

ಬೆಂಗಳೂರು : ಐಪಿಎಲ್ ಆಟದ ವೇಳೆ ಮೊಬೈಲ್ ಕದಿಯಲೆಂದೇ ವಿಮಾನದಲ್ಲಿ ಬಂದ ಖದೀಮರ ಬಂಧನ.!
news.ashwasurya.in
IPL 2026
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಐಪಿಎಲ್ ಪಂದ್ಯದವೇಳೆ ಪ್ರೇಕ್ಷಕರ ಮೊಬೈಲ್ಗಳನ್ನು ಕದ್ದಿದ್ದ ಜಾರ್ಖಂಡ್ ಮೂಲದ ಖದೀಮರ ತಂಡವನ್ನು ಕಬ್ಬನ್ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕರನ್ನು ಬಳಸಿಕೊಂಡು ಕೃತ್ಯ ಎಸಗಿದ್ದ ಈ ತಂಡದಿಂದ 18 ಲಕ್ಷ ಮೌಲ್ಯದ 21 ಬೆಲೆಬಾಳುವ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ…

ಅಶ್ವಸೂರ್ಯ/ಬೆಂಗಳೂರು : ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಐಪಿಎಲ್ ಪಂದ್ಯಾವಳಿಯಲ್ಲಿ ಕ್ರಿಕೆಟ್ ಅಭಿಮಾನಿಗಳನ್ನು (ಪ್ರೇಕ್ಷಕರ) ಮೊಬೈಲ್ ಕಳವು ಮಾಡಿದ್ದ ಅಪ್ರಾಪ್ತ ಬಾಲಕರು ಸೇರಿದಂತೆ ನಾಲ್ವರನ್ನು ಕಬ್ಬನ್ಪಾರ್ಕ್ ಠಾಣೆ ಪೊಲೀಸರ ತಂಡ ದೂರು ದಾಖಲಾದ ಕೆಲವೆ ಸಮಯದಲ್ಲಿ ಖದೀಮರನ್ನು ಖೆಡ್ಡಕ್ಕೆ ಕೆಡವಿಕೊಂಡಿದ್ದಾರೆ.
ಜಾರ್ಖಂಡ್ ಮೂಲದ ಶುಭಂ ಕುಮಾರ್ ಹಾಗೂ ಮೂವರು ಅಪ್ರಾಪ್ತ ಬಾಲಕರಾಗಿದ್ದು, ಆರೋಪಿಗಳಿಂದ 18 ಲಕ್ಷ ರೂಪಾಯಿ ಮೌಲ್ಯದ 21 ಬೆಲೆಬಾಳುವ ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಐಪಿಎಲ್ ಪಂದ್ಯ ಮುಗಿದ ಬಳಿಕ ಮೊಬೈಲ್ ಕಳ್ಳತನ ಕೃತ್ಯಗಳು ಬೆಳಕಿ ಬಂದಿದ್ದವು. ಕೂಡಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಚೋರರು ನಗರ ತೊರೆಯುವ ಮುನ್ನವೇ ಸೆರೆ ಹಿಡಿದಿದ್ದಾರೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ಮೊಬೈಲ್ ಕಳ್ಳತನಕ್ಕೆ ವಿಮಾನದಲ್ಲಿ ಬಂದ ಖದೀಮರ ಗ್ಯಾಂಗ್.!

