
ಬೆಂಗಳೂರು : ಪೂಜೆ-ಹೊಮ ನೆಪದಲ್ಲಿ ಅತ್ಯಾಚಾರ… ಜ್ಯೋತಿಷಿ ವಿರುದ್ಧ ದೂರು ದಾಖಲು.ಆರೋಪಿ ಅತ್ಯಾಚಾರಿ ಎಸ್ಕೇಪ್.!
news.ashwasurya.in
ಅಶ್ವಸೂರ್ಯ/ಬೆಂಗಳೂರು : ಪೂಜೆ – ಹೊಮದ ನೆಪದಲ್ಲಿ ಜ್ಯೋತಿಷಿಯೊಬ್ಬ ಮಹಿಳೆಯೊಬ್ಬರ ಮೇಲೆ ಪದೇ, ಪದೇ ಅತ್ಯಾಚಾರ ಮಾಡುತ್ತಿದ್ದ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಜ್ಯೋತಿಷಿ ಮೋಹನ್ ಕುಮಾರ್ ಪೂಜೆ ಮತ್ತು ದೀಕ್ಷೆಯ ನೆಪದಲ್ಲಿ ಬೆಂಗಳೂರಿನ ಬ್ಯೂಟಿಷಿಯನ್ ಒಬ್ಬರ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.
ಪೂಜೆ ಮತ್ತು ದೀಕ್ಷೆಯ ನೆಪದಲ್ಲಿ ಬ್ಯೂಟಿಷಿಯನ್ ಒಬ್ಬರ ಮೇಲೆ ಜ್ಯೋತಿಷಿಯೊಬ್ಬ ನಿರಂತರವಾಗಿ ಅತ್ಯಾಚಾರ ಎಸಗಿರುವ ಘನಘೋರ ಕೃತ್ಯ ನಡೆದಿದೆ. ಗಂಡ ಮತ್ತು ಮಗನ ಮೇಲೆ ವಾಮಾಚಾರ ಮಾಡಿಸಿ ಅವರು ರಕ್ತ ಕಾರಿ ಸಾಯುವಂತೆ ಮಾಡುವುದಾಗಿ ಬೆದರಿಸಿ ಆರೋಪಿ ದೌರ್ಜನ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.

ರಾಜಾಜಿನಗರದಲ್ಲಿ ಬ್ಯೂಟಿಷಿಯನ್ ಟ್ರೈನಿಂಗ್ ಸೆಂಟರ್ ನಡೆಸುತ್ತಿದ್ದ ಮಹಿಳೆಗೆ, ತನ್ನ ಸಹೋದರಿಯ ಅಡ್ಮಿಷನ್ ನೆಪದಲ್ಲಿ ಆರೋಪಿ ಮೋಹನ್ ಕುಮಾರ್ ಎಂಬಾತ ಪರಿಚಯವಾಗಿದ್ದ. ಮಹಿಳೆಯ ಆರ್ಥಿಕ ಅಭಿವೃದ್ಧಿಗೆ ಪೂಜೆ ಮಾಡಿಸಬೇಕು ಎಂದು ನಂಬಿಸಿದ್ದ ಆರೋಪಿ, 2025ರ ಜನವರಿ 30ರಂದು ರಾಮನಗರದ ಪಿರಮಿಡ್ ವ್ಯಾಲಿಗೆ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದ.
ಬಳಿಕ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಪೂಜೆಗೆಂದು ಕರೆದೊಯ್ದು ವಾಪಸ್ಸಾಗುವಾಗ ಕಾರಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕುಟುಂಬದ ಮೇಲೆ ಮಾಟ-ಮಂತ್ರ ಮಾಡಿಸುವುದಾಗಿ ಹೆದರಿಸಿದ್ದ.
ಫೆಬ್ರವರಿ 10ರಂದು ದೀಕ್ಷೆ ನೀಡುವ ನೆಪದಲ್ಲಿ ಮಹಿಳೆಯ ಮನೆಗೆ ಬಂದಿದ್ದ ಜ್ಯೋತಿಷಿ, ಗಂಡ ಮತ್ತು ಮಗನನ್ನು ಮನೆಯಿಂದ ಹೊರಗೆ ಕಳುಹಿಸಿ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ. ತಾನು ಹೇಳಿದಂತೆ ಕೇಳದಿದ್ದರೆ ಕುಟುಂಬವನ್ನೇ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನಂತೆ.!
ಆರೋಪಿ ಮೋಹನ್ ಕುಮಾರ್ ಕಾಟ ತಾಳಲಾರದೆ ಮಹಿಳೆ ಈಗ ಪೊಲೀಸರ ಮೊರೆ ಹೋಗಿದ್ದಾರೆ. ಸಿ.ಕೆ. ಅಚ್ಚುಕಟ್ಟು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸುತ್ತಿದ್ದಂತೆ ಆರೋಪಿ ಎಸ್ಕೇಪ್ ಆಗಿದ್ದಾನೆ ಎಂದು ತಿಳಿದುಬಂದಿದೆ. ಪೋಲಿಸರು ಆರೋಪಿ ಜ್ಯೋತಿಷಿಯ ಬಂಧನಕ್ಕೆ ಭಲೇ ಬಿಸಿದ್ದಾರೆ.


