ಕಸ್ತೂರಿ ರಂಗನ್ ವರದಿ: ಕರ್ನಾಟಕದಲ್ಲೂ ಕೇರಳ ಮಾದರಿಯಲ್ಲಿ ಭೌತಿಕ ಸರ್ವೆ, ರೈತರಿಗೆ ಸಿಎಂ ಡಿ.ಕೆ.ಶಿವಕುಮಾರ್ ಅಭಯ!
ಕಸ್ತೂರಿ ರಂಗನ್ ವರದಿ ಜಾರಿಯಿಂದ ಮಲೆನಾಡು ಮತ್ತು ಕರಾವಳಿ ಭಾಗದ ರೈತರಿಗಾಗುವ ಆತಂಕವನ್ನು ದೂರ ಮಾಡಲು ಸಿಎಂ ಡಿ.ಕೆ.ಶಿವಕುಮಾರ್ ಪ್ರವಾಸ ಕೈಗೊಂಡಿದ್ದಾರೆ. ಕೇರಳ ಮಾದರಿಯಲ್ಲಿ ಭೌತಿಕ ಸರ್ವೇ ನಡೆಸುವ ಬಗ್ಗೆ ಹಾಗೂ ಅರಣ್ಯ ಒತ್ತುವರಿ ಕುರಿತು ಹೊಸ ನೋಟಿಸ್ ನೀಡದಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ…

news.ashwasurya.in
ಶಿವಮೊಗ್ಗ/ಚಿಕ್ಕಮಗಳೂರು (ಸೆ.20): ಕಸ್ತೂರಿ ರಂಗನ್ ವರದಿ ಜಾರಿಯಿಂದ ಉಂಟಾಗಬಹುದಾದ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದು, ಜನರ ಸಮಸ್ಯೆ ಹಾಗೂ ಭಾವನೆಗಳನ್ನು ಅರ್ಥಮಾಡಿಕೊಂಡು ಅವರ ರಕ್ಷಣೆಗೆ ಅಗತ್ಯ ಕಾರ್ಯಕ್ರಮ ರೂಪಿಸುತ್ತೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ. ಅಲ್ಲದೆ, ಕೇರಳ ಮಾದರಿಯಲ್ಲೇ ಭೌತಿಕ ಸರ್ವೇ ನಡೆಸುವ ಬಗ್ಗೆ ಶಾಸಕರೊಂದಿಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಹಾಗೂ ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ಶನಿವಾರ ಅವರು ಕಸ್ತೂರಿ ರಂಗನ್ ವರದಿಯಿಂದ ಮಲೆನಾಡಿನ ಭಾಗದಲ್ಲಿ ಎದುರಾಗಿರುವ ಆತಂಕಗಳು ಹಾಗೂ ಪರಿಣಾಮಗಳ ಕುರಿತು ಸ್ಥಳೀಯ ರೈತರು, ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು. ಬಳಿಕ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿ, ಶುಕ್ರವಾರ ದಕ್ಷಿಣ ಕನ್ನಡ, ಶನಿವಾರ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಭಾನುವಾರ ಹಾಸನ ಜಿಲ್ಲೆಗೆ ತೆರಳಲಿದ್ದೇನೆ. ಈ ವೇಳೆ ಸ್ಥಳೀಯರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಸ್ತೂರಿ ರಂಗನ್ ವರದಿ ಕುರಿತು ಮೊದಲು ಜನರೊಂದಿಗೆ ಸಂವಾದ ನಡೆಸಲಾಗುವುದು. ಅವರ ಭಾವನೆಗಳನ್ನು ಅರ್ಥ ಮಾಡಿಕೊಂಡು, ಆ ಬಳಿಕ ಶಾಸಕರೊಂದಿಗೆ ಚರ್ಚೆ ನಡೆಸಿ, ಒಟ್ಟಾರೆ ಅಭಿಪ್ರಾಯ ಸಂಗ್ರಹಿಸಲಾಗುವುದು. ಸೆ.21ರಿಂದ ಮೂರು ದಿನಗಳ ಕಾಲ ನಡೆಯಲಿರುವ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಲಾಗುವುದು. ಈ ಕುರಿತ ಕಾನೂನು ಅಂಶಗಳ ಪರಿಶೀಲನೆ ನಡೆಸಲಾಗುವುದು. ಈ ಎಲ್ಲದರ ಆಧಾರದ ಮೇಲೆಯೇ ಮುಂದಿನ ಹೆಜ್ಜೆ ಇಡಲಾಗುವುದು ಎಂದು ತಿಳಿಸಿದರು.

