ಶಿವಮೊಗ್ಗ: ಶಿರಾಳಕೊಪ್ಪದಲ್ಲಿ ಲಂಚದ ಹಣ ಸಮೇತ ಲೋಕಾಯುಕ್ತ ದಾಳಿಗೆ ಸಿಕ್ಕಿ ಬಿದ್ದ ಅಧಿಕಾರಿ.!
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ ಪರಶುರಾಮ್ ಎಚ್. ನಾಗರಾಳ ಅವರು ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಶಿರಾಳಕೋಪ್ಪದಲ್ಲಿ ನಡೆದಿದೆ.
ಸೊರಬ ತಾಲೂಕು ಎಣ್ಣೆಕೊಪ್ಪ ಗ್ರಾಮದ ಶಾಲೆಯ ದುರಸ್ತಿ ಮತ್ತು ಅಭಿವೃದ್ಧಿ ಕಾಮಗಾರಿ ಪಿಎಂಶ್ರೀ ಯೋಜನೆಯಡಿ 77.59 ಲಕ್ಷ ರೂ. ವೆಚ್ಚದಲ್ಲಿ ಪೂರ್ಣಗೊಂಡಿತ್ತು. ಈ ಕಾಮಗಾರಿಯನ್ನು ಪಿಡಬ್ಲ್ಯುಡಿ ಗುತ್ತಿಗೆದಾರರು ಯಶಸ್ವಿಯಾಗಿ ಮುಕ್ತಾಯಗೊಳಿಸಿದ್ದರಾದರೂ, ಕಾಮಗಾರಿಯ ಬಿಲ್ ಮಂಜೂರು ಮಾಡಲು ಪರಶುರಾಮ್ ಅವರು ಶೇ.3ರಷ್ಟು ಲಂಚದ ಬೇಡಿಕೆಯನ್ನು ಮುಂದಿಟ್ಟಿದ್ದರು. ಹಸವಿ ಗ್ರಾಮದ ಗುತ್ತಿಗೆದಾರ ಲಿಂಗರಾಜ ಶಿವಪ್ಪ ಉಳ್ಳಾಗಡ್ಡಿ ಅವರು ಈ ಬಗ್ಗೆ ಶಿವಮೊಗ್ಗ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರು ಪಡೆದ ಲೋಕಾಯುಕ್ತ ಇನ್ಸ್ಪೆಕ್ಟರ್ ರುದ್ರೇಶ್ ಅವರ ನೇತೃತ್ವದಲ್ಲಿ ತಂಡವೊಂದು ದಾಳಿ ನಡೆಸಿದೆ.

ಈ ಮೊದಲು ಪರಶುರಾಮ್ ಅವರು ಲಿಂಗರಾಜರಿಂದ ಈಗಾಗಲೇ ₹1.63 ಲಕ್ಷ ಲಂಚವಾಗಿ ಪಡೆದಿದ್ದರು. ಉಳಿದ ₹70 ಸಾವಿರ ರೂ. ಹಣಕ್ಕಾಗಿ ಮತ್ತಷ್ಟು ಒತ್ತಾಯಿಸುತ್ತಿದ್ದರು. ಇದರ ಭಾಗವಾಗಿ ₹30 ಸಾವಿರ ಹಣವನ್ನು ಶಿರಾಳಕೊಪ್ಪದಲ್ಲಿ ಪಡೆಯುತ್ತಿರುವಾಗಲೇ ಲೋಕಾಯುಕ್ತ ಅಧಿಕಾರಿಗಳು ಅವರುಗಳನ್ನು ಬಲೆಗೆ ಬೀಳಿಸಿದರು. ಇವರ ವಿರುದ್ಧ ಸಂಬಂಧಿಸಿದ ಆಯಾ ವಿಧಾನದಡಿಯಲ್ಲಿ ಕಾನೂನು ಕ್ರಮ ಕೈಗೊಂಡು ತನಿಖೆ ಮುಂದುವರಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಆಗುತ್ತಿರುವ ಭ್ರಷ್ಟಾಚಾರದ ವಿರುದ್ಧ ಇಂತಹ ಕ್ರಮಗಳು ನಿಜಕ್ಕೂ ಲೋಕಾಯುಕ್ತ ಶ್ಲಾಘನೀಯವಾಗಿದೆ.


