
ಮದುವೆ ಜವಳಿ ಖರೀದಿಸಿ ಮನೆಗೆ ಮರಳಬೇಕಿದ್ದ ಮಗ ಮಸಣ ಸೇರಿದ.!!ಚರಂಡಿಯಲ್ಲಿ ಶವ ಪತ್ತೆ.!
ಇನ್ನೇನು ಕೇಲವೆ ದಿನಗಳಲ್ಲಿ ಹಸೆಮಣೆ ಏರಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ 31 ವರ್ಷದ ಸುಂದರ ಯುವಕನೊಬ್ಬನನ್ನು ಆತನ ಮಾಜಿ ಮಹಿಳಾ ಸಹೋದ್ಯೋಗಿ ಹಾಗೂ ಆಕೆಯ ಸಂಗಾತಿ ಸೇರಿ ಅತ್ಯಂತ ಬರ್ಬರವಾಗಿ ಹತ್ಯೆ ಮಾಡಿ, ಶವವನ್ನು ರಸ್ತೆ ಬದಿಯ ಚರಂಡಿಗೆ ಎಸೆದಿರುವ ಘಟನೆಯೊಂದು ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ಕೊಲೆಯಾದ ದುರ್ದೈವಿಯನ್ನು ಯುವರಾಜ್ ಸಿಂಗ್ ಮಂಚಂದಾ ಎಂದು ಗುರುತಿಸಲಾಗಿದ್ದು, ಈ ಹತ್ಯೆಗೆ ಹಣಕಾಸಿನ ವಿವಾದವೇ ಮೂಲ ಕಾರಣ ಎಂದು ಶಂಕಿಸಲಾಗಿದೆ….
news.ashwasurya.in
ಅಶ್ವಸೂರ್ಯ/ದೆಹಲಿ : ಸೆಪ್ಟೆಂಬರ್ 6 ರಂದು ಯುವರಾಜ್ ಸಿಂಗ್ ತನ್ನ ಸಹೋದರಿಯರೊಂದಿಗೆ ದೆಹಲಿಯ ಲಜಪತ್ ನಗರ ಮಾರುಕಟ್ಟೆಗೆ ತೆರಳಿ ಮದುವೆಗೆ ಬೇಕಾದ ಶೆರ್ವಾನಿ ಬಟ್ಟೆಗಳನ್ನು ಖರೀದಿಸಿದ್ದರು. ಸಂಜೆ 4:15 ರ ಸುಮಾರಿಗೆ ಸಮೀಪದ ಉಪಹಾರ ಗೃಹವೊಂದರಲ್ಲಿ ಊಟ ಮುಗಿಸಿದ ನಂತರ, ಗುರುಗ್ರಾಮ್ನಲ್ಲಿರುವ ತನ್ನ ಹಳೆಯ ಮಹಿಳಾ ಸಹೋದ್ಯೋಗಿಯನ್ನು ತುರ್ತಾಗಿ ಭೇಟಿಯಾಗಬೇಕೆಂದು ಹೇಳಿ ತೆರಳಿದ್ದರು. ಅವರ ಸಹೋದರಿಯರು ವಾಹನದಲ್ಲಿ ಮನೆಗೆ ಮರಳಿದ್ದರು. ಅಂದು ಸಂಜೆ 7 ಗಂಟೆಗೆ ಕುಟುಂಬಸ್ಥರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದ ಯುವರಾಜ್, ರಾತ್ರಿ 10 ಗಂಟೆಗೆ ಮನೆಗೆ ಬರುವುದಾಗಿ ತಿಳಿಸಿದ್ದರು. ಆದರೆ ಆ ನಂತರ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಎರಡು ದಿನಗಳ ಬಳಿಕ ಸೆಪ್ಟೆಂಬರ್ 8 ರಂದು ಅಪರಾಹ್ನ 4:16 ಕ್ಕೆ ಅವರ ಮೊಬೈಲ್ನಿಂದ ಕಡೆಯದಾಗಿ ಸಂದೇಶ ಬಂದಿದ್ದು, ನಂತರ ಸಂಪೂರ್ಣವಾಗಿ ಸ್ವಿಚ್ಡ್ ಆಫ್ ಆಗಿತ್ತು. ಆತಂಕಗೊಂಡ ಕುಟುಂಬಸ್ಥರು ಸೆಪ್ಟೆಂಬರ್ 11 ರಂದು ಲಜಪತ್ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ತನಿಖೆ ಕೈಗೆತ್ತಿಕೊಂಡ ಪೊಲೀಸರು ಯುವರಾಜ್ ಅವರ ಕರೆ ವಿವರಗಳು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಹಾಗೂ ಕಚೇರಿಯ ವಿವರಗಳನ್ನು ಪರಿಶೀಲಿಸಿದಾಗ, ಅವರು ಕಡೆಯದಾಗಿ ಗುರುಗ್ರಾಮ್ನಲ್ಲಿ ವಾಸವಿದ್ದ ಮಾಜಿ ಸಹೋದ್ಯೋಗಿ ವಾಟ್ಸ್ ಎಂಬ ಮಹಿಳೆಯನ್ನು ಭೇಟಿಯಾಗಲು ಹೋಗಿರುವುದು ದೃಢಪಟ್ಟಿತು. ಆಕೆಯ ದೂರವಾಣಿಯೂ ಸ್ಥಗಿತಗೊಂಡಿದ್ದರಿಂದ ಆಕೆಯ ಚಲನವಲನಗಳ ಮೇಲೆ ನಿಗಾ ಇರಿಸಿದ ಪೊಲೀಸರು, ಆಕೆ ಬಳಸುತ್ತಿದ್ದ ಹೊಸ ಸಂಖ್ಯೆಯನ್ನು ಪತ್ತೆಹಚ್ಚಿ ಉತ್ತರಾಖಂಡದಲ್ಲಿ ಆಕೆಯನ್ನು ಹಾಗೂ ಆಕೆಯ ಸಂಗಾತಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಇಬ್ಬರೂ ಆರೋಪಿಗಳು ಯುವರಾಜ್ನನ್ನು ಹತ್ಯೆ ಮಾಡಿ, ಗುರುಗ್ರಾಮ್ನಲ್ಲಿರುವ ತಮ್ಮ ಮನೆಯ ಸಮೀಪದ ಚರಂಡಿಗೆ ಶವವನ್ನು ಎಸೆದಿರುವುದಾಗಿ ಒಪ್ಪಿಕೊಂಡಿದ್ದಾರೆ.
ಇನ್ನೊಂದೆಡೆ, ಗುರುಗ್ರಾಮ್ ಪೊಲೀಸರ ನಡೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸೆಪ್ಟೆಂಬರ್ 10 ರಂದೇ ಅಪರಿಚಿತ ಶವ ಪತ್ತೆಯಾಗಿದ್ದರೂ ಗುರುತು ಪತ್ತೆ ಮಾಡುವ ಜಾಲತಾಣದಲ್ಲಿ ಮಾಹಿತಿ ದಾಖಲಿಸದೆ ಹಾಗೂ ಕುಟುಂಬಕ್ಕೆ ಮಾಹಿತಿ ನೀಡದೆ ಸೆಪ್ಟೆಂಬರ್ 14 ರಂದೇ ಪೊಲೀಸರು ಶವ ಸಂಸ್ಕಾರ ಪೂರೈಸಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಯುವರಾಜ್ ಅವರ ತಂದೆ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು, ತಾಯಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇಡೀ ಕುಟುಂಬಕ್ಕೆ ಯುವರಾಜ್ ಅವರೊಬ್ಬರೇ ಆಸರೆಯಾಗಿದ್ದರು. ನ್ಯಾಯಕ್ಕಾಗಿ ಆಗ್ರಹಿಸಿರುವ ಕುಟುಂಬವು ಮರಣೋತ್ತರ ಪರೀಕ್ಷೆಯ ದಾಖಲೆ, ಡಿಎನ್ಎ ಮಾದರಿಗಳು ಮತ್ತು ಯುವರಾಜ್ ಅವರ ವಸ್ತುಗಳನ್ನು ಒದಗಿಸುವಂತೆ ಒತ್ತಾಯಿಸಿದೆ. ಸದ್ಯ ನ್ಯಾಯಾಲಯವು ಇಬ್ಬರೂ ಆರೋಪಿಗಳನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು, ಹತ್ಯೆಯ ಹಿಂದಿನ ನೈಜ ಕಾರಣಗಳ ಬಗ್ಗೆ ತನಿಖೆ ಮುಂದುವರಿದಿದ್ದು ಇನ್ನಷ್ಟು ಮಾಹಿತಿ ಹೊರ ಬರಬೇಕಿದೆ.