ನೋಟಿಸ್ ನೀಡದಂತೆ ಸೂಚನೆ:
ಅರಣ್ಯ ಒತ್ತುವರಿ ಸಂಬಂಧ ಯಾವ ರೈತರಿಗೂ ಹೊಸದಾಗಿ ನೋಟಿಸ್ ನೀಡದಂತೆ ಹಾಗೂ ಇದೇ ವೇಳೆ ಹೊಸದಾಗಿ ಯಾರೂ ಒತ್ತುವರಿ ಮಾಡದಂತೆ ನೋಡಿಕೊಳ್ಳಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಾನು ನಿಮ್ಮ ಜೊತೆ ಇದ್ದೇನೆ. ರೈತರ ಪರವಾಗಿ ಇದ್ದೇನೆ ಎಂದು ಅವರು ಭರವಸೆ ನೀಡಿದರು.
ಅರಣ್ಯ ಹಕ್ಕು ಕಾಯ್ದೆ ಕುರಿತು ಮಾತನಾಡಿ, ಪರಿಶಿಷ್ಟ ಪಂಗಡದವರಿಗೆ ಹಾಗೂ ಇತರರಿಗೆ ಇರುವ ಹಕ್ಕಿನ ಅವಧಿಗೆ ಸಂಬಂಧಿಸಿದಂತೆ ಬದಲಾವಣೆ ತರಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಉದ್ದೇಶವಿದೆ. ಈ ಕುರಿತು ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.
‘ರೈತನಿಗೆ ಸಂಬಳ ಇಲ್ಲ, ಪ್ರಮೋಷನ್ ಇಲ್ಲ, ಪೆನ್ಷನ್ ಇಲ್ಲ, ರಿಟೈರ್ಮೆಂಟ್ ಇಲ್ಲ, ರಜೆಯೂ ಇಲ್ಲ’. ರೈತರ ಸ್ಥಿತಿ ಕಷ್ಟದಲ್ಲಿದೆ. ನೀವು ಭರವಸೆ ಕಳೆದುಕೊಳ್ಳಬಾರದು. ರೈತರ ಬದುಕನ್ನು ಉಳಿಸುವ ದೃಷ್ಟಿಯಿಂದಲೇ ನಾನು ನಿಮ್ಮಲ್ಲಿಗೆ ಬಂದಿದ್ದೇನೆ ಎಂದು ಅವರು ಹೇಳಿದರು.
ಮಲೆನಾಡಲ್ಲೇ ಸಿಎಂ ಸಭೆ- ಮೊದಲು:
ಕಸ್ತೂರಿ ರಂಗನ್ ವರದಿ ಜಾರಿಯಿಂದ ಮಲೆನಾಡು ಭಾಗದ ರೈತರ ಬದುಕಿನ ಮೇಲೆ ಉಂಟಾಗಬಹುದಾದ ಪರಿಣಾಮಗಳನ್ನು ಮುಖ್ಯಮಂತ್ರಿಯೊಬ್ಬರು ಅತಿ ಗಂಭೀರವಾಗಿ ಪರಿಗಣಿಸಿರುವುದು ಇದೇ ಮೊದಲು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಶುಕ್ರವಾರ ದಕ್ಷಿಣ ಕನ್ನಡ, ಶನಿವಾರ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಭೇಟಿ ನೀಡಿದ್ದು, ಭಾನುವಾರ ಹಾಸನ ಜಿಲ್ಲೆಗೆ ಭೇಟಿ ನೀಡಿ, ಸಾರ್ವಜನಿಕರೊಂದಿಗೆ ಸಂವಾದ ನಡೆಸಲಿದ್ದಾರೆ.

*****************************
ಕಸ್ತೂರಿ ರಂಗನ್ ವರದಿ ಕೇರಳ ಮಾದರಿಯಲ್ಲಿ ಭೌತಿಕ ಸರ್ವೆ ಎಂದರೇನು.?
