ಬಿಎಸ್ವೈ ಹೆಸರಲ್ಲಿ ನಡೆಯುವುದು ಶಕ್ತಿ ಪ್ರದರ್ಶನವಲ್ಲ, ಗುಂಪುಗಾರಿಕೆ ಪ್ರದರ್ಶನ: ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ
ಅಶ್ವಸೂರ್ಯ/ಬಾಗಲಕೋಟೆ : ಬಿ ಎಸ್ ಯಡಿಯೂರಪ್ಪ ನವರ (B S Yediyurappa) ಹೆಸರಲ್ಲಿ ನಡೆಯುವುದು ಉತ್ಸವ ಶಕ್ತಿ ಪ್ರದರ್ಶನವಲ್ಲ,ಯಡಿಯೂರಪ್ಪನವರ ಗುಂಪುಗಾರಿಕೆ ಪ್ರದರ್ಶನ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (K S Eshwarappa) ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಈಶ್ವರಪ್ಪನವರು ಬಿಜೆಪಿ ಸಂಘಟನೆ ಉಳಿಯತ್ತದೆ ಮತ್ತೆ ಬಿಜೆಪಿ ಮತ್ತಷ್ಟು ಗಟ್ಟಿಯಾಗುತ್ತದೆ. ಪ್ರತಿ ವರ್ಷವೂ ಯಡಿಯೂರಪ್ಪನವರ ಹುಟ್ಟು ಹಬ್ಬದ ಆಚರಣೆಗೆ ಮಾಡದ ಸಮಾವೇಶ ಈಗ ಯಾಕೆ ಎಂದು ಪ್ರಶ್ನಿಸಿದರು. ಹೀಗೆ ಗುಂಪುಗಾರಿಕೆಗಾಗಿ ನಡೆಯುವ ಕೆಲಸವನ್ನು ಯಡಿಯೂರಪ್ಪ ಮೊದಲು ನಿಲ್ಲಿಸಬೇಕು ಎಂದರು.
ಬಿಜೆಪಿಯಲ್ಲಿ ಇರುವ ಗುಂಪುಗಾರಿಕೆ ಮುಂದೆ ಸರಿ ಹೋಗುತ್ತದೆ. ಈಗ ಯಾರ್ಯಾರು ಏನು ಬೇಕಾದ್ರೂ ಹಾರಾಡಬಹುದು. ಬಿಜೆಪಿ ಪಕ್ಷಕ್ಕಾಗಿ ತಪಸ್ಸು ಮಾಡಿ ಕಟ್ಟಿದವರಿಗೆ ಬೆಲೆ ಇದೆ. ಬಿಜೆಪಿಯಲ್ಲಿ ಗುಂಪುಗಾರಿಕೆ ನಡೆಯುವುದಿಲ್ಲ. ವರಿಷ್ಠರು ಅದನ್ನು ಸರಿಯಾಗಿ ಚಿವುಟಿ ಹಾಕುತ್ತಾರೆ ಎಂದು ಹೇಳಿದರು.
ರೇಣುಕಾಚಾರ್ಯ ಬಣದ ಗುಂಪು ಸಮಾವೇಶ ಮಾಡುತ್ತಿದೆ. ಅದಕ್ಕೆ ಬಿಎಸ್ವೈ ಅವರ ಒಪ್ಪಿಗೆ ಇದೆ ಇಲ್ವೋ ಗೊತ್ತಿಲ್ಲ. ಆದರೆ ಗುಂಪುಗಾರಿಕೆ ಆಗುವುದಕ್ಕೆ ಬಿಎಸ್ವೈ ಒಪ್ಪಿಗೆ ಕೊಡುತ್ತಾರೆ ಎನ್ನುವುದು ನನಗೇನು ಅನಿಸುವುದಿಲ್ಲ ಎಂದರು.
ಕಾಂಗ್ರೆಸ್ನಲ್ಲಿ ಒಳ ಒಳಗೆ ಬಡಿದಾಟವಿದೆ. ಯಾವಾಗ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ಅಂತಾ ಕಾಯುತ್ತಿದ್ದಾರೆ. ನಾಯಕರು ಸುಮ್ಮನೆ ಸಿದ್ದರಾಮಯ್ಯ ಬೆನ್ನಿಗೆ ನಾವಿದ್ದೇವೆ ಎನ್ನುತ್ತಾರೆ. ಸಿಎಂ ಬೆಂಬಲಕ್ಕೆ ಯಾರೆಲ್ಲ ನಿಂತಿದ್ದಾರೋ ಅವರೆಲ್ಲ ಸಿಎಂ ಖುರ್ಚಿ ಮೇಲೆ ಸಿಎಂ ಆಗಲು ಟವೆಲ್ ಹಾಕಿದ್ದಾರೆ. ರಥಸಪ್ತಮಿ ದಿನದಿಂದ ರಾಜ್ಯದಲ್ಲಿ ಏನೇನು ರಾಜಕೀಯ ಬದಲಾವಣೆ ಆಗುತ್ತದೆ ಕಾದು ನೋಡಬೇಕು ಎಂದು ಕಟುವಾಗಿ ನುಡಿದರು.
ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಅಂಬೇಡ್ಕರ್ ಜೀವಂತವಾಗಿದ್ದಾಗ ಕಾಂಗ್ರೆಸ್ ಪೂರ್ಣ ಪ್ರಮಾಣದಲ್ಲಿ ಅಪಮಾನ ಮಾಡಿತ್ತು. ಅಂಬೇಡ್ಕರ್ ಅವರು ಚುನಾವಣೆಗೆ ನಿಂತಾಗ ಕಾಂಗ್ರೆಸ್ ಅವರನ್ನು ಸೋಲಿಸಿತ್ತು. ಅವರು ಸಾವನ್ನಪ್ಪಿದಾಗ ದೆಹಲಿಯಲ್ಲಿ ಜಾಗವನ್ನು ಕಾಂಗ್ರೆಸ್ ಕೊಡಲಿಲ್ಲ. ಕೇಂದ್ರ ಮಂತ್ರಿಮಂಡಲದಲ್ಲಿ ಅವರು ರಾಜೀನಾಮೆ ನೀಡಲು ಮುಂದಾದಾಗ ಕೊಟ್ಟರೆ ಕೊಡಲಿ ಎಂದು ಹೇಳಿ ಸುಮ್ಮನಾಗಿದ್ದರು ಎಂದರು.