ಶಿವಮೊಗ್ಗ : ಸಂಗ್ರಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇ ಮಾಡಿ.! ಅನಧಿಕೃತ ಮರಳು ಗಣಿಗಾರಿಕೆ ವಿರುದ್ಧ ಗಸ್ತು ತಂಡ : ಜಿಲ್ಲಾಧಿಕಾರಿ, ಪ್ರಭುಲಿಂಗ ಕವಳಿಕಟ್ಟಿ.
news.ashwasurya.in
ಅಶ್ವಸೂರ್ಯ/ಶಿವಮೊಗ್ಗ , ಸೆಪ್ಟಂಬರ್,02 : ಜಿಲ್ಲೆಯ ಮರಳು ಸಮಿತಿಗಳ ನೇತೃತ್ವದಲ್ಲಿ ಜಪ್ತಿಮಾಡಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಚೇರಿ ಆವರಣ, ಫ್ರೀಡಂ ಪಾರ್ಕ್, ಹೊಸನಗರ ಪೊಲೀಸ್ ಠಾಣೆ ಸೇರಿದಂತೆ ಅನೇಕ ಸ್ಥಳಗಳಲ್ಲಿ ಸಂಗ್ರಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ನಿಯಮಾನುಸಾರ ಹರಾಜು ಮೂಲಕ ವಿಲೇ ಮಾಡುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಚಿದಂಬರ್ ಅವರಿಗೆ ಸೂಚಿಸಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಟಾಸ್ಕ್ಫೋರ್ಸ್ ಸಮಿತಿ, ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಹಾಘೂ ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಪರವಾನಿಗೆ ಮತ್ತು ನಿಯಂತ್ರಣ ಪ್ರಾಧಿಕಾರ ಸಮಿತಿಗಳ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಹರಾಜು ಪ್ರಕ್ರಿಯೆಯಲ್ಲಿ ನಿಯಮದ ಉಲ್ಲಂಘನೆ ಆಗದಂತೆ ಹಾಗೂ ಆಕ್ಷೇಪಣೆಗಳಿಗೆ ಅವಕಾಶವಿಲ್ಲದಂತೆ ವಿಲೇ ಮಾಡುವಂತೆ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಮಳೆ ಕೊರತೆಯ ಹಿನ್ನೆಲೆಯಲ್ಲಿ ನದಿ ಪಾತ್ರಗಳಲ್ಲಿ ನೀರಿನ ಹರಿವು ಕಡಿಮೆಯಾದ ನಂತರ ಅನಧಿಕೃತ ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆ ಪ್ರಾರಂಭವಾಗುವ ಸಾಧ್ಯತೆ ಇದ್ದು, ತಾಲೂಕು ಮರಳು ಸಮಿತಿಗಳಿಂದ ಈ ಹಿಂದೆ ರಚಿಸಲಾಗಿದ್ದು ಗಸ್ತು ತಂಡಗಳನ್ನು ಪುನಃ ಸಕ್ರಿಯಗೊಳಿಸುವಂತೆ ಸೂಚಿಸಿದ ಅವರು, ಜಿಲ್ಲೆಯ ಆಯ್ದ ಸ್ಥಳಗಳಲ್ಲಿ ಶಾಶ್ವತ/ತಾತ್ಕಾಲಿಕ ಚೆಕ್ಪೋಸ್ಟ್ಗಳನ್ನು ನಿರ್ಮಿಸಲು, ಅಗತ್ಯ ಸಿಬ್ಬಂಧಿ ಮತ್ತು ಅನುದಾನ ನೀಡುವಂತೆ ಇಲಾಖಾ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಮಂಜೂರು ಮಾಡಲಾದ ಮರಳು ಗಣಿ ಗುತ್ತಿಗೆಯಲ್ಲಿ ಗುತ್ತಿಗೆ ನಿಯಮಗಳನ್ನು ಉಲ್ಲಂಘಿಸಿದ ದಬ್ಬಣಗದ್ದೆ ಮರಳು ಬ್ಲಾಕ್ನ ಗುತ್ತಿಗೆದಾರರ ಮೇಲೆ ನಿರ್ದಾಕ್ಷಿಣ್ಯವಾಗಿ ಸೂಕ್ತ ಕ್ರಮ ಜರುಗಿಸುವಂತೆ ಸೂಚಿಸಿದ ಅವರು, ಹುಣಸವಳ್ಳಿಯ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿರುವ ಮರಳನ್ನು ಅರಣ್ಯ ಇಲಾಖೆಯಿಂದ ಜಪ್ತಿಮಾಡಿದ್ದು, ನಿಯಮಾನುಸಾರ ವಿಲೇವಾರಿ ಮಾಡುವವರೆಗೆ ಯಥಾಸ್ಥಿತಿಯಲ್ಲಿ ಕಾಪಾಡಿಕೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಕಲ್ಲುಪುಡಿ ಮಾಡುವ ಘಟಕ ಸ್ಥಾಪಿಸಲು ಕಲ್ಲುಪುಡಿ ಮಾಡುವ ಘಟಕಗಳ ಪರವಾನಿಗೆ ಮತ್ತು ನಿಯಂತ್ರಣ ಸಮಿತಿಯಿಂದ ಪರವಾನಿಗೆ ನೀಡಲಾಗಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮೋದನೆ ನೀಡಲಾಗಿದೆ. ಉಳೀದಂತೆ ಕ್ರಷರ್ ಘಟಕವನ್ನು ಚಾಲನೆಗೊಳಿಸಲು ಅನುಮತಿ ನೀಡುವ ಮುನ್ನ ನಿಯಮಾನುಸಾರ ಪರಿಶೀಲಿಸುವಂತೆ ಅವರು ಸೂಚಿಸಿದರು.