ಅಶ್ವಸೂರ್ಯ ನ್ಯೂಸ್ : ಕಸ್ತೂರಿ ರಂಗನ್ ವರದಿ ಅಡಿಯಲ್ಲಿ “ಕೇರಳ ಮಾದರಿಯ ಭೌತಿಕ ಸರ್ವೆ” (Physical Survey) ಎಂದರೆ ಪರಿಸರ ಸೂಕ್ಷ್ಮ ಪ್ರದೇಶಗಳನ್ನು (ESA) ಕೇವಲ ಸ್ಯಾಟಲೈಟ್ (ಉಪಗ್ರಹ) ನಕ್ಷೆಗಳ ಮೂಲಕ ಗುರುತಿಸದೇ, ತಜ್ಞರ ಸಮಿತಿಯೊಂದಿಗೆ ಪ್ರತಿಯೊಂದು ಹಳ್ಳಿಗೂ ಖುದ್ದಾಗಿ ಭೇಟಿ ನೀಡಿ ನೆಲದ ವಾಸ್ತವಕ್ಕೆ ತಕ್ಕಂತೆ ಗಡಿ ಗುರುತಿಸುವ ಪ್ರಕ್ರಿಯೆಯಾಗಿದೆ.

ಪಶ್ಚಿಮ ಘಟ್ಟಗಳ ರಕ್ಷಣೆಗಾಗಿ ಕಸ್ತೂರಿ ರಂಗನ್ ಸಮಿತಿಯು ನೀಡಿದ ವರದಿಯಲ್ಲಿ ಜನವಸತಿ ಪ್ರದೇಶಗಳು, ಕೃಷಿ ಭೂಮಿಗಳು ಅರಣ್ಯ ವ್ಯಾಪ್ತಿಗೆ ಸೇರಿವೆ ಎಂಬ ಆತಂಕ ಮಲೆನಾಡು ಭಾಗದ ರೈತರಲ್ಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಕೇರಳದ ಮಾದರಿಯನ್ನು ಅನುಸರಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಕೇರಳ ಮಾದರಿಯ ಭೌತಿಕ ಸರ್ವೆಯ ಪ್ರಮುಖ ಅಂಶಗಳು ಹಾಗೂ ಅದರ ಹಿನ್ನೆಲೆ ಇಲ್ಲಿದೆ:
. ಸ್ಯಾಟಲೈಟ್ ಸರ್ವೆ vs ಭೌತಿಕ ಸರ್ವೆ (Ground Survey)ಕಸ್ತೂರಿ ರಂಗನ್ ಸಮಿತಿಯ ವಿಧಾನ:
ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾದ ಮೂಲ ಕಸ್ತೂರಿ ರಂಗನ್ ವರದಿಯು ಪ್ರಮುಖವಾಗಿ ಉಪಗ್ರಹ (Satellite) ಮತ್ತು ಜಿಪಿಎಸ್ (GPS) ಆಧಾರಿತ ಮ್ಯಾಪಿಂಗ್ ಅನ್ನು ಅವಲಂಬಿಸಿ ಸಿದ್ಧಪಡಿಸಲಾಗಿತ್ತು. ಇದರಿಂದಾಗಿ ಕಾಡಿನ ಪಕ್ಕದಲ್ಲೇ ಇದ್ದ ಜನನಿಬಿಡ ಹಳ್ಳಿಗಳು, ತೋಟಗಳು ಮತ್ತು ಕೃಷಿ ಭೂಮಿಗಳು ಕೂಡ “ಪರಿಸರ ಸೂಕ್ಷ್ಮ ಪ್ರದೇಶ” (ESA) ವ್ಯಾಪ್ತಿಯೊಳಗೆ ಸೇರಿಹೋಗಿದ್ದವು.
ಕೇರಳ ಮಾದರಿಯ ವಿಧಾನ: ಕೇರಳ ಸರ್ಕಾರವು ಕೇವಲ ಸ್ಯಾಟಲೈಟ್ ವರದಿಯನ್ನು ನಂಬದೆ, 2014 ರಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಮತ್ತು ತಜ್ಞರ ಒಳಗೊಂಡ ವಿಶೇಷ ಸಮಿತಿಯನ್ನು ರಚಿಸಿತು. ಈ ಸಮಿತಿಯು ಪ್ರತಿ ಗ್ರಾಮಕ್ಕೂ ಭೌತಿಕವಾಗಿ (ಖುದ್ದಾಗಿ ಸ್ಥಳಕ್ಕೆ ಹೋಗಿ) ಭೇಟಿ ನೀಡಿ, ವಾಸ್ತವದಲ್ಲಿ ಎಲ್ಲೆಲ್ಲಿ ಜನರಿದ್ದಾರೆ ಮತ್ತು ಎಲ್ಲೆಲ್ಲಿ ಕೃಷಿ ಭೂಮಿ ಇದೆ ಎಂಬುದನ್ನು ಪರಿಶೀಲಿಸಿತು.
