“ಭ್ರಷ್ಟ ಬಿಜೆಪಿಯಿಂದಾಗಿ ವಿಧ್ಯಾರ್ಥಿಗಳ ತ್ಯಾಗ ಪೋಷಕರು ಮಾಡಿರುವ ಸಾಲ ವ್ಯರ್ಥವಾಗಿದೆ”: NEET ಪರೀಕ್ಷೆ ರದ್ದತಿ ಬೆನ್ನಲ್ಲೆ ರಾಹುಲ್ ಗಾಂಧಿ ವಾಗ್ದಾಳಿ.
news.ashwasurya.in
ಅಶ್ವಸೂರ್ಯ/ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆ ಮೇ.3ರಂದು ನಡೆದ NEET-UG 2026 ಪರೀಕ್ಷೆಯನ್ನು ರದ್ದುಗೊಳಿಸಿರುವುದನ್ನು ಕಾಂಗ್ರೆಸ್ ಸಂಸದ, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಟುವಾಗಿ ಟೀಕಿಸಿದ್ದಾರೆ.
“ಯುವ ಜನರ ಭವಿಷ್ಯದ ವಿರುದ್ಧದ ಅಪರಾಧ” ಎಂದು ಬಣ್ಣಿಸಿದ್ದಾರೆ.


ಮೇ 3, 2026ರಂದು ನಡೆದ NEET (UG) 2026 ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಮತ್ತು ಪರೀಕ್ಷೆಯನ್ನು ಮರು ನಡೆಸಲು ನಿರ್ಧರಿಸಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಂಗಳವಾರ ತಿಳಿಸಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಸಿಬಿಐ ತನಿಖೆಗೆ ಕೂಡ ಸೂಚಿಸಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, “ಭ್ರಷ್ಟ ಬಿಜೆಪಿ ಆಡಳಿತವು 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ತ್ಯಾಗ ಮತ್ತು ಕನಸುಗಳನ್ನು ನುಚ್ಚುನೂರಾಗಿಸಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.

ಕೆಲ ಪೋಷಕರು ಸಾಲ ಮಾಡಿದರು, ಕೆಲವು ತಾಯಂದಿರು ತಮ್ಮ ಆಭರಣಗಳನ್ನು ಮಾರಾಟ ಮಾಡಿದರು, ಲಕ್ಷಾಂತರ ಮಕ್ಕಳು ರಾತ್ರಿಯಿಡೀ ಎಚ್ಚರವಾಗಿ ಓದಿದರು. ಆದರೆ ಇದಕ್ಕೆ ಪ್ರತಿಯಾಗಿ ಅವರಿಗೆ ಸಿಕ್ಕಿದ್ದು ಪ್ರಶ್ನೆಪತ್ರಿಕೆ ಸೋರಿಕೆ, ಸರಕಾರದ ನಿರ್ಲಕ್ಷ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಸಂಘಟಿತ ಭ್ರಷ್ಟಾಚಾರ ಎಂದು ರಾಹುಲ್ ಗಾಂಧಿ ಹೇಳಿದರು.
ಇದು ಕೇವಲ ವೈಫಲ್ಯವಲ್ಲ. ಇದು ಯುವ ಜನರ ಭವಿಷ್ಯದ ವಿರುದ್ಧದ ಅಪರಾಧ. ಈಗ ಲಕ್ಷಾಂತರ ವಿದ್ಯಾರ್ಥಿಗಳು “ಮತ್ತೊಮ್ಮೆ ಅದೇ ಮಾನಸಿಕ ಒತ್ತಡ, ಆರ್ಥಿಕ ಹೊರೆ ಮತ್ತು ಅನಿಶ್ಚಿತತೆಯನ್ನು ಸಹಿಸಿಕೊಳ್ಳಬೇಕಿದೆ. ಪ್ರತಿ ಬಾರಿಯೂ, ಪೇಪರ್ ಮಾಫಿಯಾ ಯಾವುದೇ ಶಿಕ್ಷೆಯಿಲ್ಲದೆ ತಪ್ಪಿಸಿಕೊಳ್ಳುತ್ತದೆ. ಆದರೆ ಪ್ರಾಮಾಣಿಕ ವಿದ್ಯಾರ್ಥಿಗಳು ಶಿಕ್ಷೆಯನ್ನು ಅನುಭವಿಸುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದರು.

“ಒಬ್ಬರ ಭವಿಷ್ಯವು ಕಠಿಣ ಪರಿಶ್ರಮದ ಬದಲು ಹಣ ಮತ್ತು ಸಂಪರ್ಕಗಳಿಂದ ನಿರ್ಧರಿಸಲ್ಪಡುತ್ತದೆ ಎಂದಾದರೆ ಶಿಕ್ಷಣದ ಅರ್ಥವೇನು? ಪ್ರಧಾನಿ ನರೇಂದ್ರ ಮೋದಿಯವರ ಅಮೃತ್ ಕಾಲವು ದೇಶಕ್ಕೆ ವಿಷಕಾರಿ ಯುಗವಾಗಿ ಮಾರ್ಪಟ್ಟಿದೆ” ಎಂದು ಹೇಳಿದರು.


