಶ್ನೆಗೆ ದಿಕ್ಕು ಕಾಣದಂತೆ ತಬ್ಬಿಬ್ಬಾಗಿದ್ದಾರೆ. ದಯವಿಟ್ಟು, ನನ್ನನ್ನು ಬಿಟ್ಟು ಬಿಡಿ, ನಾನು ಮಾಡಿದ ಆರೋಪ ಎಲ್ಲವೂ ಸುಳ್ಳು. ಇಲ್ಲಿಗೇ ಬಿಟ್ಟು ಬಿಡಿ ಎಂದು ಕಣ್ಣೀರಿಟ್ಟಿದ್ದಾರೆ ಎಂದು ಹೇಳಲಾಗಿದೆ. ಇದೇ ವೇಳೆ, ಈ ಷಡ್ಯಂತ್ರದ ಹಿಂದಿರುವ ವ್ಯಕ್ತಿಗಳ ಹೆಸರನ್ನೂ ಬಹಿರಂಗಪಡಿಸಿದ್ದಾರೆ. ಎಸ್ಐಟಿ ಅಧಿಕಾರಿಗಳ ಮುಂದೆ ಧರ್ಮಸ್ಥಳ ವಿರುದ್ಧ ಸುಳ್ಳಿನ ಕಥೆಗಳನ್ನು ಹೆಣೆದು ಆರೋಪ ಹೊರಿಸಲು ಹೇಳಿದವರ ಹೆಸರನ್ನು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಎಸ್ಐಟಿ ತನಿಖಾಧಿಕಾರಿ ಗುಣಪಾಲ್ ಅವರು ನಡೆಸುತ್ತಿರುವ ವಿಚಾರಣೆಯಲ್ಲಿ ಸುಜಾತಾ ಭಟ್ ಸುಳ್ಳಿನ ಕಂತೆಗಳು ಹೊರ ಬಂದಿವೆ ಎಂದು ತಿಳಿದು ಬಂದಿದೆ.

ಆ.26ರ ಬೆಳಗ್ಗೆ 5 ಗಂಟೆಗೆ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಆಗಮಿಸಿದ್ದ ಸುಜಾತಾ ಭಟ್ರನ್ನು ರಾತ್ರಿ 8.45ರವರೆಗೆ ವಿಚಾರಣೆ ನಡೆಸಲಾಗಿತ್ತು. ಆ.27ರ ಬುಧವಾರ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9.30ರವರೆಗೆ ಅವರ ವಿಚಾರಣೆ ನಡೆದಿತ್ತು. ಗುರುವಾರ ಬೆಳಗ್ಗೆ 11ರಿಂದ ಸುಮಾರು 6 ತಾಸು ವಿಚಾರಣೆ ನಡೆಯಿತು.ಇದೇ ವೇಳೆ, ವಿಚಾರಣೆ ಸಮಯದಲ್ಲಿ ಸುಜಾತಾ ಅವರು ಒತ್ತಡಕ್ಕೆ ಮಣಿದು ಸುಳ್ಳು ಹೇಳಿದೆ, ದಯವಿಟ್ಟು ನನ್ನನ್ನು ಬಿಟ್ಟುಬಿಡಿ ಎಂದು ಎಸ್ಐಟಿ ಎದುರು ಅಂಗಲಾಚಿದ್ದಾರೆ. ಆದರೆ, ಸುಳ್ಳು ಹೇಳಿದ್ದಕ್ಕಾಗಿ ಸುಜಾತಾ ಭಟ್ ಅವರನ್ನು ಎಸ್ಐಟಿ ಬಂಧಿಸುವ ಸಾಧ್ಯತೆಯು ಹೆಚ್ಚಿದೆ.
