ಶೃಂಗೇರಿ : ಮದುವೆ ಮಂಟಪದಲ್ಲಿ ವಧುವಿಗೆ ಬಂದ ಅನಾಮಧೇಯ ಪತ್ರ.! ತಾಳಿ ಕಟ್ಟುವ ಮೊದಲೇ ಮಂಟಪದಿಂದ ಹೋರ ನೆಡೆದ ವಧು.!
news.ashwasurya.in
ಪವಿತ್ರ ಶೃಂಗೇರಿಯ ಶ್ರೀ ಶಾರದಾಂಬೆಯ ಕ್ಷೇತ್ರದಲ್ಲಿ ನಡೆಯಬೇಕಿದ್ದ ಮದುವೆಯೊಂದು ವಧುವಿಗೆ ಬಂದ ಅನಾಮಧೇಯ ಪತ್ರದಿಂದಾಗಿ ಅರ್ಧಕ್ಕೆ ನಿಂತಿದೆ. ವರನ ಮೇಲಿದ್ದ ಅತ್ಯಾಚಾರ ಪ್ರಕರಣ ಸೇರಿದಂತೆ ಹಲವು ಸುಳ್ಳುಗಳು ಬಯಲಾಗುತ್ತಿದ್ದಂತೆ, ನಂಬಿಕೆ ದ್ರೋಹದಿಂದ ನೊಂದ ವಧು ‘ಈ ಮದುವೆ ಬೇಡವೆಂದು ನಿರ್ಧರಿಸಿ ಮಂಟಪದಿಂದ ಹೊರನಡೆದಿದ್ದಾರೆ….
ಅಶ್ವಸೂರ್ಯ/ಚಿಕ್ಕಮಗಳೂರು : ಎಲ್ಲರ ಇಚ್ಛೆಯಂತೆ ಮದುವೆ ನಡೆದು ಹೋಗಿದ್ದರೆ ಆಕೆ ಇಂದು ಹೊಸ ಜೀವನದ ಕಡೆ ಹೆಜ್ಜೆ ಹಾಕಬೇಕಿತ್ತು. ಆದರೆ ಅಲ್ಲಿ ನೆಡೆದದ್ದೆ ಬೇರೆ ಹಸೆಮಣೆ ಏರುವ ಮುನ್ನ ವಧುವಿಗೆ ಬಂದ ಒಂದು ‘ಅನಾಮಧೇಯ ಪತ್ರ’ ಹಾಗೂ ವರನ ಸರಣಿ ಸುಳ್ಳುಗಳು ಮದುವೆ ಮಂಟಪವನ್ನೇ ರಣರಂಗವನ್ನಾಗಿಸಿವೆ. ಮದುವೆ ಶಾಸ್ತ್ರಗಳು ನಡೆಯುತ್ತಿದ್ದಾಗಲೇ ವಧು ‘ಈ ಮದುವೆ ನನಗೆ ಬೇಡ’ ಎಂದು ಮಂಟಪದಿಂದ ಹೊರನಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ನಡೆದಿದೆ.
ಮದುವೆ ಮಂಟಪದಲ್ಲಿ ಏನಾಯ್ತು.?
ಶೃಂಗೇರಿ ಪಟ್ಟಣದ ಈಡಿಗ ಸಮುದಾಯ ಭವನದಲ್ಲಿ 41 ವರ್ಷದ ದೀಕ್ಷಿತ್ ಹೆಗ್ಡೆ ಹಾಗೂ 29 ವರ್ಷದ ಸುಷ್ಮಾ ಅವರ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದೀಕ್ಷಿತ್ಗೆ ಇದು ಮೊದಲ ಮದುವೆಯಾಗಿದ್ದರೆ, ಸುಷ್ಮಾಗೆ ಇದು ಎರಡನೇ ಮದುವೆಯಾಗಿತ್ತು. ಈಗಾಗಲೇ ಸುಷ್ಮಾಗೆ ಮಗನೂ ಇದ್ದಾನೆ. ತನ್ನ ಮಗನಿಗೆ ಅಪ್ಪನ ಸ್ಥಾನ ನೀಡುವ, ತನಗೆ ಆಸರೆಯಾಗುವ ವ್ಯಕ್ತಿ ಎಂದು ನಂಬಿ ಸುಷ್ಮಾ ಈ ಸಂಬಂಧಕ್ಕೆ ಒಪ್ಪಿಕೊಂಡಿದ್ದರು.

