ಬೆಂಗಳೂರು : ಮಲ್ಲೇಶ್ವರಂ ಪೊಲೀಸ್ ಇಲಾಖೆಯ ಜಾಗವನ್ನೆ ನುಂಗಲು ಮುಂದಾದ 3 ಮಂದಿ ಭೂಗಳ್ಳರು.! ಮೂವರಲ್ಲಿ ಶಿವಮೊಗ್ಗದ ಶ್ರೀನಾಥ್ ನಗರಗದ್ದೆ A2 ಆರೋಪಿ.!

news.ashwasurya.in
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪೊಲೀಸ್ ಇಲಾಖೆಯ ಸುಪರ್ದಿಯ ಪೊಲೀಸ್ ಕ್ವಾರ್ಟರ್ಸ್ಗೆ ಸಂಭವಿಸಿದ ಕೋಟ್ಯಂತರ ರೂಪಾಯಿ ಮೌಲ್ಯದ ಜಾಗವನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲು ಭೂಗಳ್ಳರ ತಂಡವೊಂದು ಯತ್ನಿಸಿದೆ. ಒಂದು ಕರೆಂಟ್ ಬಿಲ್ನಿಂದಾಗಿ ಈ ಬೃಹತ್ ಹಗರಣ ಬಯಲಾಗಿದ್ದು, ಪೊಲೀಸರು ಮೂವರು ಭೂಗಳ್ಳತನ ಮಾಡಲು ಮುಂದಾದ ಆರೋಪಿಗಳನ್ನು ಬಂಧಿಸಿದ್ದಾರೆ….
ಅಶ್ವಸೂರ್ಯ/ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಭರ್ಜರಿಯಾಗಿ ಬೆಳೆಯುತ್ತಿದ್ದಂತೆ ಭೂಗಳ್ಳರ ಅಟ್ಟಹಾಸ ಯಾವ ಹಂತಕ್ಕೆ ತಲುಪಿದೆ ಎಂದರೆ ಒಮ್ಮೆ ನೀವು ಕೂಡ ನಿಮ್ಮ ಜಾಗವನ್ನು ಖದೀಮರು ಕಬಳಿಸ ಬಹುದು ಎನ್ನುವ ಅತಂಕ ನಿಮ್ಮನ್ನು ಕಾಡದೆ ಬಿಡದು.! ಇತ್ತೀಚೆಗೆ ಭೂಗಳ್ಳರ ಗ್ಯಾಂಗ್ ಯಾವ ಮಟ್ಟಕ್ಕೆ ತಲುಪಿದೆ ಎಂದರೆ ನಮಗೆ ರಕ್ಷಣೆ ನೀಡುವ ಪೊಲೀಸ್ ಇಲಾಖೆಯ ವಸತಿಗೃಹದ ಜಾಗವನ್ನೇ ಕಬಳಿಸಲು ಸಂಚು ರೂಪಿಸಿದ್ದಾರೆ ಮೂವರು ಖತರ್ನಾಕ್ ಖದೀಮರ ಗ್ಯಾಂಗ್.! ಮಲ್ಲೇಶ್ವರಂನಲ್ಲಿರುವ ಪೊಲೀಸ್ ಕ್ವಾರ್ಟರ್ಸ್ನ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಾಗವನ್ನು ನಕಲಿ ದಾಖಲೆಗಳ ಮೂಲಕ ಲಪಟಾಯಿಸಲು ಮುಂದಾಗಿದ್ದ ಮೂವರು ವಂಚಕರನ್ನು ಮಲ್ಲೇಶ್ವರಂ ಪೊಲೀಸರು ಬಂದಿಸಿ ಜೈಲಿಗಟ್ಟಿದ್ದಾರೆ.

ಪ್ರಕರಣ ಹಿನ್ನೆಲೆ.?
