ಬೆಳಗಾವಿ : ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಹಿಂಡಲಗಾ ಜೈಲಿಂದ ಬಿಡುಗಡೆ.!
news.ashwasurya.in
ಸಿಗದನಪಾಳ್ಯ ಮಹೇಶ್ ಕೊಲೆ ಪ್ರಕರಣದ ಆರೋಪಿ, ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ನಟ ದರ್ಶನ್ ಜೊತೆಗಿನ ಫೋಟೋ ವೈರಲ್ ಆದ ಬಳಿಕ ಹಿಂಡಲಗಾ ಜೈಲಿಗೆ ಸ್ಥಳಾಂತರಗೊಂಡಿದ್ದ ಈತನಿಗೆ, ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿದ್ದಾಗಲೇ ಜಾಮೀನು ದೊರೆತು ಬಿಡುಗಡೆ ಮಾಡಲಾಗಿದೆ…
ಅಶ್ವಸೂರ್ಯ/ಬೆಳಗಾವಿ: ನಟ ದರ್ಶನ್ ಜೊತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಆವರಣದಲ್ಲೆ ಚಹಾ ಕುಡಿಯುತ್ತ ಕುಳಿತಿದ್ದ ಫೋಟೋ ವೈರಲ್ ಆದ ಬಳಿಕ ಸುದ್ದಿಯಾಗಿದ್ದ ಬೆಂಗಳೂರಿನ ರೇಡಿಯೋ ವಿಲ್ಸನ್ ಗಾರ್ಡನ್ ನಾಗ ಅಲಿಯಾಸ್ ನಾಗರಾಜ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಗುರುವಾರ ಬೆಳಗಾವಿಯ ಹಿಂಡಲಗಾ ಕಾರಾಗೃಹದಿಂದ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.
ಸಿಗದನಪಾಳ್ಯ ಮಹೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದಾನೆ ನಾಗ.
ಸಿಗದನಪಾಳ್ಯ ಮಹೇಶ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಾಗರಾಜ, ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಜೊತೆ ಜೈಲ್ ಆವರಣದಲ್ಲಿ ಟೀ ಕುಡಿಯುತ್ತ ಕುಳಿತ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಈ ಘಟನೆ ನಂತರ ಜೈಲು ಭದ್ರತೆ ಹಾಗೂ ಕೈದಿಗಳ ನಿಯಮ ಉಲ್ಲಂಘನೆ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಉಂಟಾಗಿತ್ತು. ವಿವಾದದ ಹಿನ್ನೆಲೆಯಲ್ಲಿ ಅಧಿಕಾರಿಗಳು ಆತನನ್ನು ಪರಪ್ಪನ ಅಗ್ರಹಾರದಿಂದ ಬೆಳಗಾವಿಯ ಹಿಂಡಲಗಾ ಕಾರಾಗೃಹಕ್ಕೆ ಸ್ಥಳಾಂತರಿಸಿದ್ದರು.

ಮಹೇಶ್ ಕೊಲೆ ಪ್ರಕರಣದ ಆರೋಪಿಯಾಗಿರುವ ರೌಡಿಶೀಟರ್ ನಾಗನಿಗೆ ಬುಧವಾರ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಆದರೆ, ಬಿಡುಗಡೆ ಪ್ರಕ್ರಿಯೆಯ ಮುನ್ನವೇ ಆತನ ಆರೋಗ್ಯದಲ್ಲಿ ತೊಂದರೆ ಉಂಟಾದ ಕಾರಣ ಕಳೆದ ವಾರ ಆತನನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದ ಅವಧಿಯಲ್ಲೇ ಜಾಮೀನು ಆದೇಶ ಜಾರಿಯಾಗಿದ್ದು, ಆಸ್ಪತ್ರೆಯಿಂದಲೇ ಆತನನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ವಿಲ್ಸನ್ ಗಾರ್ಡನ್ ನಾಗನ ವಿರುದ್ಧದ ಹಲವು ಪ್ರಕರಣಗಳು ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. ಆದರೂ ಜಾಮೀನು ಆಧಾರದಲ್ಲಿ ಈಗ ತಾತ್ಕಾಲಿಕವಾಗಿ ಬಿಡುಗಡೆ ದೊರೆತಿದೆ. ಈ ಬೆಳವಣಿಗೆ ಜೈಲು ವ್ಯವಸ್ಥೆ ಹಾಗೂ ರೌಡಿಶೀಟರ್ಗಳ ಚಟುವಟಿಕೆಗಳ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ ಎಂದು ಕಾನೂನು ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.ಒಟ್ಟಿನಲ್ಲಿ ನಟ ದರ್ಶನ್ ಜೋತೆಗೆ ಜೈಲು ಆವರಣದಲ್ಲಿ ಟೀ ಕುಡಿದಿದ್ದ ನಾಗನಿಗೆ ಜಾಮೀನು ಮಂಜೂರು ಆದರೆ ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ಗೆ ಮಾತ್ರ ಇನ್ನೂ ಜಾಮೀನು ಮಂಜೂರು ಭಾಗ್ಯ ದೊರೆತಿಲ್ಲ..


