ರೇಣುಕಾ ಸ್ವಾಮಿ ಹತ್ಯೆ ಪ್ರಕರಣ : ಪ್ರದೋಷ್ ಇನ್ನು ಮುಂದೆ ಮಾಫಿ ಸಾಕ್ಷಿ.! ಕೋರ್ಟ್ ಒಪ್ಪಿಗೆ.ದರ್ಶನ್ ಗೆ ಬಾರಿ ಹಿನ್ನಡೆ.
news.ashwasurya.in

ಅಶ್ವಸೂರ್ಯ/ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 14ನೇ ಆರೋಪಿ ಪ್ರದೋಷ್ನನ್ನು(Pradosh) ಮಾಫಿ ಸಾಕ್ಷಿಯಾಗಿ ಪರಿಗಣಿಸಲು 59ನೇ ಸಿಸಿಹೆಚ್ ನ್ಯಾಯಾಲಯ ಅನುಮತಿ ನೀಡಿದೆ.
ಇಂದು ಅರ್ಜಿಯನ್ನು ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ ಪ್ರದೋಷ್ ಮಾಫಿ ಸಾಕ್ಷಿಗೆ ಇತರ ಆರೋಪಿಗಳು ಆಕ್ಷೇಪಿಸುವಂತಿಲ್ಲ ಎಂದು ಮಹತ್ವದ ಆದೇಶ ಪ್ರಕಟಿಸಿದೆ.
ಪ್ರಕರಣದಲ್ಲಿ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನು ಸ್ವೀಕರಿಸುವಂತೆ ಪ್ರಾಸಿಕ್ಯೂಷನ್ ಪರ ವಕೀಲರು ವಾದಿಸಿದ್ದರು. ಆದರೆ ದರ್ಶನ್ (Darashan) ಪರ ವಕೀಲ ಹಷ್ಮತ್ ಪಾಷಾ ಅವರು ಮಾಫಿ ಅರ್ಜಿಯನ್ನು ಸ್ವೀಕರಿಸಬಾರದು ಎಂದು ಪ್ರತಿವಾದಿಸಿದ್ದರು. ಇದೀಗ ನ್ಯಾಯಾಲಯವೇ ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಪುರಸ್ಕರಿಸಿದೆ.
ಕೋರ್ಟ್ ಮಾಫಿ ಅರ್ಜಿಯನ್ನು ಸ್ವೀಕರಿಸಿ ಮುಂದಿನ ಪ್ರಕ್ರಿಯೆಗೆ ಅವಕಾಶ ನೀಡಲಿರುವುದರಿದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಹಾಗೂ ವಿಚಾರಣೆಯಲ್ಲಿ ಮುಂದೆ ಹೊಸ ಬೆಳವಣಿಗೆಗಳು ಎದುರಾಗಬಹುದು. ಇದು ದರ್ಶನ್ ಪರ ವಾದದ ಮೇಲೂ ದೊಡ್ಡಮಟ್ಟದ ಪರಿಣಾಮ ಬೀರುವ ಸಾಧ್ಯತೆ ಇದೆ.

ಮಾಫಿ ಸಾಕ್ಷಿ ಪ್ರದೋಷ್ ಪಾತ್ರವೇನು?
ಗಿರಿನಗರದಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿರುವ ಪ್ರದೋಷ್, ಇತ್ತೀಚಿನ ವರ್ಷಗಳಲ್ಲಿ ನಟ ದರ್ಶನ್ ಅವರ ಹತ್ತಿರದ ಬಳಗದಲ್ಲಿ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ. ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು, ಐಟಿ ಕಂಪನಿಯಲ್ಲಿ ಭಾರಿ ಮೊತ್ತದ ವೇತನ ಪಡೆಯುತ್ತಿದ್ದರೂ ಆತನಿಗೆ ಅಭಿನಯ ಕ್ಷೇತ್ರದಲ್ಲಿ ಅಪಾರ ಆಸಕ್ತಿಯಿತ್ತು.
