ಪೊಲೀಸ್ ಠಾಣೆಯಲ್ಲಿ ಬಯಲಾಯ್ತು ಪ್ರಿಯತಮನ ಹಳೆಯ ಕಾಮ ಪುರಾಣ.! ತಾಳಿ ಕಿತ್ತೆಸೆದು ಮನೆಗೆ ಹೋದ ನವ ವಧು.!
news.ashwasurya.in
ಅಶ್ವಸೂರ್ಯ/ಚಿಕ್ಕಬಳ್ಳಾಪುರ : ಕ್ರಿಮಿನಲ್ ಪ್ರೀಯತಮನ ಪ್ರೀತಿ ಪ್ರೇಮ ವೆಂದು ಆರಂಭವಾದ ನೈಜ ಕಥೆಯೊಂದು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುತ್ತಿದ್ದಂತೆ ಆಘಾತಕಾರಿ ತಿರುವು ಪಡೆದುಕೊಂಡ ಘಟನೆಯೊಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.ಠಾಣೆಗೆ ಹೋಗುತ್ತಿದ್ದಂತೆ ಪ್ರಿಯಕರನ ಹಳೆಯ ಕೃತ್ಯಗಳು ಒಂದೊಂದಾಗಿ ಬಯಲಾಗಿದೆ.!

ಯುವತಿಯೊಬ್ಬಳು ಕ್ರಿಮಿನಲ್ ಪ್ರಿಯತಮ ವಂಚಿಸಿ ಕಟ್ಟಿದ್ದ ತಾಳಿಯನ್ನೇ ಕಿತ್ತು ಬಿಸಾಕಿ ಪೋಷಕರೊಂದಿಗೆ ಮನೆಗೆ ಮರಳಿದ ಘಟನೆ ಅಚ್ಚರಿ ಮೂಡಿಸಿದೆ.
ನಗರದ ಗಂಗನಮಿದ್ದೆ ಬಡಾವಣೆಯ ನಿವಾಸಿ, ಬಣ್ಣದ ಕೆಲಸ ಮಾಡುತ್ತಿದ್ದ ಸಂದೀಪ್ ಎಂಬ ವ್ಯಕ್ತಿ, ಕಂದವಾರ ಬಡಾವಣೆಯ 18 ವರ್ಷದ ಯುವತಿಯನ್ನು ಪ್ರೀತಿಯ ಹೆಸರಿನಲ್ಲಿ ನಂಬಿಸಿ ಬಲೆಗೆ ಬಿಡಿಸಿಕೊಂಡಿದ್ದ.!ಕಳೆದ ಎರಡು ದಿನಗಳ ಹಿಂದೆ ಯುವತಿಯನ್ನು ಕರೆದುಕೊಂಡು ಹೋಗಿದ್ದ ಆತ, ಚಿಂತಾಮಣಿ ತಾಲೂಕಿನ ದೇವಸ್ಥಾನವೊಂದರಲ್ಲಿ ಆಕೆಗೆ ತಾಳಿ ಕಟ್ಟಿದ್ದಾನೆ ಎನ್ನಲಾಗಿದೆ. ಬಳಿಕ ಇಬ್ಬರೂ ಕಾರಿನಲ್ಲಿ ಚಿಕ್ಕಬಳ್ಳಾಪುರ ಕಡೆ ಬರುತ್ತಿದ್ದಾಗ ಶಿಡ್ಲಘಟ್ಟದಲ್ಲಿ ಯುವತಿಯ ಪೋಷಕರು ಕಾರನ್ನು ತಡೆದಿದ್ದಾರೆ.
