ನವದೆಹಲಿ : ಕೊನೆಗೂ ಪಟ್ಟು ಹಿಡಿದು ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ಚರ್ಚಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕಾಂಗ್ರೆಸ್ನಲ್ಲಿ ಸಂಚಲ.

news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಹಲವು ದಿನಗಳಿಂದ ರಾಹುಲ್ಗಾಂಧಿ ಅವರ ಭೇಟಿಗಾಗಿ ಪ್ರಯತ್ನ ನಡೆಸಿದ್ದ ಡಿ.ಕೆ. ಶಿವಕುಮಾರ್ ಅವರು, ಗುರುವಾರ (ಫೆ, 12 )ದಂದು ರಾಹುಲ್ಗಾಂಧಿ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕೀಯದ ಎಲ್ಲಾ ವಿದ್ಯಮಾನಗಳನ್ನು ಅವರ ಗಮನಕ್ಕೆ ತಂದು ಅಧಿಕಾರ ಹಂಚಿಕೆ, ನಾಯಕತ್ವ ಬದಲಾವಣೆ, ಕೆಪಿಸಿಸಿ ಅಧ್ಯಕ್ಷಗಿರಿ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.

ಅಸ್ಸಾಂ ವಿಧಾನಸಭಾ ಚುನಾಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರ ಜೋತೆಗೆ ಇಂದು ದೆಹಲಿಯಲ್ಲಿರುವ ಸೋನಿಯಾಗಾಂಧಿ ಅವರ ನಿವಾಸದಲ್ಲಿ ಮೊದಲಿಗೆ ಪ್ರಿಯಾಂಕ ಗಾಂಧಿ ನಂತರ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿದ ಡಿ.ಕೆ.ಶಿವಕುಮಾರ್, ಅಸ್ಸಾಂ ಚುನಾವಣೆಯ ಚರ್ಚೆ ಬಳಿಕ ರಾಹುಲ್ಗಾಂಧಿ ಅವರ ಜೊತೆ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ನಡೆಸಿದರು ಎಂದು ವರದಿಯಾಗಿದೆ.

ರಾಜ್ಯ ರಾಜಕಾರಣದ ಬಗ್ಗೆ ಡಿ.ಕೆ. ಶಿವಕುಮಾರ್ ಅವರು ರಾಹುಲ್ಗಾಂಧಿ ಅವರ ಜೋತೆ ಚರ್ಚೆ ನಡೆಸಿದ ಸಂದರ್ಭದಲ್ಲಿ ಕಾಂಗ್ರೆಸ್ನ ಅಧಿನಾಯಕಿ ಸೋನಿಯಾಗಾಂಧಿ, ಪ್ರಿಯಾಂಕ ಗಾಂಧಿ ಸಹ ಉಪಸ್ಥಿತರಿದ್ದರು.ಮೂವರ ಜೋತೆಗೆ ಡಿ.ಕೆ ಶಿವಕುಮಾರ್ ಸುದೀರ್ಘ ಚರ್ಚೆ ನೆಡೆಸಿದ್ದಾರೆ.
ಈ ಮೂವರ ಜೊತೆಯೂ ಡಿ.ಕೆ. ಶಿವಕುಮಾರ್ ಸುದೀರ್ಘ ಮಾತುಕತೆ ನಡೆಸಿ ತಮ್ಮ ಪಕ್ಷ ನಿಷ್ಠೆ, ಪಕ್ಷ ಸೇವೆ ಎಲ್ಲವನ್ನೂ ಅವರ ಗಮನಕ್ಕೆ ತಂದು ತಮ್ಮ ಶ್ರಮಕ್ಕೆ ಪ್ರತಿಫಲ ನೀಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಆಗಿರುವ ಅಧಿಕಾರ ಹಂಚಿಕೆಯ ಒಪ್ಪಂದದಂತೆ ನಾವೆಲ್ಲ ನಡೆದುಕೊಳ್ಳಬೇಕಿದೆ. ಅದರಂತೆ ನನಗೂ ಉನ್ನತ ಹುದ್ದೆಗೆ ಅವಕಾಶ ಮಾಡಿಕೊಡಿ ಎಂದು ಡಿ.ಕೆ. ಶಿವಕುಮಾರ್ ವರಿಷ್ಠರಲ್ಲಿ ಬೇಡಿಕೆ ಇಟ್ಟಿದ್ದಾರೆ.
