ಬೆಂಗಳೂರು : ಅಪಹರಣವಾಗಿದ್ದ ಆನೇಕಲ್ ರಿಯಲ್ ಎಸ್ಟೇಟ್ ಏಜೆಂಟ್ ಬರ್ಬರ ಹತ್ಯೆ.!
news.ashwasurya.in
ಅಶ್ವಸೂರ್ಯ/ ಬೆಂಗಳೂರು : ಆನೇಕಲ್ನ ರಿಯಲ್ ಎಸ್ಟೇಟ್ ಏಜೆಂಟ್ವೊಬ್ಬರನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋದ ದುಷ್ಕರ್ಮಿಗಳು ತಮಿಳುನಾಡಿನಲ್ಲಿ ಭೀಕರವಾಗಿ ಕೊಲೆ ಮಾಡಿದ್ದಾರೆ. ನಿನ್ನೆ ಸಂಜೆ ಆನೇಕಲ್ ತಾಲ್ಲೂಕಿನ ಕರ್ಪೂರು ಗೇಟ್ ಬಳಿ ಅಪಹರಣವಾಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಮೃತದೇಹ ತಮಿಳುನಾಡಿನ ಡೆಂಕಣಿಕೋಟೆ ಬಳಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ಕಂಡುಬಂದಿದೆ.!
ಹೊನ್ನಕಳಸಾಪುರ ಗ್ರಾಮದ ನಿವಾಸಿ ಗೋಪಾಲ್ ಅವರು ನಿನ್ನೆ ಸಂಜೆ 7.30 ರ ಸುಮಾರಿನಲ್ಲಿ ಕರ್ಪೂರು ಗೇಟ್ ಬಳಿ ಕಾರಿನಲ್ಲಿ ಹೋಗುತ್ತಿದ್ದಾಗ ಅವರ ಕಾರಿಗೆ ದುರ್ಷ್ಕಮಿಗಳು ವಾಹನದಿಂದ ಅಪಘಾತವೆಂಬಂತೆ ಡಿಕ್ಕಿ ಹೊಡೆದಿದ್ದಾರೆ. ನಂತರ ಗೋಪಾಲ್ ಅವರ ಮುಖಕ್ಕೆ ಸ್ಪ್ರೇ ಹಾಕಿ ಅವರನ್ನು ತಮ್ಮ ಕಾರಿನಲ್ಲಿ ಹಾಕಿಕೊಂಡು ಅಪಹರಿಸಿಕೊಂಡು ಹೋಗಿದ್ದರು.
ಅಪಹರಣ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್ ಅವರು ಆನೇಕಲ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಹೆಚ್ಚವರಿ ಎಸ್ಪಿ ವೆಂಕಟೇಶ್ ಅವರು ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದರೆಲು.

ಪ್ರಕರಣದ ತನಿಖೆಗಾಗಿ ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ಕುಮಾರ್ ನೇತೃತ್ವದಲ್ಲಿ, 9 ಇನ್ಸ್ಪೆಕ್ಟರ್ ಗಳನ್ನು ಒಳಗೊಂಡ 7 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ರಾತ್ರಿಯಿಂದಲೇ ವಿವಿಧ ಮಾರ್ಗಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದರು.
ಒಂದು ತಂಡ ತಮಿಳುನಾಡಿಗೆ ತೆರಳಿ ಅಪಹರಣಕಾರರು ಹಾಗೂ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ಗಾಗಿ ಶೋಧ ನಡೆಸುತ್ತಿದ್ದಾಗ ಡೆಂಕಣಿಕೋಟೆ ಬಳಿ ಗೋಪಾಲ್ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ
ಗೋಪಾಲ್ ಅವರನ್ನು ಕಾರಿನಲ್ಲಿ ತಮಿಳುನಾಡಿಗೆ ಅಪಹರಿಸಿಕೊಂಡು ಕರೆದೊಯ್ದ ದುಷ್ಕರ್ಮಿಗಳು ಡೆಂಕಣಿಕೋಟೆ ಬಳಿ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿ ಶವವನ್ನು ಬಿಸಾಡಿ ಪರಾರಿಯಾಗಿದ್ದಾರೆ.
ಗೋಪಾಲ್ ಅವರು ಈ ಹಿಂದೆ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಬಳಿ ಸಹಾಯಕರಾಗಿದ್ದರು,ನಂತರದ ದಿನಗಳಲ್ಲಿ ವ್ಯವಹಾರಗಳ ಬಗ್ಗೆ ತಿಳಿದುಕೊಂಡಿದ್ದ ಇವರು ತಾವೇ ಪ್ರತ್ಯೇಕವಾಗಿ ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಿದ್ದಾರೆ.ಇದರಿಂದ ಗೋಪಾಲ್ ಏಳಿಗೆಯನ್ನು ಉದ್ಯಮಿಗೆ ಸಹಿಸಲಾಗಿಲ್ಲ. ಆತನನ್ನು ಅಪಹರಿಸಲು ಉದ್ಯಮಿಯೇ ಸುಫಾರಿ ನೀಡಿರುವ ಬಗ್ಗೆ ಪೊಲೀಸರು ಮಾಹಿತಿಗಳನ್ನು ಕಲೆಹಾಕಿದ್ದು, ಅಪಹರಣಕಾರರ ಬಂಧನಕ್ಕೆ ಶೋಧ ಮುಂದುವರೆದಿದೆ.


