
ಕನ್ನಡ ಚಿತ್ರರಂಗಕ್ಕೆ ಬಿಗ್ ಶಾಕ್: ಹೃದಯಾಘಾತದಿಂದ ಖ್ಯಾತ ನಟ, ನಿರ್ಮಾಪಕ ದಿಲೀಪ್ ರಾಜ್ ನಿಧನ.!

news.ashwasurya.in
ಅಶ್ವಸೂರ್ಯ/ಬೆಂಗಳೂರು: ಕನ್ನಡ ಚಿತ್ರರಂಗ ಮತ್ತು ಕಿರುತೆರೆಯ ಬಹುಮುಖ ಪ್ರತಿಭೆ, ಹಿಟ್ಲರ್ ಕಲ್ಯಾಣ ಖ್ಯಾತಿಯ ದಿಲೀಪ್ ರಾಜ್ (Dileep Raj) (47) ಅವರು ಇಂದು ಮುಂಜಾನೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಆಘಾತಕಾರಿ ಸುದ್ದಿಯು ಸ್ಯಾಂಡಲ್ವುಡ್ ಮತ್ತು ಕಿರುತೆರೆ ಲೋಕವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಕನಸಿನ ಮನೆಯಲ್ಲೇ ಸಂಭವಿಸಿದ ದುರಂತ:
ಮಾಹಿತಿಗಳ ಪ್ರಕಾರ, ದಿಲೀಪ್ ರಾಜ್ ಅವರಿಗೆ ತಮ್ಮ ಬೆಂಗಳೂರಿನ ನಿವಾಸದಲ್ಲೇ ಇದ್ದಕ್ಕಿದ್ದಂತೆ ಹೃದಯಾಘಾತ ಸಂಭವಿಸಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರು ಎಳೆದಿದ್ದಾರೆ.
ನೆಗೆಟಿವ್ ರೋಲ್ನಿಂದ ಮನೆಮಾತಿನವರೆಗೆ
ಸಿನಿಮಾ ಪಯಣ:
2007ರಲ್ಲಿ ಪುನೀತ್ ರಾಜ್ಕುಮಾರ್ ನಟನೆಯ ಮಿಲನ ಚಿತ್ರದ ‘ಹೇಮಂತ್ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು. ನಂತರ ‘ಯು ಟರ್ನ್, ಲವ್ ಗುರು, ಗಾನಾ ಬಜಾನಾ, ಆರ್ಕೆಸ್ಟ್ರಾ ಮೈಸೂರು ಮತ್ತು ಅಂಬಿ ನನಗೆ ವಯಸ್ಸಾಯ್ತು, ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಚಿತ್ರಗಳಲ್ಲಿ ನಟಿಸಿದ್ದರು.

ಕಿರುತೆರೆ ಯಶಸ್ಸು:
ಜನನಿ, ರಂಗೋಲಿ, ರಥಸಪ್ತಮಿಯಂತಹ ಧಾರಾವಾಹಿಗಳಲ್ಲಿ ನಟಿಸಿದ್ದ ಇವರು, ಜೀ ಕನ್ನಡದ ಹಿಟ್ಲರ್ ಕಲ್ಯಾಣದ ಎ.ಜೆ (ಅಭಿರಾಮ್ ಜಯಶಂಕರ್) ಪಾತ್ರದ ಮೂಲಕ ಮನೆಮಾತಾಗಿದ್ದರು.
ಡಬ್ಬಿಂಗ್ ಮತ್ತು ನಿರ್ಮಾಣದಲ್ಲೂ ಸೈ
ದಿಲೀಪ್ ರಾಜ್ ಕೇವಲ ನಟರಾಗಿ ಮಾತ್ರವಲ್ಲದೆ ಇತರ ಕ್ಷೇತ್ರಗಳಲ್ಲೂ ಸಕ್ರಿಯರಾಗಿದ್ದರು,

ನಿರ್ಮಾಪಕರಾಗಿ:
ಪಾರು, ವಿದ್ಯಾ ವಿನಾಯಕ ಮತ್ತು ನಾ ನಿನ್ನ ಬಿಡಲಾರೆ ಧಾರಾವಾಹಿಗಳನ್ನು ನಿರ್ಮಿಸುವ ಮೂಲಕ ಯಶಸ್ವಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು.ಆ ದಿನಗಳು ಚಿತ್ರದ ನಾಯಕ ಚೇತನ್ ಅವರಿಗೆ ಧ್ವನಿ ನೀಡುವ ಮೂಲಕ ಡಬ್ಬಿಂಗ್ನಲ್ಲೂ ತಮ್ಮ ಛಾಪು ಮೂಡಿಸಿದ್ದರು.
ವೈಯಕ್ತಿಕ ಜೀವನ
ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ಇವರು ಟ್ರೆಡ್ಮಿಲ್ ಅಂತಹ ನಾಟಕಗಳಲ್ಲಿ ಮಿಂಚಿದ್ದರು. ಬೆಂಗಳೂರಿನಲ್ಲಿ ಜನಿಸಿದ ಇವರು ಪತ್ನಿ ಶ್ರೀವಿದ್ಯಾ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ದಿಲೀಪ್ ರಾಜ್ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ಸಹೋದ್ಯೋಗಿಗಳು ಹಾಗೂ ಸಾವಿರಾರು ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸೋಣ.