ಸಿನಿಮಾಗಳಲ್ಲಿ ನಟಿಸುವ ಈ ಆಸಕ್ತಿಯೇ ಆತನನ್ನು ದರ್ಶನ್ ಸಂಪರ್ಕಕ್ಕೆ ತಂದಿತ್ತು. ಐಟಿ ಕೆಲಸದ ಜೊತೆಗೆ ದರ್ಶನ್ ಅಭಿನಯದ ‘ಬೃಂದಾವನ’ ಹಾಗೂ ‘ಬುಲ್ಬುಲ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಪ್ರದೋಶ್ ಅಭಿನಯಿಸಿದ್ದ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರದೋಶ್ ಪ್ರಮುಖ ಪಾತ್ರ ವಹಿಸಿದ್ದು, ಕೃತ್ಯದ ನಂತರ ದರ್ಶನ್ ಪಾರು ಮಾಡಲು ತೀವ್ರ ಯತ್ನ ನಡೆಸಿದ್ದ. ಈ ಕೊಲೆ ಪ್ರಕರಣದಲ್ಲಿ ತನ್ನ ಹೆಸರು ಎಲ್ಲಿಯೂ ಬಾರದಂತೆ ನೋಡಿಕೊಳ್ಳಲು ದರ್ಶನ್, ಪ್ರದೋಶ್ಗೆ 30 ಲಕ್ಷ ರೂಪಾಯಿ ಹಣವನ್ನು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಪ್ರದೋಶ್ ನಿವಾಸದಲ್ಲಿದ್ದ ಈ 30 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದು, ಈ ಕುರಿತು ನ್ಯಾಯಾಲಯಕ್ಕೆ ಅಧಿಕೃತ ಮಾಹಿತಿ ಸಲ್ಲಿಸಿದ್ದಾರೆ.

ಮಾಫಿ ಸಾಕ್ಷಿ ಪ್ರದೋಷ್ ಸಲ್ಲಿಸಿದ ಅರ್ಜಿಯಲ್ಲಿ ಏನಿದೆ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೋಷ್(Pradosh) ನ್ಯಾಯಾಲಯಕ್ಕೆ ಸಲ್ಲಿಸಿರುವ 11 ಪುಟಗಳ ಕ್ಷಮಾದಾನ ಅರ್ಜಿ (ಮಾಫಿ ಸಾಕ್ಷಿ) ಪ್ರಕರಣಕ್ಕೆ ದೊಡ್ಡ ತಿರುವು ನೀಡಿದೆ.
ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿರುವ ಪ್ರದೋಷ್, ನಟ ದರ್ಶನ್ ಪರಿಚಯವಾದ ದಿನದಿಂದ ಹಿಡಿದು ಜೈಲು ಪಾಲಾಗುವವರೆಗಿನ ಇಡೀ ಘಟನಾವಳಿಯನ್ನು ಎಳೆಎಳೆಯಾಗಿ ಸಿಸಿಎಚ್-59 ನ್ಯಾಯಾಧೀಶರ ಮುಂದೆ ಬಿಚ್ಚಿಟ್ಟಿದ್ದಾನೆ.
ಜಯನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ವೇಳೆ 2003 ರಿಂದ ದರ್ಶನ್ ನನಗೆ ಪರಿಚಯ. 2024 ರ ಜೂನ್ 8 ರಂದು ನಾನು ದರ್ಶನ್ ಮನೆಗೆ ತೆರಳಿದ್ದೆ. ಅಲ್ಲಿಂದ ನನ್ನನ್ನು ದರ್ಶನ್ ‘ಸ್ಟೋನಿ ಬ್ರೂಕ್ಸ್’ ರೆಸ್ಟೋರೆಂಟ್ಗೆ ಕರೆದೊಯ್ದರು.
