ರಾಜಸ್ಥಾನ್ ಗೆಲುವಿಗೆ ಸಿಎಸ್‌ಕೆ ಶಿಳ್ಳೆ.! ಸೂರ್ಯವಂಶಿಗೆ ಧನ್ಯವಾದ ಹೇಳಿದ ಸಿಎಸ್‌ಕೆ.!

ಅಶ್ವಸೂರ್ಯ/ಚಂಡೀಗಢ್ : ಚಂಡೀಗಢ್‌ನ ಮುಲ್ಲಾನ್‌ಪುರ್‌ನ ಮಹಾರಾಜ ಯದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 47 ರನ್‌ಗಳ ಗೆಲುವನ್ನು ದಾಖಲಿಸುವ ಮೂಲಕ ಕ್ವಾಲಿಫಯರ್ 2ಗೆ ಎಂಟ್ರಿ ಕೊಟ್ಟಿದ್ದು, ಸೋತ ಹೈದರಾಬಾದ್ ಟೂರ್ನಿಯಿಂದ ಎಲಿಮಿನೇಟ್ ಆಯಿತು. ಗೆದ್ದ ರಾಜಸ್ಥಾನ್ ರಾಯಲ್ಸ್ ನಾಳೆ ( ಮೇ 29 ) ನಡೆಯಲಿರುವ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಗುಜರಾರ್ ಟೈಟನ್ಸ್ ವಿರುದ್ಧ ಸೆಣಸಾಟ ನಡೆಸಲಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ವೈಭವ್ ಸೂರ್ಯವಂಶಿ ಹಾಗೂ ಧ್ರುವ್ ಜುರೆಲ್ ಅಬ್ಬರದ ಆಟದ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 243 ರನ್ ಕಲೆಹಾಕಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 244 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಸನ್‌ರೈಸರ್ಸ್ ಹೈದರಾಬಾದ್ 19.2 ಓವರ್‌ಗಳಲ್ಲಿ 196 ರನ್‌ಗಳಿಗೆ ಆಲ್‌ಔಟ್ ಆಯಿತು.
ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡ ಸನ್ ರೈಸರ್ಸ್ ಹೈದರಾಬಾದ್ ರಾಜಸ್ಥಾನ್‌ನ ವೈಭವ್ ಸೂರ್ಯವಂಶಿ ಅಬ್ಬರಕ್ಕೆ ನಲುಗಿತು. ಬೌಲಿಂಗ್‌ನಲ್ಲಿ ಪರದಾಡಿದ ಸನ್ ರೈಸರ್ಸ್ ಹೈದರಾಬಾದ್ ತನ್ನ ಬಲಿಷ್ಠ ಬ್ಯಾಟಿಂಗ್ ವಿಭಾಗದಿಂದ ತಿರುಗೇಟು ನೀಡಲಿದೆ ಎಂದು ಅಭಿಮಾನಿಗಳು ಊಹಿಸಿದ್ದರು. ಆದರೆ ಬ್ಯಾಟಿಂಗ್‌ನಲ್ಲೂ ಸಹ ಸನ್ ರೈಸರ್ಸ್ ಪರಿಣಾಮಕಾರಿ ಎನಿಸಲಿಲ್ಲ. ತಂಡದ ಪರ ಇಶಾನ್ ಕಿಶನ್, ನಿತಿಶ್ ಕುಮಾರ್ ರೆಡ್ಡಿ ಹಾಗೂ ಸಲೀಲ್ ಅರೋರಾ ಹೊರತುಪಡಿಸಿ ಇನ್ಯಾವ ಆಟಗಾರನೂ ಸಹ 30 ರನ್ ಮುಟ್ಟಲಿಲ್ಲ.

ಹೀಗೆ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಮಕಾಡೆ ಮಲಗಿದ ಸನ್ ರೈಸರ್ಸ್ ಹೈದರಾಬಾದ್ ಮಹತ್ವದ ಪಂದ್ಯವನ್ನು ಸೋಲುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಹೀನಾಯವಾಗಿ ಟ್ರೋಲ್‌ಗೀಡಾಗಿದೆ.

ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ದೊಡ್ಡ ಮಟ್ಟದಲ್ಲಿ ಟ್ರೋಲ್ ಮಾಡಿದ್ದಾರೆ.
ಇದಕ್ಕೆ ಕಾರಣ ಲೀಗ್ ಹಂತದಲ್ಲಿ ಚೆಪಾಕ್‌ನಲ್ಲಿ ನಡೆದ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ಮುಗಿದ ಮೇಲೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಅಬ್ಬರದ ಬ್ಯಾಟಿಂಗ್ ಮಾಡಿದ್ದ ಇಶಾನ್ ಕಿಶನ್ ಚೆನ್ನೈ ಅಭಿಮಾನಿಗಳತ್ತ ತಿರುಗಿ ಮನೆಗೆ ಹೋಗಿ ಶಿಳ್ಳೆ ಹೊಡೆಯಿರಿ ಎಂದು ಕೈಸನ್ನೆ ಮಾಡುತ್ತಾ ಕಿಚಾಯಿಸಿದ್ದರು. ಅಲ್ಲದೇ ಸನ್ ರೈಸರ್ಸ್ ಹೈದರಬಾದ್‌ನ ಓವರ್ ಕಾವ್ಯ ಮಾರನ್ ಚೆನ್ನೈ ಅಭಿಮಾನಿಗಳಿಗೆ ಬಾಯಿ ಮುಚ್ಚಿಕೊಂಡು ಮನೆಗೆ ಹೊರಡಿ ಎಂದು ಕೈಸನ್ನೆ ಮಾಡಿದ್ದರು.

ಅಂದು ಇವರಿಬ್ಬರು ಚೆನ್ನೈ ಅಭಿಮಾನಿಗಳ ಜತೆ ನಡೆದುಕೊಂಡ ರೀತಿಯಿಂದ ಬೇಸರಗೊಂಡಿದ್ದ ಚೆನ್ನೈ ಅಭಿಮಾನಿಗಳು ನಿನ್ನೆಯ ಪಂದ್ಯದಲ್ಲಿ ಸನ್ ರೈಸರ್ಸ್ ಸೋಲುತ್ತಿದ್ದಂತೆ ಎಐ ಬಳಸಿ ಇಶಾನ್ ಕಿಶನ್ ತಮ್ಮ ವಿರುದ್ಧ ಮಾಡಿದ್ದ ಶಿಳ್ಳೆ ಸಂಭ್ರಮಾಚರಣೆಯ ಫೋಟೊವನ್ನು ಹಾಲು ಕುಡಿಯುತ್ತಿರುವ ಹಾಗೆ ಎಡಿಟ್ ಮಾಡಿ, ಈಗ ಚಿಕ್ಕಮಕ್ಕಳ ವಿರುದ್ಧ ಸೋತ ನೀವು ಹಾಲು ಕುಡಿದು ಮಲಗಿ ಎಂದು ಕಾಲೆಳೆದಿದ್ದಾರೆ. ಅಲ್ಲದೇ ಸನ್ ರೈಸರ್ಸ್ ಹೈದರಾಬಾದ್ ಸೋಲಿಗೆ ಕಾರಣನಾದ ವೈಭವ್ ಸೂರ್ಯವಂಶಿಯ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಧನ್ಯವಾದ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!