ಶಿವಮೊಗ್ಗ : ವಾಜಪೇಯಿ ಬಡಾವಣೆಯಿಂದ ರಿಂಗ್ ರಸ್ತೆ ನಿರ್ಮಾಣ : ಹೆಚ್ ಎಸ್ ಸುಂದರೇಶ್, ಸೂಡಾ ಅಧ್ಯಕ್ಷರು.
news.ashwasurya.in
ಅಶ್ವಸೂರ್ಯ/ಶಿವಮೊಗ್ಗ, ಜೂನ್ 11: ಸೂಡಾ ವತಿಯಿಂದ ವಾಜಪೇಯಿ ಬಡಾವಣೆಯಿಂದ ರೂ.3.70 ಕೋಟಿ ವೆಚ್ಚದಲ್ಲಿ ಸುಮಾರು 1200ಮೀಟರ್ ಉದ್ದದ ರಿಂಗ್ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು ಗೆಜ್ಜೇನಹಳ್ಳಿ-ಸೋಮಿನಕೊಪ್ಪ ರಸ್ತೆಗೆ ಲಿಂಕ್ ಮಾಡಲಾಗುವುದು ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ತಿಳಿಸಿದರು.
ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಗುರುವಾರ 60.00 ಮೀ ಅಗಲದ ಮಹಾಯೋಜನೆಯ ಹೊರ ವರ್ತುಲ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಾಜಪೇಯಿ ಬಡಾವಣೆಯ ರಿಂಗ್ ರಸ್ತೆ ಅಭಿವೃದ್ದಿ ಕಾಮಗಾರಿಗೆ ಸುಮಾರು ರೂ.5 ಕೋಟಿ ಮೊತ್ತದ ಟೆಂಡರ್ ಕರೆಯಲಾಗಿದ್ದು ರೂ.3.70 ಕೋಟಿ ಕರಾರು ಮೊತ್ತದಲ್ಲಿ ಕಾಮಗಾರಿ ಆರಂಭವಾಗಲಿದೆ. 34 ಕಿ.ಮೀ. ರಿಂಗ್ ರಸ್ತೆ ನಿರ್ಮಾಣಕ್ಕೆ ಮಾಸ್ಟರ್ ಪ್ಲಾನ್ ಸಿದ್ದಪಡಿಸಲಾಗಿದ್ದು, ಹಂತ ಹಂತವಾಗಿ ರಸ್ತೆ ನಿರ್ಮಾಣ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.

ಅಪಾರ್ಟ್ಮೆಂಟ್ ನಿರ್ಮಾಣ :
ನಗರ ವೇಗವಾಗಿ ಬೆಳೆಯುತ್ತಿದ್ದು, ನಿವೇಶನ, ಜಾಗಗಳು ದುಬಾರಿಯಾಗಿವೆ. ಸಾಮಾನ್ಯ ಜನರಿಗೆ ನಿವೇಶನ ಕೊಂಡು ಮನೆ ಕಟ್ಟಿಸುವುದು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಊರಗಡೂರಿನಲ್ಲಿ 4 ಎಕರೆ ಜಾಗದಲ್ಲಿ 1, 2 ಮತ್ತು 3 ಬಿಹೆಚ್ಕೆಯ ಸುಮಾರು 1000 ಫ್ಲಾಟ್ಗಳನ್ನು ನಿರ್ಮಿಸುವ ಯೋಜನೆಯು ಆಡಳಿತಾತ್ಮಕ ಮಂಜೂರಾತಿಗೆ ಹೋಗಿದ್ದು ಇನ್ನು 15 ರಿಂದ 20 ದಿನಗಳಲ್ಲಿ ಮಂಜೂರಾತಿ ದೊರೆತು ಕಾಮಗಾರಿ ಪ್ರಕ್ರಿಯೆ ಆರಂಭಿಸಲಾಗುವುದು.
ಹಾಗೂ ಜೆಹೆಚ್ ಪಟೇಲ್ ಬಡಾವಣೆಯ ಒಂದೂಕಾಲು ಎಕರೆಯಲ್ಲಿ ಅಪಾರ್ಟ್ಮೆಂಟ್ ನಿರ್ಮಿಸುವ ಯೋಜನೆಯಿದ್ದು ಖಾಸಗಿ ಅಪಾರ್ಟ್ಮೆಂಟ್ನಲ್ಲಿರುAವತೆ ಸ್ವಿಮ್ಮಿಂಗ್ ಪೂಲ್, ಪಾರ್ಕ್, ಕ್ಲಬ್ ಹೌಸ್, ಸಭಾಂಗಣ ಇತರೆ ಎಲ್ಲ ಸೌಲಭ್ಯ ಹೊಂದಿರುವ ಅಪಾರ್ಟ್ಮೆಂಟ್ಗಳನ್ನು ನಿರ್ಮಿಸಲಾಗುವುದು.