ಪೊಲೀಸ್ ವಸತಿ ಗೃಹದ ಜಾಗಕ್ಕೆ ನಕಲಿ ದಾಖಲಾತಿ ಸೃಷ್ಟಿಸಿ ಅಕ್ರಮವಾಗಿ ಇ-ಖಾತಾ ಹಾಗೂ ವಿದ್ಯುತ್ ಸಂಪರ್ಕ ಪಡೆದು, ಅತಿಕ್ರಮಣಕ್ಕೆ ಮುಂದಾಗಿರುವ ಆರೋಪ ಕೇಳಿಬಂದಿದ್ದು, ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಲೋಕಾಯುಕ್ತ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಇನ್ಸ್ಪೆಕ್ಟರ್ ಕುಮಾರ್ ನೀಡಿದ ದೂರಿನ ಮೇರೆಗೆ ಎ.ಆರ್.ಮಹಾಲಕ್ಷ್ಮಿ, ಪಿ.ಕೃಷ್ಣಮೂರ್ತಿ, ಶ್ರೀನಾಥ್ ನರಗದ್ದೆ, ಜಿಬಿಎ ಹಾಗೂ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಮೈಸೂರು ಸರ್ಕಾರದ ಕಾಲದ ಹಳೇ ಮಲ್ಲೇಶ್ವರಂ ಠಾಣೆ ಮತ್ತು ಪೊಲೀಸ್ ವಸತಿ ಗೃಹಕ್ಕೆ 100 ವರ್ಷಕ್ಕಿಂತ ಹೆಚ್ಚು ಇತಿಹಾಸವಿದೆ. 1913ರ ಮಾಪನ ನಕ್ಷೆಯಲ್ಲಿ ಇದನ್ನು ಸರ್ಕಾರಿ ಪೊಲೀಸ್ ಕ್ವಾರ್ಟರ್ಸ್ ಎಂದು ಗುರುತಿಸಲಾಗಿತ್ತು. ಪ್ರಸ್ತುತ, ಈ ವಸತಿ ಗೃಹದಲ್ಲಿ ನಾಲ್ಕು ಜನ ಇನ್ಸ್ಪೆಕ್ಟರ್ ಕುಟುಂಬಗಳು ವಾಸವಾಗಿವೆ. ಈ ಪೈಕಿ ದೂರುದಾರ ಕುಮಾರ್ ಸಹ ವಾಸವಾಗಿದ್ದು, ಮನೆಗೆ ಬಂದ ವಿದ್ಯುತ್ ಬಿಲ್ನಲ್ಲಿ ಮಹಾಲಕ್ಷ್ಮಿ ಹೆಸರು ನಮೂದಾಗಿತ್ತು. ಅನುಮಾನಗೊಂಡು ಬೆಸ್ಕಾಂ ಕಚೇರಿಗೆ ತೆರಳಿ ಪರಿಶೀಲಿಸಿದಾಗ 2024ರಲ್ಲಿ ಮಹಾಲಕ್ಷ್ಮಿ ಎಂಬವರು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವುದು ತಿಳಿದು ಬಂದಿದೆ. ಸ್ವತ್ತಿನ ಮಾಲೀಕರಿಂದ ಹಾಗೂ ಪೊಲೀಸ್ ಇಲಾಖೆಗೆ ಸೇರಿದ ಜಾಗವನ್ನ ಎನ್ಓಸಿ ಇಲ್ಲದೆ ಅಧಿಕಾರಿಗಳು ಬದಲಾವಣೆ ಮಾಡಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಕುಮಾರ್ ತಿಳಿಸಿದ್ದಾರೆ.
ಆರೋಪಿತೆ ಮಹಿಳೆಯು ಪೊಲೀಸ್ ವಸತಿನಿಲಯದ ಫೋಟೋ ತೆಗೆದು ಖಾಲಿ ನಿವೇಶನವೆಂದು ತೋರಿಸಿ, ನಕಲಿ ದಾಖಲಾತಿ ಸಲ್ಲಿಸಿ ಇ-ಖಾತಾ ಪಡೆದಿದ್ದಾಳೆ. ಇದರ ಆಧಾರದ ಮೇಲೆ ಗಾಂಧಿನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಶ್ರೀನಾಥ್ ಎಂಬಾತನಿಗೆ ಮಾರಾಟ ಕರಾರು ಒಪ್ಪಂದವನ್ನ ಮಾಡಿಸಿಕೊಟ್ಟಿದ್ದಳು. ಇದೇ ಜಾಗವನ್ನ ರಾಜಾಜಿನಗರ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಕೃಷ್ಣಮೂರ್ತಿ ಎಂಬಾತನಿಗೆ ಸೆಲ್ ಡೀಡ್ ಮಾಡಿರುವುದು ಕಂಡುಬಂದಿದೆ. ಸರ್ಕಾರಿ ಪೊಲೀಸ್ ಕ್ವಾರ್ಟಸ್ ಎಂದು ದಾಖಲೆಯಲ್ಲಿದ್ದರೂ ಜಿಬಿಎ ಅಧಿಕಾರಿಗಳು ಪರಿಶೀಲಿಸದೆ ಇ ಖಾತಾ ನೀಡಿದ್ದಾರೆ. ಬೆಸ್ಕಾಂ ಅಧಿಕಾರಿಗಳು ಸಹ ಅಕ್ರಮವಾಗಿ ಆರೋಪಿತೆ ಹೆಸರಿಗೆ ವಿದ್ಯುತ್ ಸಂಪರ್ಕ ಖಾತೆ ನೀಡುವ ಮೂಲಕ ಅತಿಕ್ರಮಣಕಾರರೊಂದಿಗೆ ಶಾಮೀಲಾಗಿರುವ ಗುಮಾನಿ ಇದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಯಲಾಯ್ತು ಭೂಗಳ್ಳರ ಬಣ್ಣ ಒಂದು ಕರೆಂಟ್ ಬಿಲ್ಲ್ನಿಂದ.!
