Headlines

ತೀರ್ಪಿಗೂ ಮುನ್ನ ಬಾಂಗ್ಲಾ ಮಾಜಿ ಪ್ರಧಾನಿ “ಶೇಖ್ ಹಸೀನಾ” ಭಾವುಕ ನುಡಿ..

ಅಶ್ವಸೂರ್ಯ/: ಬಾಂಗ್ಲಾದೇಶದ ಮಾಜಿ ಪ್ರಧಾನಿ, ಶೇಖ್ ಹಸೀನಾ ಅವರ ಭವಿಷ್ಯವನ್ನು ನಿರ್ಧರಿಸಲಿರುವ ದೇಶದ್ರೋಹ ಪ್ರಕರಣದ ತೀರ್ಪು ಇಂದು ಪ್ರಕಟವಾಗುವ ಸಾಧ್ಯತೆ ಇದ್ದು ತೀರ್ಪಿಗೂ ಮುನ್ನ ಬಾಂಗ್ಲಾದೇಶದಲ್ಲಿ ದೇಶಾದ್ಯಂತ ಮತ್ತೆ ತೀವ್ರ ಮಟ್ಟದ ಹಿಂಸಾಚಾರ ಮತ್ತು ಅಸ್ಥಿರತೆ ತಲೆದೋರಿದೆ. ಕಳೆದ ವರ್ಷ ವಿದ್ಯಾರ್ಥಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ದೇಶದಿಂದ ಪಲಾಯನ ಮಾಡಿದ್ದ ಹಸೀನಾ ಅವರು ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಮಂಡಳಿ (ICT) ಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ತೀರ್ಪು ಹೊರಬೀಳುವ ಕೆಲವೇ ಗಂಟೆಗಳ ಮೊದಲು,ಬಾಂಗ್ಲ ಮಾಜಿ ಪ್ರಧಾನಿ “ಶೇಖ್ ಹಸೀನಾ” ಅವರು ತಮ್ಮ ಅವಾಮಿ ಲೀಗ್‌ನ ಫೇಸ್‌ಬುಕ್ ಪುಟದಲ್ಲಿ ಒಂದು ಭಾವನಾತ್ಮಕ ಆಡಿಯೋ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. “ಭಯಪಡಬೇಡಿ, ಏನೂ ಆಗಿಲ್ಲ. ನಾನು ಜೀವಂತವಾಗಿದ್ದೇನೆ, ಮತ್ತು ಜೀವಂತವಾಗಿರುತ್ತೇನೆ. ನಾನು ದೇಶದ ಜನರೊಂದಿಗೆ ನಿಲ್ಲುತ್ತೇನೆ,” ಎಂದು ಅವರು ತಮ್ಮ ಬೆಂಬಲಿಗರಿಗೆ ಧೈರ್ಯ ತುಂಬಿದ್ದಾರೆ.

ತೀರ್ಪಿಗೂ ಮುನ್ನ ಬಾಂಗ್ಲಾದೇಶದ
ರಾಜಧಾನಿ ಢಾಕಾ ಸೇರಿದಂತೆ ಹಲವು ನಗರಗಳಲ್ಲಿ ಸರಣಿ ಸ್ಫೋಟಗಳು ಮತ್ತು ಬೆಂಕಿ ಹಚ್ಚುವಿಕೆ ಪ್ರಕರಣಗಳು ವರದಿಯಾಗಿವೆ. ಇದು ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಭಾನುವಾರ ತಡರಾತ್ರಿ, ಮಧ್ಯಂತರ ಸರ್ಕಾರಿ ಸಲಹೆಗಾರರಾದ ಸೈದಾ ರಿಜ್ವಾನಾ ಹಸನ್ ಅವರ ನಿವಾಸದ ಹೊರಗೆ ಎರಡು ಬಾಂಬ್‌ಗಳು ಸ್ಫೋಟಗೊಂಡಿವೆಯಂತೆ.! ಇದಲ್ಲದೆ, ಕ್ಯಾರವಾನ್ ಬಜಾರ್ ಪ್ರದೇಶದಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ಪರಿಸ್ಥಿತಿ ಗಂಭೀರವಾಗಿದೆ. ಢಾಕಾದಲ್ಲಿ ಪೊಲೀಸ್ ಠಾಣೆಯ ಆವರಣ ಮತ್ತು ಕಸ ಸುರಿಯುವ ಸ್ಥಳದಲ್ಲಿ ನಿಲ್ಲಿಸಿದ್ದ ಬಸ್‌ಗಳಿಗೂ ಬೆಂಕಿ ಹಚ್ಚಲಾಗಿದೆ.
ಮರಣದಂಡನೆಯ ಭೀತಿ ಇದೆ.

ಶೇಖ್ ಹಸೀನಾ ಅವರ ವಿರುದ್ಧದ ಆರೋಪ ಸಾಬೀತಾದಲ್ಲಿ, ಅವರು ಮರಣದಂಡನೆಯನ್ನು ಎದುರಿಸಬೇಕಾಗಬಹುದು. ತೀರ್ಪಿನ ಹಿನ್ನೆಲೆಯಲ್ಲಿ, ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ದೇಶಾದ್ಯಂತ ಭದ್ರತಾ ಪಡೆಗಳನ್ನು ಕಟ್ಟೆಚ್ಚರದಲ್ಲಿರಿಸಿದೆ. ಮೆಟ್ರೋಪಾಲಿಟನ್ ಪೊಲೀಸ್ ಆಯುಕ್ತ ಎಸ್.ಎಂ. ಸಜತ್ ಅಲಿ ಅವರು, ಹಿಂಸಾತ್ಮಕ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುವಂತೆ ಭದ್ರತಾ ಪಡೆಗಳಿಗೆ ಆದೇಶಿಸಿದ್ದಾರೆ.

ಆದಾಗ್ಯೂ, ಕಳೆದ ಜುಲೈನಲ್ಲಿ ನಡೆದ ಅಶಾಂತಿಯ ಸಮಯದಲ್ಲಿ ಯಾರ ಮೇಲೂ ಗುಂಡು ಹಾರಿಸಲು ಅಥವಾ ಕೊಲ್ಲಲು ತಾನು ಆದೇಶ ನೀಡಿಲ್ಲ ಎಂದು ಶೇಖ್ ಹಸೀನಾ ನಿರಂತರವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಬದಲಾಗಿ, ಯೂನಸ್‌ಗೆ ನಿಷ್ಠರಾಗಿರುವ ಭದ್ರತಾ ಪಡೆಗಳೇ ಹಿಂಸಾಚಾರವನ್ನು ಪ್ರಚೋದಿಸಿವೆ ಎಂದು ಅವರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!