ಜಾರ್ಖಂಡ್ನ ಮೂಲದ ಶುಭಂ ಮೋಸ್ಟ್ ಕ್ರಿಮಿನಲ್ ಆಗಿದ್ದು ಆತನ ವಿರುದ್ಧ ಸ್ಥಳೀಯವಾಗಿ ಪ್ರಕರಣಗಳಿವೆ ಎಂದು ತಿಳಿದುಬಂದಿದೆ. ಜನಸಂದಣಿ ಕಾರ್ಯಕ್ರಮಗಳಲ್ಲಿ ದುಬಾರಿ ಮೊಬೈಲ್ ಕಳ್ಳತನಕ್ಕೆ ಜಾರ್ಖಂಡ್ ತಂಡವು ಕುಖ್ಯಾತಿ ಪಡೆದಿದ್ದು. ಅಂತೆಯೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್)ನ ಉದ್ಘಾಟನಾ ಪಂದ್ಯದ ಬಗ್ಗೆ ಶುಭಂ ಮಾಹಿತಿ ಪಡೆದಿದ್ದ. ತವರಿನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ (ಆರ್ಸಿಬಿ)ನ ಪಂದ್ಯಕ್ಕೆ ಹೆಚ್ಚಿನ ಅಭಿಮಾನಿಗಳು ಸೇರುತ್ತಾರೆ. ಆ ವೇಳೆ ಮೊಬೈಲ್ ಕಳ್ಳತನಕ್ಕೆ ಶುಭಂ ಹಾಗೂ ಆತನ ಸಹಚರರು ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಪೂರ್ವನಿಗದಿಯಂತೆ ಮೊಬೈಲ್ ಕಳ್ಳತನಕ್ಕೆ ವಿಮಾನದಲ್ಲಿ ಅಪ್ರಾಪ್ತ ಬಾಲಕರನ್ನು ಕರೆದುಕೊಂಡು ನಗರಕ್ಕೆ ಆತ ಬಂದಿದ್ದ. ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಶುಭಂ ಇದ್ದರೆ, ಇನ್ನುಳಿದ ಅಪ್ರಾಪ್ತರು ಆನ್ಲೈನ್ನಲ್ಲಿ ಟಿಕೆಟ್ ಖರೀದಿಸಿ ಪ್ರೇಕ್ಷಕರ ಸೋಗಿನಲ್ಲಿ ಕ್ರೀಡಾಂಗಣದೊಳಗೆ ಪ್ರವೇಶಿಸಿದ್ದರು. ಎಸ್ಆರ್ಎಚ್ ತಂಡದ ವಿರುದ್ಧ ಆರ್ಸಿಬಿ ಅಬ್ಬರದ ಆಟ ಕಣ್ತುಂಬಿಕೊಳ್ಳುತ್ತ ಮೈಮರೆತಿದ್ದ ಪ್ರೇಕ್ಷಕರಿಂದ ಆರೋಪಿಗಳು ದುಬಾರಿ ಮೌಲ್ಯದ ಮೊಬೈಲ್ಗಳನ್ನು ಎಗರಿಸಿದ್ದರು.
ಪೊಲೀಸ್ ಠಾಣೆಗೆ 20 ಜನರಿಂದ ದೂರು ದಾಖಲು.
ಈ ಪಂದ್ಯ ಮುಗಿಸಿ ಕ್ರೀಡಾಂಗಣದ ಹೊರಗೆ ಬಂದಾಗ ಪ್ರೇಕ್ಷಕರಿಗೆ ತಮ್ಮ ಮೊಬೈಲ್ ಹಣ ಕಳ್ಳತನ ಆಗಿರುವುದು ಅರಿವಿಗೆ ಬಂದಿದೆ. ಆದರೆ ಅಷ್ಟರಲ್ಲಿ ಜಾರ್ಖಂಡ್ ಗ್ಯಾಂಗ್ ಪರಾರಿಯಾಗಿತ್ತು. ಮೊಬೈಲ್ ಕಳ್ಳತನ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ 20ಕ್ಕೂ ಹೆಚ್ಚಿನ ದೂರುಗಳು ಸಲ್ಲಿಕೆಯಾಗಿದ್ದವು. ಈ ಎಫ್ಐಆರ್ ದಾಖಲಿಸಿ ಚೋರರ ಬೇಟೆಗೆ ಪೊಲೀಸರು ತಡಮಾಡದೆ ಫೀಲ್ಡ್ಗಿಳಿದರು.ಭದ್ರತಾ ಕೋಟೆ ಬೇಧಿಸಿ ಚೋರರು
ಕಾಲ್ತುಳಿತ ದುರಂತ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯದ ವೇಳೆ ಅಹಿತಕರ ಘಟನೆ ನಡೆಯದಂತೆ ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ಈ ಅಭೇದ್ಯ ಭದ್ರತಾ ಕೋಟೆಯನ್ನು ಬೇಧಿಸಿ ಕ್ರೀಡಾಂಗಣದಲ್ಲಿ ಮೊಬೈಲ್ ಕಳ್ಳರು ಕೈಚಳಕ ತೋರಿಸಿದ್ದು ಅಧಿಕಾರಿಗಳಿಗೆ ತೀವ್ರ ಮುಜುಗರ ಉಂಟು ಮಾಡಿತ್ತು. ಈ ಕಳ್ಳರ ಪತ್ತೆಗೆ ವಿಶೇಷ ತಂಡಗಳನ್ನು ಡಿಸಿಪಿ ಅಕ್ಷಯ್ ಮಚ್ಚಿಂದ್ರ ಹಾಕೆ ರಚಿಸಿದ್ದರು. ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಕಳ್ಳರನ್ನು ಬಂಧಿಸುವಲ್ಲಿ ಕಬ್ಬನ್ ಪಾರ್ಕ್ ಉಪ ವಿಭಾಗದ ಎಸಿಪಿ ಡಾ. ಪ್ರಿಯದರ್ಶಿನಿ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಕೆ.ಎಸ್. ದೇವೇಂದ್ರಪ್ಪ ಹಾಗೂ ಸಬ್ ಇನ್ಸ್ಪೆಕ್ಟರ್ ರಾಜಕುಮಾರ್ ತಂಡ ಯಶಸ್ಸು ಕಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಪ್ರಾಪ್ತ ಕಳ್ಳರು ವಶಕ್ಕೆ.!
