ನಕಲಿ ದಾಖಲಾತಿ ಕೊಟ್ಟು ಸರ್ಕಾರಿ ಹುದ್ದೆ ಪಡೆದ 3000 ಶಿಕ್ಷಕರು; 11 ವರ್ಷದ ಸಂಬಳ ವಾಪಸ್ ಪಡೆಯಲು ಮುಂದಾದ ಸರ್ಕಾರ!

news.ashwasurya.in
ಅಶ್ವಸೂರ್ಯ/ಬಿಹಾರ : ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಬಳಸಿಕೊಂಡು ಸರ್ಕಾರಿ ಉದ್ಯೋಗ ಪಡೆದಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸರ್ಕಾರ ವಜಾಗೊಳಿಸಲು ನಿರ್ಧರಿಸಿದೆ. 2006-2015ರ ನೇಮಕಾತಿ ಹಗರಣದ ತನಿಖೆ ಬಳಿಕ ಈ ಕ್ರಮ ಕೈಗೊಂಡಿದ್ದು, ವಜಾಗೊಳಿಸುವುದರ ಜೊತೆಗೆ ಅವರಿಂದ ಸಂಬಳ ವಸೂಲಿ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತಿದೆ.
ನಕಲಿ ದಾಖಲೆಗಳನ್ನು ಸೃಷ್ಟಿಸಿ ಶಿಕ್ಷಕರ ಕೆಲಸ ಗಿಟ್ಟಿಸಿಕೊಂಡಿದ್ದವರಿಗೆ ಬಿಹಾರ ಸರ್ಕಾರ ಬಿಸಿ ಮುಟ್ಟಿಸಿದೆ. ನಕಲಿ ಪದವಿ ಮತ್ತು ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಬಳಸಿ ಸರ್ಕಾರಿ ಉದ್ಯೋಗ ಪಡೆದಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು. ಈ ಕುರಿತು ಬಿಹಾರದ ಶಿಕ್ಷಣ ಸಚಿವ ಮಿಥಿಲೇಶ್ ತಿವಾರಿ ಅವರು ಶುಕ್ರವಾರ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಬಿಹಾರದ ಶಿಕ್ಷಣ ಸಚಿವ ಮಿಥಿಲೇಶ್ ತಿವಾರಿ

ಏನಿದು ನಕಲಿ ಗೊಲ್ ಮಾಲ್? :
2006 ಮತ್ತು 2015ರ ಅವಧಿಯಲ್ಲಿ ನಡೆದ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಪ್ರಮಾಣದ ಅಕ್ರಮ ನಡೆದಿದೆ ಎಂಬ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯ ವಿಜಿಲೆನ್ಸ್ ಬ್ಯೂರೋ (Vigilance Bureau) ಮೂಲಕ ತನಿಖೆಗೆ ಆದೇಶಿಸಿದ್ದರು. ಸುದೀರ್ಘ ತನಿಖೆಯ ನಂತರ, ಸಾವಿರಾರು ಅಭ್ಯರ್ಥಿಗಳು ಅಸ್ತಿತ್ವದಲ್ಲಿಲ್ಲದ ಶಿಕ್ಷಣ ಸಂಸ್ಥೆಗಳ ಪದವಿಗಳನ್ನು ಅಥವಾ ನಕಲಿ ಅಂಕಪಟ್ಟಿಗಳನ್ನು ನೀಡಿರುವುದು ಪತ್ತೆಯಾಗಿದೆ.
ಕಠಿಣ ಕ್ರಮಕ್ಕೆ ಮುಂದಾದ ಸರ್ಕಾರ.:
ಕೇವಲ ಕೆಲಸದಿಂದ ವಜಾಗೊಳಿಸುವುದು ಮಾತ್ರವಲ್ಲದೆ, ಅಕ್ರಮ ಎಸಗಿದವರ ಮೇಲೆ ಸರ್ಕಾರ ಮೂರು ಹಂತದ ಕಠಿಣ ಕ್ರಮಗಳನ್ನು ಜರುಗಿಸುತ್ತಿದೆ,
ತಕ್ಷಣವೇ ಅನ್ವಯವಾಗುವಂತೆ ನಕಲಿ ದಾಖಲೆ ನೀಡಿದವರನ್ನು ಕೆಲಸದಿಂದ ತೆಗೆದುಹಾಕಲಾಗುವುದು.
ಮತ್ತು ಇಷ್ಟು ವರ್ಷಗಳ ಕಾಲ ಅವರು ಸರ್ಕಾರದಿಂದ ಪಡೆದ ಸಂಬಳ ಮತ್ತು ಗೌರವಧನವನ್ನು ಬಡ್ಡಿ ಸಮೇತ ವಾಪಸ್ ಪಡೆಯಲು ಸರ್ಕಾರ ನಿರ್ಧರಿಸಿದೆ. ವಂಚನೆ ಮತ್ತು ದಾಖಲೆಗಳ ನಕಲು ಆರೋಪದ ಮೇಲೆ ಈಗಾಗಲೇ ಹಲವರ ಮೇಲೆ ಎಫ್ಐಆರ್ (FIR) ದಾಖಲಿಸಲಾಗಿದ್ದು, ಕಾನೂನು ಕ್ರಮ ಜರುಗಿಸಲಾಗುವುದು.
ಈ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಮಿಥಿಲೇಶ್ ತಿವಾರಿ, ‘ಭ್ರಷ್ಟಾಚಾರದ ವಿರುದ್ಧ ಕೇಂದ್ರ ಮತ್ತು ಬಿಹಾರ ಸರ್ಕಾರಗಳು ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ಹೊಂದಿವೆ. ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿ, ನಕಲಿ ದಾಖಲೆಗಳ ಮೂಲಕ ವ್ಯವಸ್ಥೆಯನ್ನು ಹಾಳುಮಾಡುವವರನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಎಚ್ಚರಿಸಿದ್ದಾರೆ.
ತನಿಖೆ ಆರಂಭವಾಗುತ್ತಿದ್ದಂತೆ ಕೆಲವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ರಾಜೀನಾಮೆ ನೀಡಿ ಓಡಿಹೋಗಿದ್ದರು. ಆದರೆ, ಅಂತಹವರನ್ನು ಬಿಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜೀನಾಮೆ ನೀಡಿದವರ ಮೇಲೂ ಶಿಸ್ತು ಕ್ರಮ ಜರುಗಿಸಲಾಗುವುದು ಮತ್ತು ಅವರಿಂದಲೂ ಹಣ ವಸೂಲಿ ಮಾಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಭಾರಿ ಕ್ರಮವು ದೇಶಾದ್ಯಂತ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಲ್ಲಿ ಸಂಚಲನ ಮೂಡಿಸಿದೆ.