ಮಧ್ಯಾಹ್ನ 3 ಗಂಟೆಗೆ ಪವನ್ ರೆಸ್ಟೋರೆಂಟ್ಗೆ ಬಂದು ದರ್ಶನ್ಗೆ ಮೊಬೈಲ್ನಲ್ಲಿ ಏನೋ ತೋರಿಸಿದ್ದ. ಅದನ್ನು ನೋಡಿ ಕೋಪಗೊಂಡ ದರ್ಶನ್, ತಕ್ಷಣವೇ ಪವಿತ್ರಾ ಗೌಡಗೆ ಕರೆ ಮಾಡಿ ಮಾತನಾಡಿದರು. ಬಳಿಕ ಪವಿತ್ರಾ ಗೌಡ ನಿವಾಸದ ಕಡೆಗೆ ಕಾರು ಚಲಾಯಿಸುವಂತೆ ನನಗೆ ಸೂಚಿಸಿದರು.
ಸಂಜೆ 4:30 ಕ್ಕೆ ಪವಿತ್ರಾ ಗೌಡ ನಿವಾಸ ತಲುಪಿದ ದರ್ಶನ್ ಹಾಗೂ ಪವಿತ್ರಾ, ಒಂದೇ ಕಾರಿನಲ್ಲಿ ಆರ್ಆರ್ ನಗರದ ಪಟ್ಟಣಗೆರೆ ಶೆಡ್ಗೆ ತಲುಪಿದರು. ಶೆಡ್ಗೆ ಪ್ರವೇಶಿಸಿದಾಗ 30 ವರ್ಷದ ರೇಣುಕಾಸ್ವಾಮಿ ತಲೆಬಾಗಿಸಿಕೊಂಡು ಕುಳಿತಿದ್ದ. ಆತನ ಸುತ್ತ ರಾಘವೇಂದ್ರ, ಪವನ್, ನಾಗರಾಜ್ ಹಾಗೂ ನಂದೀಶ್ ಇದ್ದರು.
“ನನ್ನ ಪವಿತ್ರಾಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತೀಯಾ?” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ ದರ್ಶನ್, ರೇಣುಕಾಸ್ವಾಮಿಗೆ ಹೊಡೆದರು. ನಂತರ ದರ್ಶನ್ ಸೂಚನೆಯಂತೆ ಪವಿತ್ರಾ ಗೌಡ ಚಪ್ಪಲಿಯಿಂದ ರೇಣುಕಾಸ್ವಾಮಿಗೆ ಹೊಡೆದರು.
ರೇಣುಕಾಸ್ವಾಮಿಯ ಬಟ್ಟೆ ಬಿಚ್ಚಿ ಒಳಉಡುಪಿನಲ್ಲಿ ನಿಲ್ಲಿಸಲಾಯಿತು. ನಂದೀಶ್ ಆತನನ್ನು ಟಾಟಾ ಏಸ್ ವಾಹನಕ್ಕೆ ನೇಣು ಹಾಕಲು ಯತ್ನಿಸಿದರೆ, ನಾಗರಾಜ್ ನೈಲಾನ್ ಹಗ್ಗದಿಂದ ಹಾಗೂ ನಂದೀಶ್-ಪವನ್ ಮರದ ಕೋಲಿನಿಂದ ಬಾರಿಸಿದರು. ಸಿಗರೇಟ್ನಿಂದ ಸುಟ್ಟರು
ಗನ್ ತೋರಿಸಿ ಬೆದರಿಸಿದ್ರು
ಸಂಜೆ ದರ್ಶನ್ ಹೋದ ಮೇಲೆ ರೇಣುಕಾಸ್ವಾಮಿ ಮೃತಪಟ್ಟಿದ್ದನ್ನು ಗಮನಿಸಿ ನಾನು ಮನೆಗೆ ಓಡಿಹೋಗಿ ವಿಷಯ ತಿಳಿಸಿದೆ. ವಿಷಯ ಕೇಳಿ ಆಘಾತಕ್ಕೊಳಗಾದ ದರ್ಶನ್, ತಮ್ಮ ಬಳಿ ಇದ್ದ ಗನ್ ತೆಗೆದು “ನೀನು ನನಗೆ ಸಹಾಯ ಮಾಡಲೇಬೇಕು, ಇಲ್ಲದಿದ್ದರೆ ನಾನು ಗುಂಡು ಹಾರಿಸಿಕೊಂಡು ಸಾಯುತ್ತೇನೆ” ಎಂದು ನನಗೆ ಬೆದರಿಕೆ ಹಾಕಿದರು.