ನಾಡು ಮತ್ತು ಕಾಡಿನ ಪ್ರತ್ಯೇಕೀಕರಣ :
ಕೇರಳ ಮಾದರಿಯ ಮುಖ್ಯ ಉದ್ದೇಶ ಜನವಸತಿ ಹೊಂದಿರುವ ನಾಡು ಮತ್ತು ದಟ್ಟವಾದ ಕಾಡನ್ನು ಪ್ರತ್ಯೇಕಿಸುವುದು.
• ಖುದ್ದಾಗಿ ನಡೆಸಿದ ಸರ್ವೆಯ ಮೂಲಕ ಮಾನವ ವಸತಿಗಳು, ತೋಟಗಾರಿಕೆ ಭೂಮಿಗಳು, ಕೃಷಿ ಪ್ರದೇಶಗಳು ಮತ್ತು ಸಾರ್ವಜನಿಕ ಮೂಲಸೌಕರ್ಯಗಳಿರುವ ಜಾಗಗಳನ್ನು ವರದಿಯ ಕಠಿಣ ನಿಯಮಗಳಿಂದ ಹೊರಗಿಡಲಾಯಿತು.
• ಕೇವಲ ನೈಜ ಅರಣ್ಯ ಮತ್ತು ಸಂರಕ್ಷಿತ ವನ್ಯಜೀವಿ ವಲಯಗಳನ್ನು ಮಾತ್ರ ಪರಿಸರ ಸೂಕ್ಷ್ಮ ಪ್ರದೇಶಗಳಾಗಿ ಉಳಿಸಿಕೊಳ್ಳಲಾಯಿತು.
ವ್ಯಾಪ್ತಿ ಕಡಿತ (ಕೇರಳಕ್ಕೆ ಸಿಕ್ಕ ಯಶಸ್ಸು) :
ಕೇರಳವು ತನ್ನ ಭೌತಿಕ ಸರ್ವೆಯ ವೈಜ್ಞಾನಿಕ ವರದಿಯನ್ನು ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ಗೆ ಸಲ್ಲಿಸಿ ವಿನಾಯಿತಿ ಕೋರಿತು.
• ಇದರ ಪರಿಣಾಮವಾಗಿ, ಮೂಲ ಕಸ್ತೂರಿ ರಂಗನ್ ವರದಿಯಲ್ಲಿ ಕೇರಳದ ಪಾಲಿಗೆ ನಿಗದಿಯಾಗಿದ್ದ ಸುಮಾರು 13,108 ಚದರ ಕಿಲೋಮೀಟರ್ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯು, ಭೌತಿಕ ಸರ್ವೆಯ ಬಳಿಕ ಕೇವಲ 9,993 ಚದರ ಕಿಲೋಮೀಟರ್ಗೆ ಇಳಿಕೆಯಾಯಿತು.
• ಅಂದರೆ ಸುಮಾರು 3,000 ಕ್ಕೂ ಹೆಚ್ಚು ಚದರ ಕಿಲೋಮೀಟರ್ನಷ್ಟು ಜನವಸತಿ ಮತ್ತು ಕೃಷಿ ಭೂಮಿಯನ್ನು ನಿರ್ಬಂಧಗಳಿಂದ ಮುಕ್ತಗೊಳಿಸಲು ಸಾಧ್ಯವಾಯಿತು.
ಕರ್ನಾಟಕದಲ್ಲಿ ಇದರ ಪ್ರಸ್ತುತತೆ ಏನು?
ಕರ್ನಾಟಕದಲ್ಲಿ ಕಸ್ತೂರಿ ರಂಗನ್ ವರದಿಯ ಪ್ರಕಾರ ಸುಮಾರು 20,668 ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಲಾಗಿದೆ. ಒಂದು ವೇಳೆ ಕರ್ನಾಟಕ ಸರ್ಕಾರವೂ ಕೂಡ ತಜ್ಞರ ಸಮಿತಿ ನಡೆಸಿ ಕೇರಳ ಮಾದರಿಯ ಭೌತಿಕ ಸರ್ವೆ ಕೈಗೊಂಡರೆ, ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದ ರೈತರ ಕೃಷಿ ಭೂಮಿ ಮತ್ತು ಹಳ್ಳಿಗಳು ಸೇರಿ ಸುಮಾರು 5,000 ಚದರ ಕಿಲೋಮೀಟರ್ ಪ್ರದೇಶವನ್ನು ಈ ಕಠಿಣ ವರದಿಯ ವ್ಯಾಪ್ತಿಯಿಂದ ಹೊರಗಿಡಬಹುದು ಎಂಬುದು ತಜ್ಞರ ಲೆಕ್ಕಾಚಾರವಾಗಿದೆ.