ಮಾಲ್ಗಳ ನಿರ್ಮಾಣ :
ಸಾಮಾನ್ಯ ಜನರ ಅನುಕೂಲಕ್ಕಾಗಿ ಗೋಪಾಲಗೌಡ ಬಡಾವಣೆಯ ವಿವೇಕಾನಂದ ಬಡಾವಣೆಯಲ್ಲಿ ಒಂದೂಕಾಲು ಎಕರೆ ಜಾಗದಲ್ಲಿ 01 ಮಾಲ್ ಮತ್ತು ಸೋಮಿನಕೊಪ್ಪ 200 ಮೀ ರಸ್ತೆಯಲ್ಲಿ 01 ಒಟ್ಟು 02 ಮಾಲ್ಗಳನ್ನು ನಿರ್ಮಿಸುವ ಉದ್ದೇಶವಿದೆ. ಹಾಗೂ ವಾಜಪೇಯಿ ಲೇಔಟಿನಲ್ಲಿ ಪ್ರಾಧಿಕಾರದ ಕಚೇರಿ ನಿರ್ಮಾಣ ಮಾಡುವ ಯೋಜನೆಯಿದೆ ಎಂದರು.
ಶಿವಮೊಗ್ಗ ನಗರವನ್ನು ಸುಂದರಗೊಳಿಸಲು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಸೂಡಾ ವತಿಯಿಂದ ಪಾರ್ಕುಗಳ ಅಭಿವೃದ್ದಿ, ಕೆರೆಗಳ ಅಭಿವೃದ್ದಿ, ಅಪಾರ್ಟ್ಮೆಂಟ್ ನಿರ್ಮಾಣ ಹೀಗೆ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಪಾರ್ಕುಗಳಲ್ಲಿ, ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಡಲು ಒತ್ತು ನೀಡಲಾಗುತ್ತಿದೆ ಎಂದರು.
ನಗರದ ನಾಗರೀಕರು, ಹಿರಿಯ ನಾಗರೀಕರು, ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ದೃಷ್ಟಿಯಿಂದ 100 ಪಾರ್ಕುಗಳನ್ನು ಅಭಿವೃದ್ದಿಪಡಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಈಗಾಗಲೇ ವಾಕಿಂಗ್ ಪಾಥ್, ಲೈಟಿಂಗ್, ಗಿಡ ನೆಡಲು ಸ್ಥಳಾವಕಾಶ ಸೇರಿದಂತೆ ಸಾರ್ವಜನಿಕರ ಬೇಡಿಕೆಗೆ ತಕ್ಕಂತೆ 50 ಪಾರ್ಕ್ಗಳನ್ನು ಅಭಿವೃದ್ದಿಪಡಿಸಲಾಗಿದೆ ಎಂದು ತಿಳಿಸಿದರು.

ಶಾಸಕರಾದ ಎಸ್ ಎನ್ ಚನ್ನಬಸಪ್ಪ ಮಾತನಾಡಿ, ಸೂಡಾ ವತಿಯಿಂದ ಜನ ಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ನಿವೇಶನ ಹಂಚಿಕೆ ಮಾಡುವ ಆಗುತ್ತಿದೆ. ಜೊತೆಗೆ ಮೂಲಭೂತ ಸೌಕರ್ಯಗಳ ಅಭಿವೃದ್ದಿ, ಕೆರೆಗಳು, ಪಾರ್ಕ್ಗಳ ಅಭಿವೃದ್ದಿ ಕಾರ್ಯವೂ ಆಗುತ್ತಿದೆ. ರಾಜ್ಯ ಸರ್ಕಾರವು ನಗರಾಭಿವೃದ್ದಿ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಈ ಮೂಲಕ ಮನವಿ ಮಾಡಿದರು.
ನಗರದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 12 ಎಕರೆ ಜಾಗ ಮಂಜೂರಾಗಿದ್ದು, ವೇಗವಾಗಿ ಕಾಮಗಾರಿ ನಡೆಯಬೇಕಿದೆ .ಜೊತೆಗೆ ಫುಟ್ಬಾಲ್ ಕ್ರೀಡಾಂಗಣ ಮಂಜೂರಾತಿ ಬಗ್ಗೆಯೂ ಕ್ರೀಡಾ ಸಚಿವರ ಬಳಿ ಮಾತನಾಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸೂಡಾ ಸದಸ್ಯರಾದ ಪ್ರವೀಣ್, ಸೂಡಾ ಆಯುಕ್ತರಾದ ಬಿ.ಆರ್ ಮಂಜುನಾಥ್, ಎಇ ಗಂಗಾಧರ್, ಎಇಇ ಬಸವರಾಜಪ್ಪ, ಟಿಪಿಎಂ ಅಭಿಲಾಷ್, ಸ್ಥಳೀಯ ನಿವಾಸಿಗಳು, ಸಾರ್ವಜನಿಕರು ಹಾಜರಿದ್ದರು.

