
ಬೆಂಗಳೂರು : ಮೆಜೆಸ್ಟಿಕ್ ನಲ್ಲಿ 200 ರೂಪಾಯಿಗಾಗಿ ಮಂಗಳಮುಖಿಯ ಮರ್ಡರ್.! ಆರೋಪಿ ಬಂಧನ.!
news.ashwasurya.in
ಮೆಜೆಸ್ಟಿಕ್ನ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಕೊಲೆ ನಡೆದಿದೆ. ಮದ್ಯಪಾನ ಮಾಡಿದ್ದ ಆರೋಪಿ ರಾತ್ರಿ ವೇಳೆಯಲ್ಲಿ ಜನರ ಬಳಿ ದರೋಡೆ ಮಾಡುವ ಉದ್ದೇಶದಿಂದಲೇ ಅಲ್ಲಿಗೆ ಬಂದಿದ್ದ. ಸ್ಥಳದಲ್ಲಿದ್ದ ಮಂಗಳಮುಖಿ ಬಳಿ 200 ರೂಪಾಯಿ ಹಣ ನೀಡುವಂತೆ ಪಟ್ಟುಹಿಡಿದಿದ್ದ. ಆದರೆ, ಹಣ ನೀಡಲು ನಿರಾಕರಿಸಿದಾಗ ಆರೋಪಿಯು ಡ್ರ್ಯಾಗರ್ನಿಂದ ಇರಿದು ಮಂಗಳಮುಖಿಯನ್ನು ಕೊಲೆ ಮಾಡಿದ್ದಾನೆ…
ಅಶ್ವಸೂರ್ಯ/ಬೆಂಗಳೂರು : ಕೇವಲ 200 ರೂಪಾಯಿಗಾಗಿ ಮಂಗಳಮುಖಿಯನ್ನು ಬರ್ಬರವಾಗಿ ಇರಿದು ಹತ್ಯೆ ಮಾಡಿರುವ ಘಟನೆ ಶುಕ್ರವಾರ ರಾತ್ರಿ ಮೆಜೆಸ್ಟಿಕ್ನ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ. ಮೃತರನ್ನು ದೇವಿ ಎಂದು ಗುರುತಿಸಲಾಗಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಗೌತಮ್ (29) ಎಂಬಾತನನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ಮೃತ ದೇವಿ ಅವರು ತಡರಾತ್ರಿ ಮೆಜೆಸ್ಟಿಕ್ ಬಸ್ ನಿಲ್ದಾಣದ ಹೊರಭಾಗದಲ್ಲಿ ನಿಂತಿದ್ದಾಗ ಈ ದುರಂತ ಸಂಭವಿಸಿದೆ. ರಾಮಮೂರ್ತಿ ನಗರದ ನಿವಾಸಿಯಾದ ಗೌತಮ್ (29) ಎಂಬಾತ ಡಿಯೋ ಸ್ಕೂಟರ್ನಲ್ಲಿ ಮೆಜೆಸ್ಟಿಕ್ ಬಳಿ ಬಂದಿದ್ದ. ಮದ್ಯಪಾನ ಮಾಡಿದ್ದ ಆರೋಪಿ ಗೌತಮ್, ರಾತ್ರಿ ವೇಳೆಯಲ್ಲಿ ಜನರ ಬಳಿ ದರೋಡೆ ಮಾಡುವ ಉದ್ದೇಶದಿಂದಲೇ ಅಲ್ಲಿಗೆ ಬಂದಿದ್ದ. ಸ್ಥಳದಲ್ಲಿದ್ದ ದೇವಿಯ ಬಳಿ ಬಂದ ಆರೋಪಿ ಗೌತಮ್ 200 ರೂಪಾಯಿ ಹಣ ನೀಡುವಂತೆ ಪಟ್ಟುಹಿಡಿದಿದ್ದ. ಆದರೆ, ದೇವಿ ಹಣ ನೀಡಲು ನಿರಾಕರಿಸಿದಾಗ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ.
ಈ ವೇಳೆ, ಆಕ್ರೋಶಗೊಂಡ ಆರೋಪಿ ತನ್ನ ಬಳಿಯಿದ್ದ ಡ್ರ್ಯಾಗರ್ನಿಂದ ಮೊದಲಿಗೆ ದೇವಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಬಳಿಕ ಅವರಿಂದ ಬ್ಯಾಗ್ ಮತ್ತು ಮೊಬೈಲ್ ಫೋನ್ ಕಸಿದುಕೊಂಡಿದ್ದಾನೆ. ದೇವಿ ಪ್ರತಿರೋಧಿಸಲು ಯತ್ನಿಸಿದಾಗ ಡ್ರ್ಯಾಗರ್ನಿಂದ ಮತ್ತೆ ಮೂರು ಬಾರಿ ದೇಹಕ್ಕೆ ಚುಚ್ಚಿ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದ ದೇವಿ ಅವರು ಘಟನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆಇತ್ತ ಕೃತ್ಯ ಎಸಗಿದ ಬಳಿಕ ಆರೋಪಿ ಗೌತಮ್ ದೇವಿಯ ಬ್ಯಾಗ್ನಲ್ಲಿದ್ದ ನಗದು ಮತ್ತು ಮೊಬೈಲ್ ಫೋನ್ ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಮೃತರ ಸ್ನೇಹಿತರ ಹೇಳಿಕೆ ಹಾಗೂ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿ ಗೌತಮ್ನನ್ನು ಪೊಲೀಸರು ವಿಚಾರಣೆಗೊಳಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.


