ಬೆಂಗಳೂರು : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಚುನಾವಣಾ ಫಲಿತಾಂಶ ಪ್ರಕಟ. ವೆಂಕಟೇಶ್ ಪ್ರಸಾದ್ ಅಧ್ಯಕ್ಷರಾಗಿ ಅಯ್ಕೆ.
news.ashwasurya.in

ಅಶ್ವಸೂರ್ಯ/ಬೆಂಗಳೂರು : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಚುನಾವಣಾ ಫಲಿತಾಂಶ ಪ್ರಕಟವಾಗಿವೆ, ಭಾರಿ ಜಿದ್ದಾಜಿದ್ದಿನಿಂದ ಕೂಡಿದ ಚುನಾವಣೆ ಹೈಕೋರ್ಟ್ ವರೆಗೂ ತಲುಪಿತ್ತು. ಇಂದು ನಡೆದ ಮತದಾನದಲ್ಲಿ ವೆಂಕಟೇಶ್ ಪ್ರಸಾದ್ ಅಧ್ಯಕ್ಷರಾಗಿ ಗೆಲುವು ಕಂಡಿದ್ದಾರೆ.

ಕಳೆದ ಒಂದು ತಿಂಗಳಿಂದ KSCA ಚುನಾವಣೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆ ದೇಶದ ಗಮನಸೆಳೆದಿತ್ತು. ಒಂದೆಡೆ ಮಾಜಿ ದಿಗ್ಗಜ ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್ ಬಣ ಮತ್ತೊಂದೆಡೆ ಕೆಎನ್ ಶಾಂತಕುಮಾರ್ ಬಣ. ನಾಮಪತ್ರ ತಿರಸ್ಕೃತ, ಹೈಕೋರ್ಟ್ನಲ್ಲಿ ಪ್ರಕರಣ ಸೇರಿದಂತೆ ಹಲವು ಕಾರಣಗಳಿಂದ ಕೆಎಸ್ಸಿಎ ಚುನಾವಣೆ ಭಾರಿ ಪೈಪೋಟಿ ಎದುರಿಸಿತ್ತು. ಇಂದು (ಡಿ.07) ನಡೆದ ಚುನಾವಣೆಯಲ್ಲಿ ವಿಶ್ವ ಕಂಡ ಶ್ರೇಷ್ಠ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಬಣ ಭರ್ಜರಿ ಗೆಲುವು ಸಾಧಿಸಿದೆ. ಇದೀಗ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆಗೆ ವೆಂಕಟೇಶ್ ಪ್ರಸಾದ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ಸುಜಿತ್ ಸೋಮಸುಂದರ್ ಆಯ್ಕೆಯಾಗಿದ್ದಾರೆ.

ವೆಂಕಟೇಶ್ ಪ್ರಸಾದ್ ಜಯಭೇರಿ.
20 ಸುತ್ತುಗಳ ಮತದಾನ ಎಣಿಕೆ ಪ್ರಕ್ರಿಯೆಯಲ್ಲಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ 749 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಕೆಎಸ್ಸಿಎ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ಕೆಎನ್ ಶಾಂತಕುಮಾರ್ 558 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. 191 ಮತಗಳ ಅಂತರದಿಂದ ವೆಂಕಟೇಶ್ ಪ್ರಸಾದ್ ಗೆಲುವು ಸಾಧಿಸಿದ್ದಾರೆ. ವಂಕಟೇಶ್ ಪ್ರಸಾದ್ ಬಣ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಕಂಡಿದೆ. ಉಪಾಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ಸುಜಿತ್ ಸೋಮಸುಂದರ್ ಆಯ್ಕೆಯಾಗಿದ್ದಾರೆ.
ಕೆಎಸ್ಸಿಎ ಇತಿಹಾಸದಲ್ಲಿ

ಎರಡನೇ ದಾಖಲೆ ಮತದಾನ.!
ಈ ಬಾರಿಯ ಕೆಎಸ್ಸಿಎ ಚುನಾವಣೆ ತೀವ್ರ ಕೋಲೋಹಾಲ ಸೃಷ್ಟಿಸಿತ್ತು. ಚುನಾವಣೆ ಹೈಕೋರ್ಟ್ ಮೆಟ್ಟಿಲೇರಿದ್ದ ಕಾರಣ ಪೈಪೋಟಿ ಹೆಚ್ಚಾಗಿತ್ತು. ಇಷ್ಟೇ ಅಲ್ಲ ಚುನಾವಣಾ ಪ್ರಚಾರಗಳು ಭರ್ಜರಿಯಾಗಿ ನಡೆದಿತ್ತು. ಬೆಳಗ್ಗೆಯಿಂದ ಸಂಜೆ 7 ಗಂಟೆ ವರೆಗೆ ಮತದಾನ ಪ್ರಕ್ರಿಯೆ ನಡೆದಿತ್ತು. ಇದರ ಪರಿಣಾಮ ಈ ಬಾರಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಚುನಾವಣೆಯಲ್ಲಿ ದಾಖಲೆಯ ಮತದಾನವಾಗಿದೆ. ಈ ಬಾರಿ 1315 ಮತ ಚಲಾವಣೆಯಾಗಿದೆ. ಇದು ಇದುವರೆಗಿನ ಎರಡನೇ ಗರಿಷ್ಠ ಮತದಾನವಾಗಿದೆ. ಇದಕ್ಕೂ ಮೊದಲು 2013ರಲ್ಲಿ 1351 ಮತದಾನವಾಗಿತ್ತು.
ಒಟ್ಟಿನಲ್ಲಿ ವಿಶ್ವಕಂಡ ರಾಜ್ಯದ ಶ್ರೇಷ್ಠ ಕ್ರಿಕೆಟಿಗ ಕರ್ನಾಟಕ ರಾಜ್ಯದ ಕ್ರಿಕೆಟ್ ಸಂಸ್ಥೆಯ ಚುಕ್ಕಾಣಿ ಹಿಡಿದಿದ್ದು ನಮ್ಮೆಲ್ಲರ ಹೆಮ್ಮೆ ಎಂದರೆ ತಪ್ಪಾಗಲಾರದು….