ಅಧಿಕಾರ ಹಂಚಿಕೆಯ ಜಟಾಪಟಿಗೆ ಆದಷ್ಟು ಬೇಗ ತೆರೆ ಎಳೆಯಿರಿ. ಒಂದು ಸ್ಪಷ್ಟ ತೀರ್ಮಾನವನ್ನು ಶೀಘ್ರ ಪ್ರಕಟಿಸಿ ಎಂಬ ಬೇಡಿಕೆಯನ್ನು ವರಿಷ್ಠರ ಮುಂದೆ ಇಟ್ಟಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಹವಾಲನ್ನು ಆಲಿಸಿದ ರಾಹುಲ್ಗಾಂಧಿ ಅವರು ನಿಮ್ಮ ಪಕ್ಷನಿಷ್ಠೆ, ಸೇವೆ ನಮ್ಮ ಗಮನದಲ್ಲಿದೆ. ನಿಮ್ಮ ಮೇಲೆ ನಮಗೆ ಪ್ರೀತಿ ಅಭಿಮಾನ ಎಲ್ಲವೂ ಇದೆ. ಆದಷ್ಟು ಬೇಗ ತೀರ್ಮಾನ ಮಾಡುತ್ತೇವೆ ಸ್ವಲ್ಪ ತಾಳ್ಮೆಯಿಂದ ಕಾಯಿರಿ ಎಂದು ಹೇಳಿದರು ಎನ್ನಲಾಗಿದೆ.
ಅಧಿಕಾರ ಹಂಚಿಕೆಯ ಬಗ್ಗೆ ಏಕಾಏಕಿ ಒಂದು ತೀರ್ಮಾನಕ್ಕೆ ಬರಲು ಈಗಲೇ ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ದೆಹಲಿಗೆ ಕರೆಸಿ ಮಾತನಾಡುತ್ತೇವೆ. ನಂತರ ಒಂದು ತೀರ್ಮಾನಕ್ಕೆ ಬರುತ್ತೇವೆ ಎಂಬ ಭರವಸೆಯನ್ನು ರಾಹುಲ್ ಗಾಂಧಿ ಮತ್ತು ಸೋನಿಯಾಗಾಂಧಿ ಅವರು ಡಿಕೆ ಶಿವಕುಮಾರ್ ಅವರಿಗೆ ಹೇಳಿದರು ಎಂದು ವರದಿಯಾಗಿದೆ.
ಎರಡು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಕರೆದಿದ್ದಾರೆ ಎಂದು ದೆಹಲಿಗೆ ತೆರಳಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಹುಲ್ಗಾಂಧಿ ಭೇಟಿಗೆ ದೆಹಲಿಯಲ್ಲಿ ಕಾದು ಕುಳಿತಿದ್ದರು. ಬುಧವಾರ ರಾಹುಲ್ ಅವರನ್ನು ಭೇಟಿ ಮಾಡುವ ಪ್ರಯತ್ನ ಸಾಧ್ಯವಾಗಿರಲಿಲ್ಲ. ಆದರೆ ಗುರುವಾರ (ಫೆ,12)ರ ಬೆಳಗ್ಗೆಯೇ ಡಿ.ಕೆ. ಶಿವಕುಮಾರ್, ರಾಹುಲ್ ಅವರನ್ನು ಭೇಟಿ ಮಾಡಿ, ಚರ್ಚೆ ನಡೆಸಿದರು
ದೆಹಲಿಯ ಜನಪತ್ ರಸ್ತೆಯಲ್ಲಿರುವ ಸೋನಿಯಾಗಾಂಧಿ ಅವರ ನಿವಾಸದಲ್ಲಿ ಇಂದು ಬೆಳಗ್ಗೆ 10.30ರ ಸುಮಾರಿಗೆ ರಾಹುಲ್ಗಾಂಧಿ ಅವರನ್ನು ಡಿ.ಕೆ ಶಿವಕುಮಾರ್ ಭೇಟಿ ಮಾಡಿ ಚರ್ಚಿಸಿದರು.

