
ಭೂಪಾಲ್ : ರೌಡಿಶೀಟರ್ನನ್ನು ಕಾರಿನಿಂದ ಎಳೆದು ಮಾರಣಾಂತಿಕ ಹಲ್ಲೆ.! ಹಲ್ಲೆಯ ವೀಡಿಯೋ ವೈರಲ್.!
news.ashwasurya. in
ಅಶ್ವಸೂರ್ಯ/ಭೂಪಾಲ್ : ಭೂಪಾಲ್ ಕೋಲಾರ ಪ್ರದೇಶದಲ್ಲಿ ಭಾನುವಾರ ಹಗಲು ಹೊತ್ತಿನಲ್ಲೇ ನಡೆದ ಘಟನೆಯಲ್ಲಿ ನಗರದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಮಾಡಿದೆ. ರೌಡಿ ಶೀಟರ್ ಕುಲದೀಪ್ ಸಿಂಗ್ ಎಂಬಾತನ ಮೇಲೆ ದುಷ್ಕರ್ಮಿಗಳ ಗುಂಪೊಂದು ಕ್ರೂರವಾಗಿ ಹಲ್ಲೆ ನಡೆಸಿದೆ. ಮಧ್ಯಪ್ರದೇಶದ ರಾಜಧಾನಿಯಲ್ಲಿ ಈ ಘಟನೆ ನಡೆದಿದೆ.ಈ ಘಟನೆಯು ಭಾನುವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಸುಮಾರಿಗೆ ನಡೆದಿದೆ ಎಂದು ವರದಿಯಾಗಿದೆ.
ಹಾಡಹಗಲೇ ಹಲ್ಲೆ :
ಘಟನಾ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳ ಪ್ರಕಾರ ದುಷ್ಕರ್ಮಿಗಳು ಸುತ್ತಿಗೆ ಮತ್ತು ಸಬ್ಬಲ್ಗಳಿಂದ ಯುವಕನ ಕೈಕಾಲುಗಳನ್ನು ಗುರಿಯಾಗಿಸಿಕೊಂಡು ಹೊಡೆದಿದ್ದಾರೆ. ಈ ಹಲ್ಲೆಯ ತೀವ್ರತೆ ಎಷ್ಟಿತ್ತೆಂದರೆ ಸುತ್ತಮುತ್ತಲಿನ ಜನರು ಬೆಚ್ಚಿಬಿದ್ದಿದ್ದಾರೆ. ಸಾರ್ವಜನಿಕರ ಎದುರೆ ಈ ಘಟನೆ ನಡೆದಿದ್ದರೂ ಯಾರೊಬ್ಬರೂ ಮಧ್ಯಪ್ರವೇಶಿಸುವ ಧೈರ್ಯ ಮಾಡಲಿಲ್ಲ. ಕೆಲವರು ಇಡೀ ಘಟನೆಯನ್ನು ವಿಡಿಯೋ ಮಾಡುತ್ತಿರುವುದು ಕಂಡುಬಂದಿದೆ, ಅದು ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗಾಯಾಳು ಯುವಕನ ಯಾರು.?
ಹಲ್ಲೆಯಲ್ಲಿ ಗಾಯಗೊಂಡ ಯುವಕನನ್ನು ಕುಲದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ರೇವಾ ಜಿಲ್ಲೆಯ ಚೋರಹಟಾ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದಾನೆ. ಪೊಲೀಸ್ ದಾಖಲೆಗಳ ಪ್ರಕಾರ, ಕುಲದೀಪ್ ಒಬ್ಬ ಸಕ್ರಿಯ ಅಪರಾಧಿಯಾಗಿದ್ದು, ಆತನ ವಿರುದ್ಧ ಕೊಲೆ, ಹಲ್ಲೆ, ಸುಲಿಗೆ, ದಂಗೆ ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿರುವ ಸುಮಾರು 12 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈತ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದನಂತೆ.!