ನಾನು ಇನ್ಸ್ಪೆಕ್ಟರ್ ವಿನಯ್ಗೆ ಕರೆ ಮಾಡಿ ವಿಷಯ ತಿಳಿಸಿದಾಗ, “ಪ್ರಕರಣ ಗಂಭೀರವಾಗಿದೆ, ಯಾರನ್ನಾದರೂ ಶರಣಾಗುವಂತೆ ಮಾಡಿ” ಎಂದು ಸಲಹೆ ನೀಡಿದರು. ರಾಘವೇಂದ್ರ, ನಂದೀಶ್ ಮತ್ತು ಪವನ್ ಶರಣಾಗಲು ಒಪ್ಪಿಕೊಂಡಾಗ, ರೇಣುಕಾಸ್ವಾಮಿ ಮೃತದೇಹವನ್ನು ‘ಸತ್ವ ಅಪಾರ್ಟ್ಮೆಂಟ್’ ಬಳಿಯ ಚರಂಡಿಗೆ ಬಿಸಾಡಿ, ಬಳಿಕ ಅವರು ಕಾಮಾಕ್ಷಿಪಾಳ್ಯ ಠಾಣೆಗೆ ಸರೆಂಡರ್ ಆಗಲು ತೆರಳಿದರು.
ಈ ಮಧ್ಯೆ ಶವ ಸಾಗಾಟ, ಸಾಕ್ಷಿ ಮುಚ್ಚಿಹಾಕಲು ಮತ್ತು ಪೊಲೀಸರಿಗೆ ಶರಣಾಗುವವರಿಗೆ ನೀಡಲು 30 ಲಕ್ಷ ರೂ. ಹಣವನ್ನು ಹೇಗೆ ಹೊಂದಿಸಲಾಯಿತು ಹಾಗೂ ಯಾರ್ಯಾರಿಗೆ ಹಂಚಲಾಯಿತು ಎಂಬ ಸಂಪೂರ್ಣ ವಹಿವಾಟಿನ ವಿವರವನ್ನೂ ಪ್ರದೋಷ್ ಬರೆದಿದ್ದಾರೆ.
ಹಲ್ಲೆ ನಡೆಯುತ್ತಿದ್ದಾಗ ನಾನು ರೇಣುಕಾಸ್ವಾಮಿಯನ್ನು ರಕ್ಷಿಸಲು ಯತ್ನಿಸಿದೆ, ಹಲ್ಲೆ ನಿಲ್ಲಿಸುವಂತೆ ದರ್ಶನ್ ಮತ್ತು ಇತರರಲ್ಲಿ ಮನವಿ ಮಾಡಿದೆ. ಆದರೆ ಅವರು ಕೇಳಲಿಲ್ಲ. ಈ ಇಡೀ ಕೃತ್ಯದಲ್ಲಿ ಭಾಗಿಯಾಗಿದ್ದಕ್ಕೆ ನನಗೆ ಈಗ ತೀವ್ರ ಪಶ್ಚಾತ್ತಾಪವಾಗುತ್ತಿದ್ದು, ನ್ಯಾಯಾಲಯದ ಮುಂದೆ ಸತ್ಯ ಹೇಳಲು ಮಾಫಿ ಸಾಕ್ಷಿಯಾಗುತ್ತಿದ್ದೇನೆ ಎಂದು ಪ್ರದೋಷ್ ತಮ್ಮ 11 ಪುಟಗಳ ಸುದೀರ್ಘ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ..