ಜಿಲ್ಲೆಯಲ್ಲಿ ಈವರೆಗೆ ಸುಮಾರು 93,ಕ್ರಷರ್ಗಳಿಗೆ ಅಧಿಕೃತವಾಗಿ ಪರವಾನಿಗೆ ನೀಡಲಾಗಿದೆ. ಅವುಗಳಲ್ಲಿ 21ಘಟಕಗಳ ಮಾಲೀಕರು ಇಲಾಖೆಗೆ ಯಾವುದೇ ಮಾಹಿತಿಯನ್ನು ನೀಡದೇ ಯಂತ್ರೋಪಕರಣಗಳನ್ನು ಕೊಂಡೊಯ್ದಿದ್ದಲ್ಲದೆ ಘಟಕವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುತ್ತಾರೆ. ಅಂತಹ ಘಟಕಗಳ ಮಾಲೀಕರಿಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸುವಂತೆ ಸೂಚಿಸಿದ ಅವರು, 2021ರ ಸ್ಫೋಟದ ನಂತರ ಕಲ್ಲಗಂಗೂರು, ಗೆಜ್ಜೇನಹಳ್ಳಿ, ಬಸವನಗಂಗೂರು, ಹುಣಸೋಡು, ಮುಂತಾದ ಗ್ರಾಮಗಳ ವ್ಯಾಪ್ತಿಯಲ್ಲಿನ ಕಲ್ಲುಪುಡಿ ಮಾಡುವ ಘಟಕಗಳ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಅಲ್ಲದೇ ಘಟಕಗಳ ವಿಸ್ತರಣೆಯೂ ಸ್ಥಗಿತಗೊಳಿಸಲಾಗಿದೆ. ಈ ಹಿಂದೆ ಸಮಿತಿಯಿಂದ ಕೈಗೊಂಡ ನಿರ್ಣಯದಂತೆ ಪ್ರಸ್ತುತ ಚಾಲ್ತಿಯಲ್ಲಿರುವ ಕ್ರಷರ್ ಮಾಲೀಕರಿಗೆ ಸಮಿತಿಯ ಅಂತಿಮ ವರದಿಯ ಬಳಿಕವೇ ಸದರಿ ಪ್ರದೇಶದಲ್ಲಿ ಕಲ್ಲಪುಡಿ ಮಾಡುವ ಘಟಕಗಳ ಮಾಲೀಕರಿಂದ ಮನವಿ ಪಡೆದು, ಪರಿಶೀಲಿಸಿ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಸಮಿತಿಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಮೇಲಿನ ಕುರುವಳ್ಳಿಯಲ್ಲಿ ಕಲ್ಲುಗಣಿ ಗುತ್ತಿಗೆ ನೀಡಲು ಈ ಹಿಂದೆ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಸದರಿ ಪ್ರಕ್ರಿಯೆ ಕಾರಣಾಂತರಗಳಿಂದ ನೆನೆಗುದಿಗೆ ಬಿದ್ದಿದೆ. ಪ್ರಸ್ತುತ ಸರ್ಕಾರದ ಹೊಸ ಆದೇಶವನ್ನು ಅನುಷ್ಠಾನಕ್ಕೆ ತರುವ ಮುನ್ನ ಇಲಾಖಾ ಆಯುಕ್ತರಿಗೆ ವಾಸ್ತವ ವಿಷಯವನ್ನು ಗಮನಕ್ಕೆ ತಂದು ನಂತರ ಅವರ ಮಾರ್ಗದರ್ಶನದಂತೆ ಕ್ರಮ ಕೈಗೊಳ್ಳುವಂತೆ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಪಟ್ಟಾ ಜಮೀನುಗಳಲ್ಲಿ ಜಂಬಿಟ್ಟಿಗೆ ತೆರವುಗೊಳಿಸುವ ಸಂದರ್ಭ ಭೂಮಿಯ ಮೇಲ್ಮೈ ಲಕ್ಷಣಕ್ಕೆ ಅನುಗುಣವಾಗಿ ಎಷ್ಟು ಆಳದವರೆಗೆ ಜಂಬಿಟ್ಟಿಗೆ ಖನಿಜವನ್ನು ತೆರವುಗೊಳಿಸಬಹುದು ಎಂದು ನಿರ್ಧರಿಸುವ ಕುರಿತು ಸರ್ಕಾರದ ಅಧಿಸೂಚನೆಯಂತೆ ತಜ್ಞರ ಸಮಿತಿ ರಚಿಸುವಂತೆಯೂ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ನಿಖಿಲ್, ಅರಣ್ಯಾಧಿಕಾರಿ ಅಜ್ಜಯ್ಯ, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ಉಪವಿಭಾಗಾಧಿಕಾರಿ ಡಾ|| ಮೈತ್ರಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


