
ಮುಂಬಯಿ : ಕುಟುಂಬದ ನಾಲ್ವರ ಸಾವಿಗೆ ಕಲ್ಲಂಗಡಿ ಹಣ್ಣು ಕಾರಣವಲ್ಲ. ವೈದ್ಯಕೀಯ ವರದಿ ಬಿಚ್ಚಿಟ್ಟ ಸತ್ಯವೇನು.?
ಕಳೆದ ಎರಡು ದಿನದ ಹಿಂದೆ ಮುಂಬೈನಲ್ಲಿ ಕುಟುಂಬವೊಂದು ರಾತ್ರಿ ಊಟ ಮುಗಿಸಿದ ನಂತರ ಕಲ್ಲಂಗಡಿ ಹಣ್ಣು ಸೇವಿಸಿ ನಾಲ್ವರು ಸಾವನ್ನಪ್ಪಿದ ಪ್ರಕರಣ ದೇಶಾದ್ಯಂತ ದೊಡ್ಡ ಸುದ್ದುಯ ಜೋತೆಗೆ ಆತಂಕವನ್ನು ಉಂಟು ಮಾಡಿತ್ತು.ಜನ ಕಲ್ಲಂಗಡಿ ಹಣ್ಣು ತಿನ್ನುವುದನ್ನೆ ಬಿಟ್ಟಿದ್ದರು.! ಆದರೆ ಇದೀಗ ಬಂದಿರುವ ನಾಲ್ವರ ವೈದ್ಯಕೀಯ ವರದಿಯ ಪ್ರಕಾರ ಅವರ ಸಾವು ಕಲ್ಲಂಗಡಿ ಹಣ್ಣಿನಿಂದ ಉಂಟಾಗಿಲ್ಲ ಎನ್ನಲಾಗಿದೆ. ಹಾಗಾದರೆ ವೈದ್ಯಕೀಯ ವರದಿಯಲ್ಲಿ ಅಡಗಿರುವ ಸತ್ಯವಾದರು ಎನು.? ಸಂಪೂರ್ಣ ವರದಿ ಇಲ್ಲಿದೆ…..
news.ashwasurya.in
ಅಶ್ವಸೂರ್ಯ/ ಮುಂಬಯಿ : ಮುಂಬೈ ನಗರದಲ್ಲಿ ಒಂದೇ ಕುಟುಂಬದ ನಾಲ್ವರ ಸಾವಿಗೆ ಕಲ್ಲಂಗಡಿ (Watermelon) ಹಣ್ಣು ಕಾರಣವಲ್ಲ ಎನ್ನುವುದು ವೈದ್ಯಕೀಯ ಪರೀಕ್ಷೆಯ ವರದಿ ತಿಳಿಸಿದೆ. ಕಳೆದ ವಾರ ಮುಂಬೈನಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದುರು, ಇವರ ಸಾವಿಗೆ ಕಲುಷಿತ ಕಲ್ಲಂಗಡಿ ಕಾರಣ ಎಂದು ಹೇಳಲಾಗಿತ್ತು. ಇದು ಹಣ್ಣಿನ ಸುರಕ್ಷಿತ ಸೇವನೆಯ ಕುರಿತು ಚರ್ಚೆಗಳನ್ನು ಹುಟ್ಟುಹಾಕಿತ್ತು. ಆದರೆ ಇದೀಗ ವೈದ್ಯಕೀಯ ವರದಿಯಲ್ಲಿ (Forensic Examination) ಮೃತರ ದೇಹದಲ್ಲಿ ಪ್ರಬಲ ನೋವು ನಿವಾರಕವಾದ ಮಾರ್ಫಿನ್ ಪತ್ತೆಯಾಗಿದ್ದು, ಇದರಿಂದ ಸಾವು ಉಂಟಾಗುವ ಸಾಧ್ಯತೆ ಇದೆ.

ಮೊಬೈಲ್ ಪರಿಕರಗಳ ಅಂಗಡಿ ನಡೆಸುತ್ತಿದ್ದ ಅಬ್ದುಲ್ಲಾ ದೋಕಾಡಿಯಾ (45) ಮತ್ತು ಅವರ ಪತ್ನಿ ನಸ್ರೀನ್ (35) ತಮ್ಮ ಮಕ್ಕಳಾದ ಜೈನಾಬ್ (13) ಮತ್ತು ಆಯೇಷಾ (16) ಜೊತೆ ಸೇರಿ ಐವರು ಸಂಬಂಧಿಕರೊಂದಿಗೆ ಭೋಜನ ಕೂಟವನ್ನು ಆಯೋಜಿಸಿದ್ದರು. ಎಲ್ಲರೂ ಮಟನ್ ಬಿರಿಯಾನಿ ತಿಂದಿದ್ದರು. ಸಂಬಂಧಿಕರು ಹೋದ ಬಳಿಕ ಕುಟುಂಬ ಸದಸ್ಯರು ತಡರಾತ್ರಿ 1 ಗಂಟೆ ಸುಮಾರಿಗೆ ಕಲ್ಲಂಗಡಿ ಹಣ್ಣನ್ನು ತಿಂದಿದ್ದರಂತೆ, ಬೆಳಗ್ಗೆ 5 ಗಂಟೆ ಸುಮಾರಿಗೆ ಅಸ್ವಸ್ಥರಾಗಿದ್ದಾರೆ. ಎಲ್ಲರಲ್ಲೂ ವಾಂತಿ, ಅತಿಸಾರ ಕಂಡು ಬಂದಿದ್ದು, ಇದಾದ ಕೆಲವೇ ಗಂಟೆಗಳಲ್ಲಿ ಅವರು ಸಾವನ್ನಪ್ಪಿದ್ದರು.
