ನಾಲ್ವರನ್ನು ಹತ್ಯೆಗೈದು, ಕಾರೊಳಗೆ ಹಾಕಿ ಬೆಂಕಿ ಹಚ್ಚಿದ ಹೆಂಡತಿ.! ಅಪರಾಧಿಯನ್ನು ಬಯಲಿಗೆಳೆದ ಪೊಲೀಸರು.
news.ashwasurya.in
ಅಶ್ವಸೂರ್ಯ/ರಾಜಸ್ಥಾನ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರು ಅತ್ಯಂತ ಭೀಕರವಾಗಿ ಕೊಲೆಯಾಗಿದ್ದು, ಪಾಪಿಗಳು ಈ ಘಟನೆಯನ್ನು ಅಪಘಾತವೆಂಬಂತೆ ಬಿಂಬಿಸಲು ಮೃತದೇಹಗಳನ್ನು ಕಾರಿನೊಳಗೆ ಹಾಕಿ ಸುಟ್ಟು ಹಾಕಿರುವ ಘಟನೆ ರಾಜಸ್ಥನದಲ್ಲಿ ನಡೆದಿದೆ.
ರಾಜಸ್ಥಾನದ ಅಜ್ಮೀರ್ನಲ್ಲಿ ಇತ್ತೀಚೆಗಷ್ಟೇ ಕಾರೊಂದು ಬೆಂಕಿಗೆ ಆಹುತಿಯಾಗಿದ್ದು, ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಸುದ್ದಿ ಹರಡಿತ್ತು. ಆರಂಭದಲ್ಲಿ ಇದು ಅಪಘಾತ ಎಂದು ಭಾವಿಸಲಾಗಿತ್ತು. ಕಾರಿನಿಂದ ಸ್ವಲ್ಪ ದೂರದಲ್ಲಿ ಮಹಿಳೆಯೊಬ್ಬರ ಶವ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದರಿಂದ ಇದನ್ನು ಸಹಜ ಸಾವಲ್ಲ ಎಂಬುದಾಗಿ ಪೊಲೀಸರಿಗೆ ಸಂಶಯ ಬಂದಿದೆ.

ರಾಮ್ ಸಿಂಗ್ ಚೌಧರಿ, ಇವರ ತಾಯಿ ಪೂಸಿ ದೇವಿ, ರಾಮ್ ಸಿಂಗ್ನ ಎರಡನೇ ಪತ್ನಿ ಸೂರ್ಯಜ್ಞಾನ ದೇವಿ, ಚಿಕ್ಕಮ್ಮನ ಮಗಳು ಮಹಿಮಾ ಚೌಧರಿ ಮೃತಪಟ್ಟವರು. ಮೂವರ ಶವ ಕಾರೊಳಗೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸೂರ್ಯಗ್ಯಾನ್ ದೇವಿಯ ಶವ ಹತ್ತಿರದ ಹೊಲದಲ್ಲಿ ಗಂಟಲು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.!
ರಾಮ್ ಸಿಂಗ್ಗೆ 2005ರಲ್ಲಿ ಸುನಿತಾ ಎಂಬಾಕೆಯ ಜೊತೆಗೆ ಮದುವೆಯಾಗಿದ್ದರೂ ಸಹ 2019ರಲ್ಲಿ ಸೂರ್ಯಗ್ಯಾನ್ ದೇವಿಯನ್ನು ಎರಡನೇ ಮದುವೆಯಾಗಿದ್ದ. ಒಂದೇ ಮನೆಯಲ್ಲಿ ಇಬ್ಬರೂ ವಾಸವಿದ್ದರು, ಮೊದಲ ಹೆಂಡತಿಯ ವಿರೋಧದ ನಡುವೇಯೂ ಈತ ಇನ್ನೊಂದು ಮದುವೆಯಾಗಿದ್ದರಿಂದ ದಿನಲೂ ಜಗಳ ನಡೆಯುತ್ತಿತ್ತು. ಜಗಳ ವಿಕೋಪಕ್ಕೆ ತಿರುಗಿದಾಗ ಮೊದಲ ಪತ್ನಿ ಸುನೀತಾ, ಆಕೆಯ ಮಗಳು ಸರಿತಾ ಮತ್ತು ಅಪ್ರಾಪ್ತ ಮಗ ಸೇರಿ ಹರಿತವಾದ ಆಯುಧಗಳಿಂದ ನಾಲ್ವರನ್ನು ಭೀಕರವಾಗಿ ಹತ್ಯೆಗೈದಿದ್ದಾರೆ.
ಸ್ಥಳೀಯರು ನೀಡಿದ ಸುಳಿವು ಮತ್ತು ತಾಂತ್ರಿಕ ಸಾಕ್ಷ್ಯಾಧಾರಗಳ ನೆರವಿನಿಂದ ಪೊಲೀಸರು ಆರೋಪಿ ಸುನಿತಾ ಮತ್ತು ಆಕೆಯ ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ. ಜೋತೆಗೆ ಹತ್ಯೆಗೆ ಬಳಸಿದ ಕತ್ತಿಯನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಹಂತಕಿ ಮತ್ತು ಆಕೆಯ ಮಕ್ಕಳ ಕ್ರೂರ ಮನಸ್ಥಿತಿಯನ್ನು ಕಂಡು ಸ್ಥಳೀಯ ಗ್ರಾಮಸ್ಥರನ್ನು ಬೆಚ್ಚಿಬಿದ್ದಿದ್ದಾರೆ.