ಸೋನಿಯಾಗಾಂಧಿ ಅವರ ನಿವಾಸದಲ್ಲಿ ನಡೆದ ಈ ಚರ್ಚೆಯಲ್ಲಿ ರಾಹುಲ್ಗಾಂಧಿ, ಸೋನಿಯಾಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಸಹ ಉಪಸ್ಥಿತರಿದ್ದರು.
ಈ ಮೂವರು ಕಾಂಗ್ರೆಸ್ನ ವರಿಷ್ಠ ನಾಯಕರು ಡಿ.ಕೆ.ಶಿವಕುಮಾರ್ ಅವರ ಜೋತೆಗೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದು,ಕರ್ನಾಟಕದಲ್ಲಿ ರಾಜಕೀಯವಾಗಿ ಕುತೂಹಲಕ್ಕೆ ಕಾರಣವಾಗಿದೆ.
ಪಕ್ಷಕ್ಕಾಗಿ ನಾನು ದುಡಿದ್ದೇನೆ. ನನ್ನ ದುಡಿಮೆ ಮತ್ತು ಶ್ರಮಕ್ಕೆ ವರಿಷ್ಠರ ಬಳಿ ಕೂಲಿ ಕೇಳುತ್ತೇನೆ ಎಂದು ಹಿಂದೆಯೇ ಹಲವಾರು ಬಾರಿ ಹೇಳಿದ್ದ ಡಿ.ಕೆ. ಶಿವಕುಮಾರ್, ಇಂದು ವರಿಷ್ಠರ ಮುಂದೆ ಮನಬಿಚ್ಚಿ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ 2028 ಕ್ಕೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪ ತಮ್ಮದಾಗಿದೆ. ಹಾಗಾಗಿ ಅಧಿಕಾರ ಹಂಚಿಕೆಯ ಒಪ್ಪದದಂತೆ ತಮಗೂ ಅವಕಾಶ ಕೊಡಿ ಎಂದು ಡಿ.ಕೆ. ಶಿವಕುಮಾರ್ ಸೋನಿಯಾಗಾಂಧಿ, ರಾಹುಲ್ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರ ಬಳಿ ಬೇಡಿಕೆ ಇಟ್ಟಿದ್ದಾರೆ ಎಂದು ಶಿವಕುಮಾರ್ ಅವರ ಆಪ್ತ ಮೂಲಗಳು ಹೇಳಿವೆ.
ವರಿಷ್ಠರ ಮಾತಿನಿಂದ ಡಿ.ಕೆ ಶಿವಕುಮಾರ್ ಸಮಾಧಾನಗೊಂಡಿದ್ದು, ಆದಷ್ಟು ಬೇಗ ವರಿಷ್ಠರು ಸಹ ಒಂದು ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ.
ಫೆ,11ರ ರಾತ್ರಿ ಖರ್ಗೆ-ವೇಣುಗೋಪಾಲ್ ಭೇಟಿ.

ದೆಹಲಿಯಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿನ್ನೆ ತಡ ರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಯನ್ನು ಇಟ್ಟಿದ್ದಾರೆ, ರಾಹುಲ್ಗಾಂಧಿ ಅವರ ಭೇಟಿಗೆ ಸಮಯ ನಿಗದಿ ಮಾಡುವಂತೆ ಕೋರಿದ್ದರು.
ಶಿವಕುಮಾರ್ ಜೋತೆಗೆ ಅವರ ಸಹೋದರ ಮಾಜಿ ಸಂಸದ ಡಿ.ಕೆ.ಸುರೇಶ್ ಸಹ ಖರ್ಗೆ ಭೇಟಿ ಸಂದರ್ಭದಲ್ಲಿ ಇದ್ದು, ಸುಮಾರು ಹೊತ್ತು ಈ ಇಬ್ಬರೂ ಖರ್ಗೆ ಹಾಗೂ ವೇಣುಗೋಪಾಲ್ ಜೋತೆಗೆ ರಾಜಕೀಯ ವಿದ್ಯಮಾನಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು ಎನ್ನಲಾಗಿದೆ.
ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಭೇಟಿ ಮಾತುಕತೆ ನಂತರ ಡಿ.ಕೆ. ಶಿವಕುಮಾರ್ ರಾಹುಲ್ಗಾಂಧಿ ಅವರನ್ನು ಭೇಟಿ ಮಾಡಿದ್ದು, ಹೈಕಮಾಂಡ್ ಮುಂದಿನ ದಿನಗಳಲ್ಲಿ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ವರಿಷ್ಠರಿಗೆ ಎಲ್ಲವನ್ನೂ ವಿವರವಾಗಿ ಹೇಳಿದ್ದೇನೆ: ಡಿಕೆಶಿ
ನಮ್ಮ ಪಕ್ಷದ ವರಿಷ್ಠರ ಜೋತೆಗೆ ಏನೇನು ಹೇಳಬೇಕು ಅದೆನ್ನೆಲ್ಲಾ ವಿವರವಾಗಿ ಮಾತನಾಡಿದ್ದೇನೆ. ನಾನು ದೆಹಲಿಗೆ ಬಂದಿರುವುದೇ ರಾಜಕಾರಣ ಮಾಡಲು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ದೆಹಲಿಯ ಜನಪಥ್ ರಸ್ತೆಯಲ್ಲಿರುವ ಸೋನಿಯಾಗಾಂಧಿಯವರ ನಿವಾಸದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧಿನಾಯಕಿ ಪ್ರಿಯಾಂಕಾಗಾಂಧಿ ಜೋತೆಗೆ ಮಹತ್ವದ ರಾಜಕೀಯ ಚರ್ಚೆ ನಡೆಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ ಅವರು, ವರಿಷ್ಠರಿಗೆ ಜೋತೆಗೆ ಎಲ್ಲವನ್ನೂ ಚರ್ಚಿಸಿದ್ದೇನೆ. ಎಲ್ಲಾ ರಾಜಕೀಯ ವಿದ್ಯಮಾನಗಳನ್ನು ತಿಳಿಸಿದ್ದೇನೆ ಎಂದರು.
ಅಸ್ಸಾಂನಲ್ಲಿ ಚುನಾವಣೆ ಇದೆ. ಅಲ್ಲ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವ ಬಗ್ಗೆ ಅಸ್ಸಾಂ ಕಾಂಗ್ರೆಸ್ ನಾಯಕರ ಜೋತೆಗೆ ಸೋನಿಯಾಗಾಂಧಿ ಅವರ ನಿವಾಸದಲ್ಲಿ ಮಾತನಾಡಿದ್ದೇನೆ. ನಾನು ದೆಹಲಿಗೆ ಹೋಗಿ ಯಾರ ಯಾರ ಜೊತೆಗೆಲ್ಲಾ ಏನೇನು ಮಾತನಾಡಿದ್ದೇನೆ ಎಂಬುದನ್ನು ಬೀದಿಯಲ್ಲಿ ನಿಂತು ಮಾತನಾಡುವ ಅಗತ್ಯ ನನಗಿಲ್ಲ ಎಂದರು.
ನಾನು ದೆಹಲಿಗೆ ಬಂದಿರುವುದೇ ರಾಜಕಾರಣ ಮಾಡುವುದಕ್ಕೆ ಹಾಗಾಗಿ ವರಿಷ್ಠರಿಗೆ ಏನೇನು ಹೇಳಬೇಕೋ ಎಲ್ಲವನ್ನು ಹೇಳಿದ್ದೇನೆ. ಎಲ್ಲದಕ್ಕೂ ಕಾಲವೇ ಉತ್ತರ ಕೊಡಲಿದೆ ಎಂದು ಮಾರ್ಮಿಕವಾಗಿ ಡಿಕೆಶಿ ಹೇಳಿದ್ದಾರೆ, ವರಿಷ್ಠರ ಜೊತೆಗಿನ ಮಾತುಕತೆಯ ಗುಟ್ಟನ್ನು ಡಿ.ಕೆ ಶಿವಕುಮಾರ್ ಎಲ್ಲು ಬಿಟ್ಟು ಕೊಡಲಿಲ್ಲ.