ಮೊದಲ ಹಂತದ ವಿಧಿವಿಜ್ಞಾನ ಪರೀಕ್ಷೆಯಲ್ಲಿ ಮೃತರ ಮೆದುಳು, ಹೃದಯ ಮತ್ತು ಕರುಳುಗಳು ಸೇರಿದಂತೆ ಕೆಲವು ಅಂಗಗಳು ಹಸಿರು ಬಣ್ಣಕ್ಕೆ ತಿರುಗಿತ್ತು.ಇದು ಆಹಾರ ವಿಷದ ನಿಯಮಿತ ಪ್ರಕರಣವಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಅಬ್ದುಲ್ಲಾ ದೋಕಾಡಿಯಾ ಅವರ ದೇಹದಲ್ಲಿ ಪ್ರಬಲ ನೋವು ನಿವಾರಕವಾದ ಮಾರ್ಫಿನ್ ಪತ್ತೆಯಾಗಿದೆ. ಇದು ಈಗ ಅನುಮಾನಾಸ್ಪದ ಸಾವಿನ ಕುರಿತು ತನಿಖೆ ನಡೆಸಲು ಪೊಲೀಸರನ್ನು ಪ್ರೇರೇಪಿಸಿದೆ. ಒಂದೇ ಕುಟುಂಬದ ನಾಲ್ವರ ಸಾವಿಗೆ ಕಲ್ಲಂಗಡಿಗೆ ಸಂಬಂಧವಿದೆಯೇ ಎನ್ನುವ ಕುರಿತು ವೈಜ್ಞಾನಿಕ ದೃಢೀಕರಣದ ಅನಂತರವೇ ತೀರ್ಮಾನಗಳನ್ನು ತೆಗೆದುಕೊಳ್ಳುವುದಾಗಿ ರಾಜ್ಯ ಆಹಾರ ಮತ್ತು ಔಷಧ ಆಡಳಿತ ತಿಳಿಸಿದ್ದು, ಅಂತಿಮ ವರದಿಗಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಕ್ಷಿಣ ಮುಂಬೈನ ಜೆಜೆ ಮಾರ್ಗ್ ನಿವಾಸದಲ್ಲಿ ವಾಸವಾಗಿದ್ದ ಅಬ್ದುಲ್ಲಾ, ನಸ್ರೀನ್, ಜೈನಾಬ್ ಮತ್ತು ಆಯೇಷಾ ಅವರು ಏಪ್ರಿಲ್ 25 ರಂದು ಅಸ್ವಸ್ಥರಾಗಿ ಸಾವನ್ನಪ್ಪಿದ್ದರು. ಇವರ ಸಾವಿಗೆ ಬಿರಿಯಾನಿ ಅಥವಾ ಕಲ್ಲಂಗಡಿ ಕಾರಣವಾಗಿರಬಹುದು ಎಂದು ಶಂಕಿಸಲಾಗಿತ್ತು.
ಈ ಘಟನೆಗೂ ಮೊದಲು ಅಹಮದಾಬಾದ್ ಜಿಲ್ಲೆಯ ರಾಜ್ಪುರ ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಆಹಾರ ಸೇವಿಸಿ 60ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದರು.

ರಾಜ್ಪುರ ಗ್ರಾಮದ ಒಂದು ಕುಟುಂಬ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಅತಿಥಿಗಳಿಗೆ ‘ಸೇವ್-ಖಮ್ನಿ’ ಎಂಬ ಖಾದ್ಯ ಬಡಿಸಲಾಗಿತ್ತು. ಇದನ್ನು ಸೇವಿಸಿದ ಸ್ವಲ್ಪ ಸಮಯದ ನಂತರ ಜನರಿಗೆ ಹೊಟ್ಟೆ ನೋವು, ವಾಕರಿಕೆ, ವಾಂತಿ ಮತ್ತು ಅತಿಸಾರ ಉಂಟಾಗಿದೆ ಎನ್ನಲಾಗಿದೆ.
ಒಟ್ಟಿನಲ್ಲಿ ಕುಟುಂಬದ ನಾಲ್ವರ ಸಾವಿಗೆ ಅಸಲಿ ಕಾರಣವೇನು ಎನ್ನುವುದು ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.