ವಧು ಕೈ ಸೇರಿದ ಅನಾಮಧೇಯ ಪತ್ರ.? :
ಮದುವೆ ಸಂಭ್ರಮದಲ್ಲಿದ್ದ ಸುಷ್ಮಾಗೆ ಅಪರಿಚಿತ ವ್ಯಕ್ತಿಗಳಿಂದ ಬಂದ 5 ಪುಟಗಳ ದೂರು ಪತ್ರವೊಂದು ಕೈಸೇರಿದೆ ಎನ್ನಲಾಗಿದೆ. ಈ ಪತ್ರದಲ್ಲಿ ವರ ದೀಕ್ಷಿತ್ ಹೆಗ್ಡೆಯ ಬಗ್ಗೆ ಆಘಾತಕಾರಿ ವಿಷಯಗಳಿದ್ದವು. ಇದನ್ನು ಓದಿದ ಸುಷ್ಮಾ ವರನ ಕಡೆಯವರನ್ನು ಪ್ರಶ್ನಿಸಿದಾಗ ಏನೇ ಕೇಳಿದರೂ ಆಮೇಲೆ ಹೇಳುತ್ತೇನೆ ಎಂದು ಮುಂದೂಡಿಕೆ ಮಾಡುತ್ತಾ ಬಂದಿದ್ದರು. ಆದರೆ, ಇದೀಗ ಮದುಮಗನ ಸತ್ಯಗಳು ಒಂದೊಂದಾಗಿ ಹೊರಬರಲಾರಂಭಿಸಿವೆ. ಇದರಿಂದ ಆಕ್ರೋಶಗೊಂಡ ಸುಷ್ಮಾ ಮದುವೆ ನಿಲ್ಲಿಸಲು ನಿರ್ಧರಿಸಿದ್ದಾರೆ.
ವರನ ಮೇಲಿನ ಆರೋಪವೇನು.? :
ಸುಷ್ಮಾ ಆರೋಪದ ಪ್ರಕಾರ, ದೀಕ್ಷಿತ್ ಮೊದಲನೆಯದಾಗಿ ತನ್ನ ವಯಸ್ಸಿನ ಬಗ್ಗೆ ಸುಳ್ಳು ಹೇಳಿದ್ದನು. ಎರಡನೇಯದಾಗಿ ಆತನ ಮೇಲೆ ಈಗಾಗಲೇ ಕೆಲವು ಪೊಲೀಸ್ ಪ್ರಕರಣಗಳು (Police Case) ದಾಖಲಾಗಿದ್ದು, ಆ ವಿಷಯವನ್ನೂ ಮುಚ್ಚಿಡಲಾಗಿತ್ತು. ಮುಖ್ಯವಾಗಿ 2021ರಲ್ಲಿ ನಡೆದ ರಾಜ್ಯವೇ ಬೆಚ್ಚಿ ಬೀಳಿಸುವ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಲ್ಲಿ ದೀಕ್ಷಿತ್ ಆರೋಪಿ ಆಗಿದ್ದಾನೆ.!? ಜೊತೆಗೆ, ಮನೆಯಲ್ಲಿ ದೀಕ್ಷಿತ್ನ ತಾಯಿ ಆರೋಗ್ಯವೂ ಸರಿಯಿಲ್ಲ ಎಂಬ ಸತ್ಯವನ್ನು ಮದುವೆಗೂ ಮುನ್ನ ಹೇಳಿರಲಿಲ್ಲ. ಈ ಬಗ್ಗೆ ಸುಷ್ಮಾ ಈ ಹಿಂದೆ ಕೇಳಿದಾಗಲೆಲ್ಲಾ ದೀಕ್ಷಿತ್, ಒಮ್ಮೆ ಮದುವೆ ಆಗಲಿ ಆಮೇಲೆ ಎಲ್ಲವನ್ನೂ ಹೇಳ್ತೀನಿ’ ಎಂದು ಹಾರಿಕೆ ಉತ್ತರ ನೀಡುತ್ತಿದ್ದ ಎನ್ನಲಾಗಿದೆ.
ಯಾರ ಮಾತು ಕೇಳದ ವಧು :
ಮದುವೆ ಮಂಟಪದಲ್ಲಿ ಹೈಡ್ರಾಮಾ ಶುರುವಾಗುತ್ತಿದ್ದಂತೆ ಸ್ಥಳಕ್ಕೆ ಸಿಡಿಪಿಓ (CDPO) ಅಧಿಕಾರಿಗಳು ಹಾಗೂ ಶೃಂಗೇರಿ ಪೊಲೀಸರು ಭೇಟಿ ನೀಡಿದರು. ಯುವತಿಗೆ ಸಂಧಾನದ ಮೂಲಕ ತಿಳಿಹೇಳಲು ಪ್ರಯತ್ನಿಸಿದರಾದರೂ, ನಂಬಿಕೆ ದ್ರೋಹ ಮಾಡಿದವನ ಜೊತೆ ನಾನು ಜೀವನ ನಡೆಸಲು ಸಾಧ್ಯವಿಲ್ಲ’ ಎಂದು ಸುಷ್ಮಾ ಖಡಕ್ಕಾಗಿ ಹೇಳಿ ಮಂಟಪದಿಂದ ಹೊರನಡೆದಿದ್ದಾರೆ. ನಂಬಿಕೆಯ ಮೇಲೆ ನಿಲ್ಲಬೇಕಾದ ದಾಂಪತ್ಯದ ಅಡಿಪಾಯವೇ ಸುಳ್ಳಿನ ಮೇಲೆ ನಿರ್ಮಾಣವಾಗಲು ಹೊರಟಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಚರ್ಚಿಸುತ್ತಿದ್ದಾರೆ. ಸದ್ಯ ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಮದುವೆ ಅರ್ಧಕ್ಕೆ ನಿಂತು ಎರಡು ಕಡೆಯ ದಿಬ್ಬಣ ಮರಳಿ ಮನೆ ಸೇರಿದೆ.


