ತೀರ್ಥಹಳ್ಳಿ : ವಿದೇಶಿ ಸ್ವದೇಶಿ ಬೆಕ್ಕುಗಳ ಕದಾಟಕ್ಕೆ ನೆರೆಮನೆಯವರ ಹೊಡೆದಾಟ.! ಬಿತ್ತು 20 ಮಂದಿಯ ವಿರುದ್ಧ ಕೇಸ್!
news.ashwasurya.in
ಅಶ್ವಸೂರ್ಯ/ತೀರ್ಥಹಳ್ಳಿ : ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿಯಲ್ಲಿ ವಿದೇಶಿ ಬೆಕ್ಕು ಮತ್ತು ಸ್ವದೇಶಿ ಬೆಕ್ಕಿನ ನಡುವಿನ ಜಗಳ ತಾರಕಕ್ಕೇರಿ ಅವುಗಳ ಮಾಲೀಕರ ನಡುವೆ ದೊಡ್ಡ ಹೊಡೆದಾಟಕ್ಕೆ ಕಾರಣವಾಗಿದೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಎರಡೂ ಕುಟುಂಬಗಳು ಪರಸ್ಪರ ದೂರು ದಾಖಲಿಸಿ, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಮಾತ್ರ ದುರಂತವೆ ಹೌದು.!

ವಿದೇಶಿ ಬೆಕ್ಕು ಸ್ವದೇಶಿ ಬೆಕ್ಕಿನ ಚೆಲ್ಲಾಟ
ಮನೆಯವರ ಗುದ್ದಾಟ.!
ಬೆಕ್ಕುಗಳ ನಡುವೆ ಜಗಳವಾಗಿದ್ದಕ್ಕೆ ಅಕ್ಕಪಕ್ಕದ ಮನೆಯವರ ಮಧ್ಯೆ ಮಾತಿನ ಚಕಮಕಿ ನಡೆದು ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಮಂಗಳವಾರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯಲ್ಲಿ ನಡೆದಿದೆ.
ನಾಗಪಾತ್ರಿ ರಾಜಶೇಖರ್ ಅವರಿಗೆ ಸೇರಿದ್ದ ವಿದೇಶಿ ಬೆಕ್ಕಿಗೆ ನಾಗರಾಜ ಅವರ ಮನೆಯ ಬೆಕ್ಕು ಕಚ್ಚಿದೆ ಎನ್ನುವ ವಿಚಾರದಲ್ಲಿ ಎರಡು ಮನೆಯವರ ನಡುವೆ ಮಾತಿನ ಚಕಮಕಿ ನಡೆದು ಅಂತಿಮವಾಗಿ ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಜಗಳವಾಗಿದೆ. ಘಟನೆಯಲ್ಲಿ ನಾಗಪಾತ್ರಿ ರಾಜಶೇಖರ್ ಮತ್ತು ನೆರೆಮನೆಯ ಮೇಘನಾ ಎಂಬ ಯುವತಿಗೆ ಪೆಟ್ಟು ಬಿದ್ದಿದ್ದು ಇಬ್ಬರನ್ನೂ ಪಟ್ಟಣದ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ 20 ಜನರ ವಿರುದ್ಧ ದೂರು ದಾಖಲಾಗಿದೆ.
ನಾಗಪಾತ್ರಿ ರಾಜಶೇಖರ ಅವರು 16 ಜನರ ವಿರುದ್ಧ ದೂರು ನೀಡಿದ್ದಾರೆ. ಇದರ ಪ್ರತಿಯಾಗಿ ನಾಗರಾಜ ಅವರೂ 4 ಮಂದಿ ವಿರುದ್ಧ ದೂರು ನೀಡಿದ್ದಾರೆ. ಘಟನೆ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದು. ಘಟನೆ ಸಂಬಂಧ 2 ಮನೆಯವರ ವಿರುದ್ಧ ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


