murder and suicide.!
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 14 ವರ್ಷದ ಮಗಳ ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ.!
news.ashwasurya.in
ಅಶ್ವಸೂರ್ಯ/ಬೆಂಗಳೂರು : ಬೆಂಗಳೂರಿನ ವೈಟ್ಫೀಲ್ಡ್ ಬಳಿಯ ಇಮ್ಮಡಿಹಳ್ಳಿಯಲ್ಲಿ ತಾಯಿಯೇ ತಾನು ಹೆತ್ತು ಸಾಕಿಸಲುಹಿದ 14 ವರ್ಷದ ಮುದ್ದಾದ ಮಗಳನ್ನು ತನ್ನ ಕೈಯಾರ ಕೊಂದು ನಂತರ ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ವರದಿಯಾಗಿದೆ. ನೆರೆಹೊರೆಯವರ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಮನ ನೊಯಿಸುವಂತಹ ಘಟನೆಯೊಂದು ಸಂಭವಿಸಿದೆ. ಕ್ಷಣಿಕ ಆವೇಶವೋ ಅಥವಾ ಜೀವನದ ಮೇಲಿನ ಜಿಗುಪ್ಸೆಯೋ.? ಮಗಳು ಮಾಡಿರುವ ತಪ್ಪೋ.? ತಿಳಿಯದಾಗಿದೆ ಹೆತ್ತ ತಾಯಿಯೇ ತನ್ನ ಮಗಳ ಜೀವ ತೆಗೆದು, ತಾನೂ ಆತ್ಮಹತ್ಯೆಗೆ ಶರಣಾಗಿರುವ ಭೀಕರ ಘಟನೆಯೊಂದು ವೈಟ್ಫೀಲ್ಡ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ನಡೆದಿದೆ.
ಘಟನೆಯ ವಿವರ:
ನಗರದ ವೈಟ್ಫೀಲ್ಡ್ ಸಮೀಪದ ಇಮ್ಮಡಿಹಳ್ಳಿಯಲ್ಲಿ ಈ ಕೃತ್ಯ ನಡೆದಿದೆ. 40 ವರ್ಷದ ಸುವರ್ಣ ಹಾಗೂ ಅವರ 14 ವರ್ಷದ ಪುತ್ರಿ ಕಾರುಣ್ಯ ಮೃತಪಟ್ಟವರು. ಪ್ರಾಥಮಿಕ ಮಾಹಿತಿಯ ಪ್ರಕಾರ, ಸುವರ್ಣ ಅವರು ಮೊದಲು ತನ್ನ ಮಗಳು ಕಾರುಣ್ಯಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಮಗಳು ಮೃತಪಟ್ಟಿದ್ದಾಳೆ ಎಂದು ಖಚಿತಪಡಿಸಿಕೊಂಡ ಬಳಿಕ, ಅದೇ ಕೋಣೆಯಲ್ಲಿ ತಾನು ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ಶನಿವಾರ ಮನೆಯ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಮತ್ತು ದೀರ್ಘಕಾಲದವರೆಗೆ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ನೆರೆಹೊರೆಯವರು ಮತ್ತು ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ವೈಟ್ಫೀಲ್ಡ್ ಪೊಲೀಸರು ಬಾಗಿಲು ಮುರಿದು ಒಳಪ್ರವೇಶಿಸಿದಾಗ ತಾಯಿ-ಮಗಳ ಮೃತದೇಹಗಳು ಪತ್ತೆಯಾಗಿವೆ. ಮಗಳು ಹಾಸಿಗೆಯ ಮೇಲೆ ಶವವಾಗಿ ಬಿದ್ದಿದ್ದರೆ, ತಾಯಿ ಫ್ಯಾನ್ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಸಾವಿಗೆ ಕಾರಣವೇನು?
ಸದ್ಯಕ್ಕೆ ಆತ್ಮಹತ್ಯೆ ಮತ್ತು ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಕುಟುಂಬದಲ್ಲಿನ ಆಂತರಿಕ ಕಲಹ, ಆರ್ಥಿಕ ಸಂಕಷ್ಟ ಅಥವಾ ತಾಯಿ ಸುವರ್ಣ ಅವರು ಅನುಭವಿಸುತ್ತಿದ್ದ ಯಾವುದಾದರೂ ಮಾನಸಿಕ ಒತ್ತಡ ಈ ಘಟನೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. 14 ವರ್ಷದ ಕಾರುಣ್ಯ ಇನ್ನೂ ಬಾಳಿ ಬದುಕಬೇಕಾದ ವಯಸ್ಸಿನ ಮುದ್ದಾದ ಹುಡುಗಿ ತಾಯಿಯ ಕೈಯಲ್ಲೇ ಹತ್ಯೆಯಾಗಿರುವುದು ಇಡೀ ಇಮ್ಮಡಿಹಳ್ಳಿ ಪ್ರದೇಶವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ಪೊಲೀಸರ ತನಿಖೆ:
ವಿಷಯ ತಿಳಿದ ತಕ್ಷಣ ವೈಟ್ಫೀಲ್ಡ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಫ್ಎಸ್ಎಲ್ (FSL) ತಂಡ ಕೂಡ ಸ್ಥಳಕ್ಕೆ ಆಗಮಿಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕುಟುಂಬದ ಸದಸ್ಯರ ಹೇಳಿಕೆಗಳನ್ನು ಪಡೆಯುತ್ತಿದ್ದಾರೆ. ತಾಯಿ ಸುವರ್ಣ ಅವರು ಸಾವಿಗೂ ಮುನ್ನ ಯಾವುದೇ ಡೆತ್ ನೋಟ್ ಬರೆದಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ.


