ವಕೀಲೆ ಜೀವಾ ಆತಹತ್ಯೆ ಪ್ರಕರಣ : CID ಡಿವೈಎಸ್ಪಿ ಕನಕಲಕ್ಷ್ಮಿ ಅವರಿಗೆ ಸಿಸಿಬಿ ನೋಟಿಸ್.
ಅಶ್ವಸೂರ್ಯ/ಬೆಂಗಳೂರು : ಭೋವಿ ನಿಗಮದಲ್ಲಿ ನಡೆದ ಅಕ್ರಮದ ತನಿಖೆಗೆ ಸಂಬಂಧಿಸಿದಂತೆ ವಿಚಾರಣೆಯನ್ನು ಎದುರಿಸುತ್ತಿದ್ದ ವಕೀಲೆ ಜೀವಾ ಅತಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮಿಗೆ ಜೀವಾ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಸಿದ್ದತೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಈ ಪ್ರಕರಣದ ವಿಷಯವಾಗಿ ಹೈಕೋರ್ಟ್ ಗರಂ ಆದ ಬೆನ್ನಲ್ಲೇ ಸಿಸಿಬಿ ಪೊಲೀಸರು ತಕ್ಷಣವೇ ಎಚ್ಚೆತ್ತುಗೊಂಡು ಪ್ರಕರಣದ ಸಾಕ್ಷ್ಯಗಳನ್ನು ಕಲೆ ಹಾಕಲು ಮುಂದಾಗಿದ್ದಾರೆ.
ಭೋವಿ ನಿಗಮದಲ್ಲಿನ ಬಾರಿ ಅಕ್ರಮ ಆರೋಪ ಸಂಬಂಧ ತನಿಖೆಯ ಭಾಗವಾಗಿ ವಕೀಲೆ ಉದ್ಯಮಿ ಜೀವಾ ಅವರನ್ನು ವಿಚಾರಣೆಗೆ ಕರೆಯಲು ಕಾರಣವೇನು? ಜೀವಾ ಅವರಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿದೆಯೇ, ವಿಚಾರಣೆಗಾಗಿ ಅವರು ಎಷ್ಟು ಬಾರಿ ಸಿಐಡಿ ಕಚೇರಿಗೆ ಬಂದಿದ್ದಾರೆ? ಎಂಬಿತ್ಯಾದಿ ಮಾಹಿತಿಗಳನ್ನು ಸಿಸಿಬಿ ಪೊಲೀಸರು ಕಲೆಹಾಕಲು ಮುಂದಾಗಿದ್ದಾರೆ.
ಆತಹತ್ಯೆಗೂ ಮುನ್ನ ಜೀವಾ ಅವರು ಬರೆದಿಟ್ಟಿದ್ದಾರೆ ಎನ್ನಲಾದ 13 ಪುಟಗಳ ಡೆತ್ ನೋಟ್ ಅನ್ನು ಎಫ್ಎಸ್ಎಲ್ ಗೆ ಸದ್ಯದಲ್ಲೇ ಕಳುಹಿಸಿ, ಅದರಲ್ಲಿರುವ ಬರವಣಿಗೆ ಜೀವಾ ಅವರದ ಎಂಬುವುದನ್ನು ವರದಿಯ ಆಧಾರದ ಮೇಲೆ ಖಚಿತಪಡಿಸಿಕೊಳ್ಳಲಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಜೀವಾ ಅವರಿಗೆ ಡಿವೈಎಸ್ಪಿ ಕನಕಲಕ್ಷ್ಮಿ ಸಾಕಷ್ಟು ಕಿರುಕುಳ ನೀಡಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಕಾರಣದಿಂದ ಡಿವೈಎಸ್ಪಿ ಅವರಿಗೆ ವಿಚಾರಣೆಗಾಗಿ ಸದ್ಯದಲ್ಲೇ ನೋಟಿಸ್ ನೀಡಲು ಸಿಸಿಬಿ ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಜೀವಾ ಅವರ ಆತಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಹೈಕೋರ್ಟ್ ಗೆ ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ಆತ್ಮಹತ್ಯೆ ಸ್ಥಳದಲ್ಲಿ ದೊರೆತ ಡೆತ್ ನೋಟ್ ನಲ್ಲಿ ಬರೆದಿರುವ ಆರೋಪಿಯನ್ನು ಇದುವರೆಗೆ ಏಕೆ ವಿಚಾರಣೆ ನಡೆಸಿಲ್ಲ, ಅವರ ಮೇಲೆ ಏಕೆ ಕ್ರಮಕೈಗೊಂಡಿಲ್ಲ, ಇನ್ನೂ ಏಕೆ ತನಿಖೆ ಆರಂಭಿಸಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದೆ. ಹಾಗಾಗಿ ಇದೀಗ ಸಿಸಿಬಿ ಪೊಲೀಸರು ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮಿ ಅವರಿಗೆ ವಿಚಾರಣೆಗಾಗಿ ನೋಟಿಸ್ ನೀಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.