ವಿಚಾರಣೆ ವೇಳೆ ಎಸ್ಐಟಿ ಅಧಿಕಾರಿಗಳು, ಸುಳ್ಳು ಪ್ರಕರಣ ದಾಖಲಿಸಿರುವ ಉದ್ದೇಶ, ಇದಕ್ಕೆ ಪ್ರೇರಣೆ, ಸಹಕರಿಸಿದವರ ಮಾಹಿತಿ ಪಡೆಯುತ್ತಿದ್ದಾರೆ. ಸುಜಾತಾ ಭಟ್ ಅವರ ಆದಾಯ, ಆಶ್ರಯ, ಪೂರ್ವಾಪರ ಕುರಿತು ಪ್ರಶ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಉಡುಪಿ ಜಿಲ್ಲೆಯ ಪರ್ಕಾಳ ಮೂಲದವರಾದ ಸುಜಾತಾ ಭಟ್ ಕುಟುಂಬಕ್ಕೆ ಸೇರಿದ ಭೂಮಿಯನ್ನು ಧರ್ಮಸ್ಥಳಕ್ಕೆ ಬಿಟ್ಟು ಕೊಡಲಾಗಿತ್ತಂತೆ. ಇದೇ ಕಾರಣಕ್ಕೆ ರಚ್ಚಿಗೆದ್ದು ಧರ್ಮಸ್ಥಳವನ್ನು ಟಾರ್ಗೆಟ್ ಮಾಡಿ ಈ ರೀತಿ ಹಗೆ ತೀರಿಸಲು ಮುಂದಾಗಿದ್ದರು ಎಂದು ಹೇಳಲಾಗುತ್ತಿದೆ.
ಎಸ್ಐಟಿ ವಿಚಾರಣೆ ವೇಳೆ ಸುಜಾತ ಭಟ್ ಪದೇ ಪದೇ ಕಣ್ಣೀರು ಹಾಕುತ್ತಿದ್ದು ಅಧಿಕಾರಿಗಳಿಗೆ ಸುಜಾತಾ ಭಟ್ ವಿಚಾರಣೆ ಸವಾಲಾಗಿದೆ. ಸುಜಾತಾ ಭಟ್ ಅವರು ತನ್ನನ್ನು ಬಿಟ್ಟುಬಿಡುವಂತೆ ಮನವಿ ಮಾಡಿಕೊಂಡಿದ್ದಾರೆ.ಅಧಿಕಾರಿಗಳು ಸುಜಾತಾ ಭಟ್ ಅವರನ್ನು ಸಮಾಧಾನಪಡಿಸಿ ಮತ್ತೆ ವಿಚಾರಣೆ ನಡೆಸುವುದು ಎಸ್ಐಟಿ ಅಧಿಕಾರಿಗಳಿಗೆ ತಲೆನೋವಿನ ಕೆಲಸವಾಗುತ್ತಿದೆ.
ಎಸ್ಐಟಿ ವಿಚಾರಣೆ ಮುಗಿದ ನಂತರ ಲಾಡ್ಜ್ಗೆ ತೆರಳುವ ವೇಳೆ ಸುದ್ದಿಗಾರರ ಪ್ರಶ್ನೆಗೆ ಹರಿಹಾಯ್ದ ಸುಜಾತಾ ಭಟ್, ನನ್ನನ್ನು ಯಾಕೆ ಫಾಲೋ ಮಾಡ್ತಾ ಇದ್ದೀರಾ?. ನಾನು ನೇಣು ಹಾಕಿಕೊಂಡು ಸಾಯಬೇಕಾ?. ನೀವು ಮಾಡಿರುವುದೇ ಸಾಕು, ನಿಮ್ಮ ಸಹವಾಸ ಬೇಡ. ಇಷ್ಟರ ತನಕ ಮಾಡಿರುವುದೇ ಸಾಕು, ನಾನು ನಿಮಗೆ ಉತ್ತರ ಕೊಡುವುದಿಲ್ಲ, ಎಲ್ಲಿ ಕೊಡಬೇಕು ಅಲ್ಲಿ ಕೊಟ್ಟಿದ್ದೇನೆ. ಹೀಗೆಯೇ ಹಿಂಸಿಸಿದರೆ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಹುಷಾರ್ ಎಂದು ಮಾದ್ಯಮ ಮಂದಿಗೆ ಎಚ್ಚರಿಕೆ ನೀಡಿದರು…