ಮೂಕ ಪ್ರೇಕ್ಷಕರಾದ ಸ್ಥಳೀಯರು.!
ಘಟನೆಯ ಸಮಯದಲ್ಲಿ ರಸ್ತೆಯಲ್ಲಿ ಅನೇಕ ಜನರಿದ್ದರು, ಆದರೆ ಯಾರೂ ಕೂಡ ಗಾಯಾಳು ಯುವಕನನ್ನು ರಕ್ಷಿಸಲು ಪ್ರಯತ್ನಿಸಲಿಲ್ಲ. ವೈರಲ್ ವಿಡಿಯೋದಲ್ಲಿ ಯುವತಿಯೊಬ್ಬಳು ಹಲ್ಲೆಕೋರರನ್ನು ತಡೆಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ, ಆದರೆ ದುಷ್ಕರ್ಮಿಗಳು ಅವರ ಮಾತನ್ನು ನಿರ್ಲಕ್ಷಿಸಿ ಹಲ್ಲೆಯನ್ನು ಮುಂದುವರಿಸಿದ್ದಾರೆ. ಕೃತ್ಯ ಎಸಗಿದ ನಂತರ ಆರೋಪಿಗಳೆಲ್ಲರೂ ಸ್ಥಳದಿಂದ ಪರಾರಿಯಾಗಿದ್ದಾರೆ.
ಹಲ್ಲೆಕೋರರು ಹೋದ ನಂತರ ಸ್ಥಳೀಯರು ಕುಲದೀಪ್ನನ್ನು ಬನ್ಸಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಕೈ ಮತ್ತು ಕಾಲುಗಳಿಗೆ ತೀವ್ರ ಗಾಯಗಳಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಆತ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊಲೀಸರು ಆಸ್ಪತ್ರೆಗೆ ಧಾವಿಸಿ ಹೇಳಿಕೆ ದಾಖಲಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ್ದಾರೆ.
ನಿಶ್ಚಿತಾರ್ಥಕ್ಕೂ ಮುನ್ನವೇ ಹಲ್ಲೆ, ಹಳೆಯ ದ್ವೇಷದ ಶಂಕೆ
ಮಾಹಿತಿಯ ಪ್ರಕಾರ, ಕುಲದೀಪ್ ಸಿಂಗ್ ಗೆ ಫೆಬ್ರವರಿ 6 ರಂದು ನಿಶ್ಚಿತಾರ್ಥ ನಡೆಯಬೇಕಿತ್ತು. ಆತನ ಭಾವಿ ಪತ್ನಿ ಕೋಲಾರದ ನೇತಾಜಿ ಹಿಲ್ಸ್ ಪ್ರದೇಶದಲ್ಲಿ ವಾಸಿಸುವ ದಂತವೈದ್ಯೆಯಾಗಿದ್ದಾರೆ. ಈ ಹಲ್ಲೆಯು ಹಳೆಯ ಹಗೆತನದ ಹಿನ್ನೆಲೆಯಲ್ಲಿ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳು ಮೊದಲೇ ಸ್ಕೆಚ್ ಹಾಕಿ ಈ ಕೃತ್ಯ ಎಸಗಿದ್ದಾರೆ ಎಂದು ಕೋಲಾರ ಠಾಣಾಧಿಕಾರಿ ಸಂಜಯ್ ಸೋನಿ ತಿಳಿಸಿದ್ದಾರೆ.ಕೋಲಾರ ಪೊಲೀಸರು ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ರೇವಾ ಪೊಲೀಸರನ್ನು ಸಂಪರ್ಕಿಸಿ ಸಂತ್ರಸ್ತನ ಕ್ರಿಮಿನಲ್ ಹಿನ್ನೆಲೆಯ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಶೀಘ್ರದಲ್ಲೇ ಆರೋಪಿಗಳನ್ನು ಗುರುತಿಸಿ ಬಂಧಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.
ವೈರಲ್ ವಿಡಿಯೋ…


