ಕ್ರಿಕೆಟ್ ಆಟಗಾರ ರೋಹಿತ್ ಅಕಾಲಿಕ ನಿಧನ.! ಆತನ ಅಂತಿಮ ಯಾತ್ರೆಯಲ್ಲಿ ಬ್ಯಾಟ್, ಬಾಲ್ ಹಿಡಿದು ನೆಚ್ಚಿನ ಆಟಗಾರನಿಗೆ ಕಣ್ಣೀರಿನ ವಿದಾಯ..!
news.ashwasurya.in
ಅಶ್ವಸೂರ್ಯ/ಗುಜರಾತ್ : ಯಾವುದೇ ಆಟವಿರಲಿ ಆ ಆಟಗಾರನಿಗೆ ಆತನ ಆಟವೇ ಉಸಿರಾಗಿರುತ್ತದೆ. ಆಟಗಾರನ ಉಸಿರು ನಿಂತ ಮೇಲೂ ಆಟದ ಮೇಲಿನ ಪ್ರೀತಿ ಕಮ್ಮಿಯಾಗುವುದಿಲ್ಲ ಎಂಬುದಕ್ಕೆ ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಸ್ಥಳೀಯ ಕ್ರಿಕೆಟ್ ಆಟಗಾರ ರೋಹಿತ್ ಅವರು ಅಕಾಲಿಕ ಸಾವಿಗೆ ತುತ್ತಾಗುತ್ತಾರೆ. ಅಲ್ಲಿನ ಅಭಿಮಾನಿಗಳು ಬೇಸರಗೊಂಡಿದ್ದು, ಅಲ್ಲಿನ ನಿವಾಸಿಗಳಲ್ಲಿ ಸೂತಕದ ಮೌನ ಮನೆ ಮಾಡಿತ್ತು.
ರೋಹಿತ್ ಅವರ ಅಂತಿಮ ಯಾತ್ರೆ ಮಾತ್ರ ಎಲ್ಲರ ಕಣ್ಣುಗಳು ಒದ್ದೆಯಾಗುವಂತೆ ಮಾಡಿವೆ. ಕ್ರಿಕೆಟ್ ಕ್ರೀಡೆಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಈ ಯುವಕನಿಗೆ ಕಣ್ಣೀರಿನ ವಿದಾಯ ಹೇಳಿದ ಸ್ನೇಹಿತರು ಮತ್ತು ಕುಟುಂಬಸ್ಥರು, ಸಾಂಪ್ರದಾಯಿಕ ವಿಧಿವಿಧಾನಗಳ ಜೊತೆಗೆ ಆತನ ನೆಚ್ಚಿನ ಕ್ರಿಕೆಟ್ ಬ್ಯಾಟ್ ಹಾಗೂ ಬಾಲ್ಗಳನ್ನು ಹಿಡಿದು ಸಾಗುವ ಮೂಲಕ ಅತ್ಯಂತ ವಿಶಿಷ್ಟ ಹಾಗೂ ಭಾವನಾತ್ಮಕ ಗೌರವ ಸಲ್ಲಿಸಿದ್ದಾರೆ ಇದು ನಿಜಕ್ಕೂ ಅವಿಸ್ಮರಣೀಯ ಕ್ಷಣವಾಗಿತ್ತು.

ರೋಹಿತ್ ಕೇವಲ ಆಟಗಾರನಲ್ಲ, ಬದಲಾಗಿ ಸ್ಥಳೀಯ ಕ್ರಿಕೆಟ್ ಮೈದಾನದಲ್ಲಿ ಚಿರಪರಿಚಿತ ಪ್ರತಿಭಾನ್ವಿತ ಆಟಗಾರ. ಇವರು ತಮ್ಮ ಬೌಲಿಂಗ್ನಿಂದಲೇ ಹೆಸರುವಾಸಿಯಾಗಿದ್ದರು. ಮೈದಾನದಲ್ಲಿ ರೋಹಿತ್ ನೀಡುತ್ತಿದ್ದ ಪ್ರದರ್ಶನ ಅಲ್ಲಿನ ಜನರ ಚಿತ್ತ ಕದ್ದಿತ್ತು. ರೋಹಿತ್ ನಿಜಕ್ಕೂ ಸ್ನೇಹಪರ ಸ್ವಭಾವದವರಾಗಿದ್ದರು. ಯಾವಾಗಲೂ ಸೌಮ್ಯ ಮುಖದೊಂದಿಗೆ ಸಣ್ಣ ನಗುವು ಇದ್ದೇ ಇರುತ್ತಿತ್ತು. ಹೀಗಾಗಿ ಇವರು ಸ್ಥಳೀಯರ ಪ್ರೀತಿಯ ಹುಡುಗನಾಗಿದ್ದ.

ಅಂತ್ಯಕ್ರಿಯೆಯ ಮೆರವಣಿಗೆ ಮುಂದುವರೆದಂತೆ, ಗಲ್ಲಿಗಳಲ್ಲಿ ಜನರು ರೋಹಿತ್ ಅವರನ್ನು ನೋಡುತ್ತಾ ಕಣ್ಣೀರು ಸುರಿಸಿದರು. ರೋಹಿತ್ ಅವರ ಅಂತ್ಯಕ್ರಿಯೆಯ ಮೆರವಣಿಗೆಯು ಕ್ರೀಡೆಯು ವ್ಯಕ್ತಿಯ ಗುರುತಾಗಲು ಹೇಗೆ ಸಾಧ್ಯ ಎಂಬುದಕ್ಕೆ ಸಾಕ್ಷಿಯಾಗಿದೆ. ಸಾಂಪ್ರದಾಯಿಕ ಅಂತಿಮ ವಿಧಿವಿಧಾನಗಳಿಗಿಂತ ಭಿನ್ನವಾಗಿ,ಮೆರವಣಿಗೆ ನಡೆಸಲಾಯಿತು. ರೋಹಿತ್ ಅವರ ನೆಚ್ಚಿನ ಕ್ರೀಡಾ ಪರಿಕರಗಳು ಅಂತಿಮ ಯಾತ್ರೆಯಲ್ಲಿ ಅಭಿಮಾನಿಗಳು ಹಿಡಿದು ಸಾಗಿದರು. ಇದರ ದೃಶ್ಯಗಳು ಈಗ ಸಾಮಾಜಿಕ ಜಾಲತಾಣದಲ್ಲಿ
ಭಾರಿ ವೈರಲ್ ಆಗುತ್ತಿದ್ದು ಇದು ಸ್ಥಳೀಯ ಚಿರಪರಿಚಿತ ಆಟಗಾರನಿಗೆ ಸಿಗಬೇಕಾದ ಗೌರವವು ಹೌದು…ಈಗ ರೋಹಿತ್ ಜೋತೆಗಿಲ್ಲ ಎನ್ನುವುದನ್ನು ಬಿಟ್ಟರೆ ಆತ ಪ್ರದರ್ಶಿಸಿದ ಆಟ , ಮನಸ್ಸಿನಿಂದ ತೋರಿಸಿದ ಪ್ರೀತಿ ಸ್ಥಳೀಯರಿಗೆ ಕೊನೆಯವರೆಗೂ ಜೋತೆಯಲ್ಲಿರುವುದಂತು ಸತ್ಯ.


