ಕೊಣಂದೂರು: ಸಾಲ ಕಟ್ಟದ್ದಕ್ಕೆ ವೃದ್ಧೆಯ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ.!
Ashwasurya/Shivamogga
ಅಶ್ವಸೂರ್ಯ/ತೀರ್ಥಹಳ್ಳಿ: ಸಾಲದ ಕಂತು ಕಟ್ಟಿಲ್ಲವೆಂದ ಕಾರಣಕ್ಕ ಬ್ಯಾಂಕ್ನ ಸಿಬ್ಬಂದಿ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ವಯಸ್ಸಾದ ಪತ್ನಿಯ ಕಿವಿಯೋಲೆ ಕಿತ್ತುಕೊಂಡು ನಿಂದಿಸಿ ಹೊರದಬ್ಬಿದ ಘಟನೆ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನಲ್ಲಿ ನಡೆದಿದೆ.
ಕೊಣಂದೂರಿನಿಂದ ಕೂಗಳತೆ ದೂರದ ಬಿಲ್ಲೇಶ್ವರ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಎಸ್. ಚನ್ನವೀರಪ್ಪ ಅವರ ಪತ್ನಿ ಹಾಲಮ್ಮ (86) ಅವರಿಗೆ ಕಳೆದ ನಾಲ್ಕೈದು ತಿಂಗಳಿನಿಂದ ಪಿಂಚಣಿ ಹಣ ಬಂದಿರರಲಿಲ್ಲ.ಹಾಲಮ್ಮ ಇದರ ನಡುವೆ ಈ ಹಿಂದೆ ಮನೆ ದುರಸ್ತಿಗೆಂದು ಪಿಂಚಣಿ ಹಣದ ಆಧಾರದ ಮೇಲೆ ಮಾಡಿದ್ದ ಸಾಲದ ಒಂದು ಕಂತು ಕಟ್ಟಿಲ್ಲವೆನ್ನುವ ಕಾರಣಕ್ಕೆ ವಯಸ್ಸಾದ ವೃದ್ಧೆಯ ಕಿವಿಯಲ್ಲಿದ್ದ ಓಲೆಯನ್ನು ಪಡೆದು ನಿಂದಿಸಿ ಹೊರದಬ್ಬಿರುವ ಬಗ್ಗೆ ಕೋಣಂದೂರು ಉಪಠಾಣೆಯಲ್ಲಿ ದೂರು ದಾಖಲಾಗಿದೆ.
ಪಿಂಚಣಿ ಹಣದ ಆಧಾರದ ಮೇಲೆ ಮನೆ ದುರಸ್ತಿಗೆ ಕೋಣಂದೂರಿನ ಬ್ಯಾಂಕೊಂದರಲ್ಲಿ ಸಾಲ ಪಡೆದಿದ್ದ ವೃದ್ಧೆಗೆ ಕಳೆದ ನಾಲ್ಕು ತಿಂಗಳಿನಿಂದ ಪಿಂಚಣಿ ಹಣ ಬಂದಿಲ್ಲದ ಕಾರಣಕ್ಕೆ ಸಾಲದ ಕಂತು ಕಟ್ಟಲು ಸಾಧ್ಯವಾಗಿರಲಿಲ್ಲ. ಹಾಗೆಯೇ ಫೆ.10ರಂದು ಮನೆಯಲ್ಲಿ ದಿನಸಿ ಸಾಮಾನು ಇಲ್ಲದ ಕಾರಣಕ್ಕೆ ತನ್ ಕಿವಿಯಲ್ಲಿದ್ದ ಓಲೆ, ಚೈನ್ ಅನ್ನು ಅಡವಿಡಲು ಬ್ಯಾಂಕ್ಗೆ ಬಂದಾಗ ಬ್ಯಾಂಕ್ ಸಿಬ್ಬಂದಿ ಓಲೆ ಚೈನ್ ಪಡೆದು ಹಣ ನೀಡದೆ ಅವಾಚ್ಯವಾಗಿ ಏಕವಚನದಲ್ಲಿ ನಿಂದಿಸಿ ಹೊರದಬ್ಬಿದ್ದಾರೆ ಎಂದು ವೃದ್ಧೆಯ ಮಗಳು ಶಕುಂತಳಾ ಆರೋಪಿಸಿ ದೂರು ನೀಡಿದ್ದಾರೆ.
ಬಿಲ್ಲೇಶ್ವರ ಗ್ರಾಮದ ಎಸ್.ಚನ್ನವೀರಪ್ಪ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿ ದೇಶಸೇವೆ ಮಾಡಿದ್ದಾರೆ. ಅವರ ಬಗ್ಗೆ ನನಗೆ ಅತೀವ ಹೆಮ್ಮೆ ಇದೆ. ಆದರೆ ನಮ್ಮನ್ನು ಸರ್ಕಾರಗಳು ಹಾಗೂ ವ್ಯವಸ್ಥೆ ಇಷ್ಟು ನಿಕೃಷ್ಟವಾಗಿ ಕಾಣುತ್ತಿರುವುದು ಬೇಸರದ ಸಂಗತಿ ಎಂದು ವೃದ್ಧೆ ಹಾಲಮ್ಮ ತಮ್ಮ ನೋವು ತೋಡಿಕೊಂಡರು.ಈ ಕೂಡಲೇ ಸಂಭಂದಪಟ್ಟವರು ವಯಸ್ಸಾದ ಅ ತಾಯಿಗೆ ನ್ಯಾಯದೊರಕಿಸಿಕೊಟ್ಟು ಕಟುಕತನ ಪ್ರದರ್ಶಿಸದ ಬ್ಯಾಂಕ್ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಜತುಗಿಸಬೇಕಿದೆ.