ಧರ್ಮಸ್ಥಳ : ಬಂಗ್ಲೆಗುಡ್ಡ ಅಸ್ಥಿಪಂಜರ ಪ್ರಕರಣ: ಡಿಎನ್ಎ ಪರೀಕ್ಷೆಯಲ್ಲಿ 3 ಅಸ್ಥಿಪಂಜರಗಳ ಗುರುತು ಪತ್ತೆ.!
news.ashwasurya.in
ಅಶ್ವಸೂರ್ಯ/ಧರ್ಮಸ್ಥಳ : ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಧರ್ಮಸ್ಥಳದ ಬಂಗ್ಲೆಗುಡ್ಡದ ಅಸ್ಥಿಪಂಜರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಮಹತ್ವದ ತಿರುವು ಸಿಕ್ಕಿದೆ. ವಿಶೇಷ ತನಿಖಾ ದಳ (SIT) ನಡೆಸಿದ ತನಿಖೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (FSL) ಡಿಎನ್ಎ (DNA) ಪರೀಕ್ಷೆಯ ವರದಿಯ ಮೂಲಕ ಪತ್ತೆಯಾಗಿದ್ದ ಅಸ್ಥಿಪಂಜರಗಳ ಪೈಕಿ ಮೂರು ಅಸ್ಥಿಪಂಜರಗಳ ನಿಖರ ಗುರುತು ಅಧಿಕೃತವಾಗಿ ದೃಢಪಟ್ಟಿದೆ.
ಗುರುತು ಪತ್ತೆಯಾದ ಮೂವರ ವಿವರ :

ಯು. ಬಿ. ಅಯ್ಯಪ್ಪ (70 ವರ್ಷ)
ಕೊಡಗು ಜಿಲ್ಲೆಯ ವಿರಾಜಪೇಟೆ ನಿವಾಸಿಯಾಗಿದ್ದ ಇವರು 2017ರ ಜೂನ್ ತಿಂಗಳಲ್ಲಿ ಮೈಸೂರಿಗೆ ಚಿಕಿತ್ಸೆಗೆ ತೆರಳಿದ್ದಾಗ ನಾಪತ್ತೆಯಾಗಿದ್ದರು. ಈ ಕುರಿತು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಸ್ತುತ ಡಿಎನ್ಎ ಪರೀಕ್ಷೆಯಿಂದ ಇವರ ಅಸ್ಥಿಪಂಜರವೆಂದು ದೃಢಪಟ್ಟಿದೆ.

ಆದಿಶೇಷ ನಾರಾಯಣ (27 ವರ್ಷ)
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನವರಾದ ಇವರು ಬೆಂಗಳೂರಿನ ಖಾಸಗಿ ಬಾರ್ನಲ್ಲಿ ಕೆಲಸ ಮಾಡುತ್ತಿದ್ದು, 2013ರ ಅಕ್ಟೋಬರ್ನಲ್ಲಿ ನಾಪತ್ತೆಯಾಗಿದ್ದರು. ಕುಟುಂಬದವರ ಬಹುವರ್ಷಗಳ ಹುಡುಕಾಟದ ಬಳಿಕ ಇವರ ಅಸ್ಥಿಪಂಜರ ಪತ್ತೆಯಾಗಿದೆ.

ಕೃಷ್ಣಪ್ಪ (85 ವರ್ಷ)
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನವರಾದ ಇವರು ಹಲವು ವರ್ಷಗಳ ಹಿಂದೆ ನಾಪತ್ತೆಯಾಗಿದ್ದರು. ಇವರೂ ಸೇರಿದಂತೆ ಒಟ್ಟು ಮೂವರ ಗುರುತು ಡಿಎನ್ಎ ವರದಿಯಿಂದ ಸ್ಪಷ್ಟವಾಗಿದೆ.
ದಾಖಲೆಗಳ ಮೂಲಕ ಡಿಎನ್ಎ ದೃಢೀಕರಣ
ಧರ್ಮಸ್ಥಳದ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಎಸ್ಐಟಿ ಅಧಿಕಾರಿಗಳು ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ ಅಸ್ಥಿಪಂಜರಗಳೊಂದಿಗೆ ಚಾಲನಾ ಪರವಾನಗಿ ಮತ್ತು ಗುರುತಿನ ಚೀಟಿಗಳಂತಹ ಪ್ರಮುಖ ದಾಖಲೆಗಳು ದೊರೆತಿದ್ದವು.
ದೊರೆತ ದಾಖಲೆಗಳ ಆಧಾರದ ಮೇಲೆ ನಾಪತ್ತೆಯಾದವರ ಕುಟುಂಬಗಳನ್ನು ಸಂಪರ್ಕಿಸಿ ಸಂಗ್ರಹಿಸಲಾದ ರಕ್ತದ ಮಾದರಿಗಳನ್ನು ಎಫ್ಎಸ್ಎಲ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಸತ್ಯಾಂಶ ಹೊರಬಂದಿದೆ.
ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಕೆ
ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಕೈಸೇರುತ್ತಿದ್ದಂತೆ ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯಕ್ಕೆ ಅಂತಿಮ ತನಿಖಾ ವರದಿಯನ್ನು ಸಲ್ಲಿಸಿದ್ದಾರೆ.:
ನ್ಯಾಯಾಲಯದ ಮುಂದಿನ ಆದೇಶದನ್ವಯ ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆಗಳು ಜರುಗಲಿವೆ. ಮೃತರ ಕುಟುಂಬಸ್ಥರು ನ್ಯಾಯಾಲಯಕ್ಕೆ ಅಧಿಕೃತ ಅರ್ಜಿ ಸಲ್ಲಿಸಿದ ಬಳಿಕ, ಅಸ್ಥಿಪಂಜರಗಳ ಅವಶೇಷಗಳನ್ನು ಅವರ ವಾರಸುದಾರರಿಗೆ ಹಸ್ತಾಂತರಿಸಲು ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ.