ಪೋಷಕರು ಇಬ್ಬರನ್ನೂ ನೇರವಾಗಿ ಮಹಿಳಾ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದ್ದಿದ್ದಾರೆ. ಅಲ್ಲಿ ಜೋಡಿ ತಾವು ಮದುವೆಯಾಗಿದ್ದು, ತಮ್ಮ ಜೀವನವನ್ನು ನಡೆಸಲು ಅವಕಾಶ ನೀಡುವಂತೆ ಪೊಲೀಸರ ಮುಂದೆ ಮನವಿ ಮಾಡಿಕೊಂಡಿದ್ದರು. ಆದರೆ ವಿಚಾರಣೆ ನಡೆಯುತ್ತಿದ್ದಂತೆಯೇ ಸಂದೀಪನ ಹಳೆಯ ಪ್ರೇಮ ಪ್ರಕರಣಗಳ ರಂಕುಗಳು ಒಂದೊಂದಾಗಿ ಬಯಲಾಗಿದೆ.
ಈತನ ವಿರುದ್ಧ 2024ರಲ್ಲಿ ಅಪ್ರಾಪ್ತ ಬಾಲಕಿಗೆ
ಸಂಬಂಧಿಸಿದ ಪ್ರಕರಣ, ಮತ್ತೊಬ್ಬ ಮಹಿಳೆಗೆ ವಂಚನೆ ಆರೋಪ ಮತ್ತು ಬೆಂಗಳೂರಿನ ರಾಮಮೂರ್ತಿ ನಗರ ಠಾಣೆಯಲ್ಲಿ ದಾಖಲಾಗಿರುವ ಪೋಕ್ಸೋ ಪ್ರಕರಣಗಳ ಮಾಹಿತಿ ಪೊಲೀಸರ ಮುಂದೆ ಬಂದಿದೆ. ಹಿಂದಿನ ಪ್ರಕರಣದ ಬಾಧಿತೆಯೇ ಠಾಣೆಗೆ ಆಗಮಿಸಿ ಆರೋಪಿಯ ವರ್ತನೆಯ ಬಗ್ಗೆ ವಿವರ ನೀಡಿದ್ದಾಳೆ.

ಈ ಎಲ್ಲಾ ವಿಚಾರಗಳು ತಿಳಿಯುತ್ತಿದ್ದಂತೆ ಪ್ರೀತಿಸಿ ಮದುವೆಯಾದ ಯುವತಿ ಆಘಾತಗೊಂಡು, ಪ್ರಿಯಕರನೊಂದಿಗೆ ಮುಂದಿನ ಜೀವನ ಅಸಾಧ್ಯ ಎಂದು ತೀರ್ಮಾನಿಸಿ ತಾಳಿ ಕಿತ್ತು ತೆಗೆದು ಬಿಸಾಕಿ ಪೋಷಕರೊಂದಿಗೆ ಮನೆಗೆ ತೆರಳಿದ್ದಾಳೆ.
ಬೆನ್ನಿಗೆ ಬಿದ್ದು ಪ್ರೀತಿಸುವ ನಾಟಕವಾಡಿ ಅಮಾಯಕ ಹೆಣ್ಣುಮಕ್ಕಳನ್ನು ತಮ್ಮ ಬಲೆಗೆ ಬಿಡಿಸಿಕೊಂಡು ಅವರ ಬದುಕನ್ನು ಛಿದ್ರಮಾಡುವ ಸಾಕಷ್ಟು ಮಂದಿ ಕ್ರಿಮಿನಲ್ ಹಿನ್ನಲೆಯುಳ್ಳ ಖದೀಮರು ದಂಡು ಕರ್ನಾಟಕದ ಉದ್ದಗಲಕ್ಕೂ ಬಿಡುಬಿಟ್ಟಿದ್ದಾರೆ ಇಂತವರನ್ನು ನಂಬಿ ತಮ್ಮ ಸುಂದರವಾದ ಜೀವನವನ್ನು ಹಾಳು ಮಾಡಿಕೊಳ್ಳುವ ಮೊದಲು ಪ್ರತಿಯೊಬ್ಬ ಹೆಣ್ಣು ಮಕ್ಕಳು ಯೋಚಿಸಿ ಹೆಜ್ಜೆ ಇಡಬೇಕಿದೆ….


