ದಾಂಡೇಲಿ: ಮೀಟರ್ ಬಡ್ಡಿ ದಂಧೆ ವಿರುದ್ಧ ಕಾರ್ಯಾಚರಣೆ: ಇಬ್ಬರು ಬಡ್ಡಿ ಮಕ್ಕಳ ಬಂಧನ.
ಅಶ್ವಸೂರ್ಯ/ದಾಂಡೇಲಿ :ರಾಜ್ಯದಂತ ಅನಧಿಕೃತ ಮೀಟರ್ ಬಡ್ಡಿ ದಂಧೆ ಬಗ್ಗೆ ವ್ಯಾಪಕ ಚರ್ಚೆ ದೂರು ಬಂದ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಹಾಗೂ ಡಿವೈಎಸ್ಪಿ ಶಿವಾನಂದ್ ಮದರಖಂಡಿ ಅವರ ಮಾರ್ಗದರ್ಶನದಲ್ಲಿ ದಾಂಡೇಲಿ ನಗರ ಠಾಣೆಯ ಪೊಲೀಸರು ಬಡ್ಡಿ ದಂಧೆಯ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ಮೀಟರ್ ಬಡ್ಡಿ ದಂಧೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.
ಗಾಂಧಿನಗರದ ಕಂಜರಬಾಟಿನ ನಿವಾಸಿ ಕಿಶನ ಸುಭಾಷ್ ಕಂಜರಬಾಟ ಹಾಗೂ ವಿನೋದ ಸುರೇಶ್ ಮಿನೇಕರ ಎಂಬ ಇಬ್ಬರು ಬಂಧಿತ ಆರೋಪಿಗಳಾಗಿದ್ದಾರೆ.
ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎಸ್ ಬಿ ಸಜ್ಜನ್ ಅವರು ನೀಡಿದ ದೂರಿನನ್ವಯ, ಪಿಎಸ್ಐ ಗಳಾದ ಅಮೀನ್ ಅತ್ತಾರ, ಕಿರಣ್ ಪಾಟೀಲ್ ಮತ್ತು ಜಗದೀಶ್ ಅವರ ನೇತೃತ್ವದಲ್ಲಿ ದೂರುದಾರರು ಹಾಗೂ ಪೊಲೀಸ್ ಸಿಬ್ಬಂದಿಯವರೊಂದಿಗೆ ಆರೋಪಿಗಳ ಮನೆಯನ್ನು ಶೋಧನೆ ಮಾಡಲಾಯ್ತು.
ವಿನೋದ ಸುರೇಶ್ ಕಂಜರಬಾಟ್ ಈತನ ಮನೆಗೆ ದಾಳಿ ನಡೆಸಿದ ಸಂದರ್ಭದಲ್ಲಿ ಈತನ ವಶದಲ್ಲಿದ್ದ 5 ಖಾಲಿ ಚೆಕ್ ಗಳು, ಸಹಿ ಇರುವ 5 ಖಾಲಿ ಬಾಂಡ್ ಪೇಪರ್ ಗಳು, 04 ಆರ್.ಸಿ ಕಾರ್ಡ್ ಗಳನ್ನು ಜಪ್ತು ಮಾಡಿ, ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಇನ್ನೋರ್ವ ಆರೋಪಿ ಕಂಜರಬಾಟ್ ನಿವಾಸಿ ಕಿಶನ್ ಸುಭಾಷ್ ಕಂಜರಬಾಟ್ ಈತನ ಮನೆಯ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಈತನ ಮನೆಯಲ್ಲಿಯೂ ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದ 2 ಖಾಲಿ ಸ್ಟ್ಯಾಂಪ್ ಪೇಪರ್ ದೊರೆತಿದ್ದು ಅದನ್ನು ಜಪ್ತಿ ಮಾಡಿಕೊಂಡು, ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಇಬ್ಬರ ಮೇಲೆ ನಗರ ಠಾಣೆಯ ಪಿಎಸ್ಐ ಅಮೀನ್ ಅತ್ತಾರ ಅವರು ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆ
ಶಿವಮೊಗ್ಗ ನಗರದಲ್ಲೂ ಮೀಟರ್ ಬಡ್ಡಿ ದಂಧೆ ಭರ್ಜರಿಯಾಗಿ ನೆಡೆಯುತ್ತಿದೆ. ಎಷ್ಟೋ ಮಂದಿ ಬಿದಿ ವ್ಯಾಪಾರಿಗಳು ಮೀಟರ್ ಬಡ್ಡಿಗೆ ಹಣ ತೆಗೆದುಕೊಂಡು ಕಟ್ಟಲಾಗದ ಸ್ಥೀತಿ ತಲುಪ ಊರು ಬಿಡುತ್ತಿದ್ದಾರೆ. ಕೆಲವರಂತು ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.!ದಿನದ ಬಡ್ಡಿ,ಮೀಟರ್ ಬಡ್ಡಿ ಅಮಾಯಕರನ್ನು ಸಲಿಸಾಗಿ ಸಾವಿನಮನೆಗೆ ಸೇರಿಸುತ್ತಿದೆ. ಬಡ ಬಿದಿವ್ಯಾಪರಿಗಳು ಬೆಳಿಗ್ಗೆಯಿಂದ ಸಂಜೆವರೆಗೂ ಉರಿ ಬಿಸಿಲನ್ನೂ ಲೆಕ್ಕಿಸದೆ ಹಸಿದ ಹೊಟ್ಟೆಯಲ್ಲಿ ವ್ಯಾಪಾರಮಾಡಿ ಸಂಜೆ ಹೋತ್ತಿಗೆ ಬಡ್ಡಿ ದಂಧೆಕೋರರ ಕೈಯಿಗೆ ದುಡಿದ ಹಣವನ್ನು ನೀಡುವುದು ಪರಿಪಾಠವಾಗಿದೆ.ದಯವಿಟ್ಟು ಪೋಲಿಸ್ ಇಲಾಖೆ ಶಿವಮೊಗ್ಗ ನಗರದಲ್ಲಿ ಮಿತಿಮೀರಿದ ಮೀಟರ್ ಬಡ್ಡಿ ದಂಧೆಗೆ ಕಡಿವಾಣಹಾಕಿ ಅಕ್ರಮ ಮೀಟರ್ ಬಡ್ಡಿ ದಂಧೆಕೋರರಿಗೆ ಬಿಸಿಮುಟ್ಟಿಸ ಬೇಕಿದೆ.