ಮೊಬೈಲ್ ಕಳ್ಳತನ ಪ್ರಕರಣ ಸಂಬಂಧ 10ಕ್ಕೂ ಹೆಚ್ಚಿನ ಅಪ್ರಾಪ್ತ ಬಾಲಕರನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಇದುವರೆಗೆ ಮೂವರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಮಾತ್ರ ಅಧಿಕೃತವಾಗಿ ಪೊಲೀಸರು ಬಂಧನ ಪ್ರಕ್ರಿಯೆಗೊಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಪ್ರಾಪ್ತರನ್ನು ಬಳಕೆ ಮಾಡಲು ಕಾರಣ.?
ಮೊಬೈಲ್ ಕಳ್ಳತನ ಕೃತ್ಯದಲ್ಲಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಅಪ್ರಾಪ್ತ ಬಾಲಕರನ್ನು ಅಸ್ತ್ರಮಾಡಿಕೊಂಡು ಕಿಡಿಗೇಡಿಗಳು ಬಳಸಿಕೊಂಡಿದ್ದಾರೆ. ಕ್ರೀಡಾಂಗಣದಲ್ಲಿ ಅಪ್ರಾಪ್ತರ ಮೇಲೆ ಹೆಚ್ಚಿನ ನಿಗಾವಿರುವುದಿಲ್ಲ. ಅಲ್ಲದೆ ಬಂಧಿತರಾದರೂ ಸುಲಭವಾಗಿ ಜಾಮೀನು ಸಿಗುತ್ತದೆ ಎಂಬುದು ಮಾಸ್ಟರ್ ಮೈಂಡ್ಗಳ ಲೆಕ್ಕಾಚಾರವಾಗಿದೆ ಎನ್ನಲಾಗಿದೆ.
ಐಪಿಎಲ್ ಪಂದ್ಯಾವಳಿ ವೇಳೆ ಮೊಬೈಲ್ ಕಳವು ಮಾಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಕ್ರೀಡಾಂಗಣ ಮಾತ್ರವಲ್ಲದೆ ಇತರೆಡೆ ಸಹ ಅಂದು ಕಳ್ಳತನ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಇದೇ ರೀತಿ ಐಪಿಎಲ್ ಪಂದ್ಯ ನಡೆದ ಬೇರೆಡೆ ಸಹ ಕಳ್ಳತನವಾಗಿರುವ ಬಗ್ಗೆ ಆ ರಾಜ್ಯದ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗುತ್ತದೆ ಎಂದು ಸೀಮಂತ್ ಕುಮಾರ್ ಸಿಂಗ್, ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಅವರು ತಿಳಿಸಿದ್ದಾರೆ.
ಜಾಗೃತರಾಗಿರಿ:
ಮೊಬೈಲ್ ಕಳ್ಳತನದ ಬಗ್ಗೆ ಮುಂಜಾಗ್ರತೆ ವಹಿಸುವಂತೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ಸಿಂಗ್ ಸಲಹೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ವಿಶೇಷವಾಗಿ ಐಪಿಎಲ್ ಪಂದ್ಯಾವಳಿಗಳಂತಹ ಜನ ದಟ್ಟಣೆಯ ಪ್ರೇಶಗಳಿಗೆ ಹೋಗುವಾಗ ತಮ ವೈಯಕ್ತಿಕ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಮೊಬೈಲ್, ಪರ್ಸ್ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.


