
ನೀಟ್ ಪರೀಕ್ಷೆ ರದ್ದಾದ ಬೆನ್ನಲ್ಲೇ ವಿಧ್ಯಾರ್ಥಿ ಆತ್ಮಹತ್ಯೆಗೆ ಶರಣು.! ಕೋಟಿ ಕನಸು ಕಂಡಿದ್ದ ಪೋಷಕರ ಕನಸು ಭಗ್ನ.
news.ashwasurya.in
ಅಶ್ವಸೂರ್ಯ/ಜೈಪುರ : ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ‘ನೀಟ್-ಯುಜಿ 2026’ ಪರೀಕ್ಷೆ ರದ್ದತಿ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಿಂದಾಗಿ ಮನನೊಂದು ವಿಧ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ರಾಜಸ್ಥಾನದ ಸಿಕಾರ್ನಲ್ಲಿ ವರದಿಯಾಗಿದೆ.!
ಮೃತರನ್ನು ಜುನ್ಜುನು ಜಿಲ್ಲೆಯ ಗುಧಾ ಗೌಡ್ಜಿಯ ನಿವಾಸಿ ಪ್ರದೀಪ್ ಮಹಿಚ್ (20) ಎಂದು ಗುರುತಿಸಲಾಗಿದೆ. ಈ ಬಾರಿಯ ನೀಟ್ ಪರೀಕ್ಷೆಯಲ್ಲಿ 650ಕ್ಕೂ ಹೆಚ್ಚು ಅಂಕಗಳನ್ನು ನಿರೀಕ್ಷಿಸಿದ್ದ ಪ್ರದೀಪ್, ಪರೀಕ್ಷೆ ರದ್ದಾದ ಸುದ್ದಿ ಕೇಳಿ ತೀವ್ರ ಖಿನ್ನತೆಗೆ ಒಳಗಾಗಿ ಸಿಕಾರ್ನ ತನ್ನ ಬಾಡಿಗೆ ನಿವಾಸದಲ್ಲಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಾಷ್ಟ್ರೀಯ ಮಾಧ್ಯಮಗಳ ಅಧಿಕೃತ ವರದಿಗಳ ಪ್ರಕಾರ ಪ್ರದೀಪ್ಗೆ ಇದು ಮೂರನೇ ಪ್ರಯತ್ನವಾಗಿತ್ತು. ಆತನ ತಂದೆ ರಾಜೇಶ್ ಕುಮಾರ್ ಮೇಘವಾಲ್ ಒಬ್ಬ ಸಾಮಾನ್ಯ ಕಾರ್ಮಿಕರಾಗಿದ್ದು, ಮಗನನ್ನು ವೈದ್ಯನನ್ನಾಗಿ ಮಾಡಬೇಕೆಂಬ ಒಂದೇ ಒಂದು ಕನಸಿನಿಂದ ಕೋಚಿಂಗ್ ಫೀಸ್ ಕಟ್ಟಲು ತೀವ್ರವಾಗಿ ಸಾಲ ಮಾಡಿದ್ದರು. ಅಷ್ಟೇ ಅಲ್ಲದೆ ತಮಗಿದ್ದ ಜಮೀನನ್ನು ಕೂಡ ಮಾರಾಟ ಮಾಡಿ ಮಗನ ಓದಿಗೆ ಹಣ ಹೊಂದಿಸಿದ್ದರು.ಮಗ ಓದಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದರು.ಹೆತ್ತವರ ಇಚ್ಛೆಯಂತೆ ಮಗ ಕೂಡ ಮೇ 3 ರಂದು ನಡೆದ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮವಾಗಿ ಬರೆದಿದ್ದರಿಂದ, ಈ ವರ್ಷ ಖಂಡಿತವಾಗಿಯೂ ಸರ್ಕಾರಿ ವೈದ್ಯಕೀಯ ಸೀಟು ಸಿಗುತ್ತದೆ ಎಂಬ ಅಚಲ ವಿಶ್ವಾಸದಲ್ಲಿ ಮಗನಿದ್ದ ಇಡೀ ಕುಟುಂಬ ಅದೆ ಕನಸು ಕಾಣುತ್ತಿತ್ತು. ಆದರೆ ವ್ಯವಸ್ಥೆಯ ವೈಫಲ್ಯದಿಂದ ಪರೀಕ್ಷೆ ರದ್ದಾದ ಸುದ್ದಿ ಆತನನ್ನು ಮಾನಸಿಕವಾಗಿ ತೀವ್ರವಾಗಿ ಕುಗ್ಗಿಸಿತ್ತು ಎಂದು ಪ್ರದೀಪ್ ತಂದೆ ಪೊಲೀಸರ ಮುಂದೆ ಕಣ್ಣೀರಿಟ್ಟಿದ್ದಾರೆ.

ಪ್ರದೀಪ್ ಸಿಕಾರ್ನ ಖಾಸಗಿ ಕೋಚಿಂಗ್ ಸಂಸ್ಥೆಯೊಂದರಲ್ಲಿ ತರಬೇತಿ ಪಡೆಯುತ್ತಿದ್ದನು ಹಾಗೂ ಇಬ್ಬರು ಸಹೋದರಿಯರೊಂದಿಗೆ ವಾಸವಿದ್ದನು. ಶುಕ್ರವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಹೋದರಿಯ ಸ್ಕಾರ್ಫ್ ಬಳಸಿ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಧಾವಿಸಿದ ಸಿಕಾರ್ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಸಿಕಾರ್ನ ಎಸ್ಕೆ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಮನೆಯಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲವಾದರೂ, ಪ್ರಾಥಮಿಕ ತನಿಖೆಯಲ್ಲಿ ಇದು ಪರೀಕ್ಷೆ ರದ್ದತಿಯಿಂದ ಉಂಟಾದ ತೀವ್ರ ಖಿನ್ನತೆಯಿಂದಲೇ ಸಂಭವಿಸಿದ ಆತ್ಮಹತ್ಯೆ ಎಂದು ಪೊಲೀಸರು ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಸದ್ಯ ಆತನ ಮೊಬೈಲ್ ಫೋನ್ ಮತ್ತು ನೋಟ್ಬುಕ್ಗಳನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಸಾವಿರ ಕನಸು ಕಂಡಿದ್ದ ಉತ್ತಮ ವಿಧ್ಯಾರ್ಥಿಯೊಬ್ಬನ ಬದುಕು ಈ ರೀತಿ ಕೊನೆಯಾಗಿದ್ದು ಮಾತ್ರ ದುರಂತವೆ ಹೌದು…