ಈ ಭೂಗಳ್ಳರು ಗ್ಯಾಂಗ್ ಯಾವ ಮಟ್ಟದ ಬುದ್ಧಿವಂತಿಕೆ ಮಾಡಿದ್ದರೆಂದರೆ ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಯ ಹೆಸರಿಗೆ ವರ್ಗಾಯಿಸಲು ಬೇಕಾದ ಪೂರಕ ದಾಖಲೆಗಳನ್ನು ನೀಟಾಗಿ ಸೃಷ್ಟಿಸಿದ್ದರು. ಆದರೆ, ಇವರು ಸಿಕ್ಕಿಬಿದ್ದಿದ್ದು ಮಾತ್ರ ಒಂದು ಎಲೆಕ್ಟ್ರಿಸಿಟಿ ಬಿಲ್ನಿಂದ ಪೊಲೀಸ್ ಕ್ವಾರ್ಟರ್ಸ್ ಜಾಗಕ್ಕೆ ಸಂಬಂಧಿಸಿದಂತೆ ಇದ್ದಕ್ಕಿದ್ದಂತೆ ‘ಮಹಾಲಕ್ಷ್ಮಿ’ ಎಂಬ ಹೆಸರಿನಲ್ಲಿ ಕರೆಂಟ್ ಬಿಲ್ ಬಂದಿದೆ. ಪೊಲೀಸ್ ಇಲಾಖೆಗೆ ಸೇರಿದ ಜಾಗಕ್ಕೆ ಖಾಸಗಿ ವ್ಯಕ್ತಿಯ ಹೆಸರಿನಲ್ಲಿ ಬಿಲ್ ಬಂದಿದ್ದನ್ನು ಕಂಡು ಸಂಶಯಗೊಂಡ ಅಧಿಕಾರಿಗಳು ಆಳವಾಗಿ ತನಿಖೆ ನಡೆಸಿದಾಗ ತಮ್ಮದೆ ಇಲಾಖೆಯ ದೊಡ್ಡಮಟ್ಟದ ಜಾಗವನ್ನು ಕದಿಯಲು ಮುಂದಾದ ಖತರ್ನಾಕ್ ಖದೀಮರ ಭೂ ಹಗರಣ ಬೆಳಕಿಗೆ ಬಂದಿದೆ.

ಮೂವರು ಭೂಗಳ್ಳ ಆರೋಪಿಗಳು ಅಂದರ್.! :
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲೇಶ್ವರಂ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
A1 ಕೃಷ್ಣಮೂರ್ತಿ
A2 ಶ್ರೀನಾಥ್ ನಗರಗದ್ದೆ
A3 ಕೃಷ್ಣ
ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ನೀಡಿರುವ ಮಾಹಿತಿ ಕೇಳಿ ಪೊಲೀಸರೇ ದಂಗಾಗಿದ್ದಾರೆ. ಈ ಗ್ಯಾಂಗ್ ಕೇವಲ ಮಲ್ಲೇಶ್ವರಂ ಮಾತ್ರವಲ್ಲದೆ, ಬೆಂಗಳೂರಿನ ವಿವಿಧೆಡೆ ಇರುವ ಬೆಲೆಬಾಳುವ ಸರ್ಕಾರಿ ಜಾಗಗಳನ್ನು ಇದೇ ರೀತಿ ನಕಲಿ ದಾಖಲೆ ಸೃಷ್ಟಿಸಿ ನುಂಗಿರುವ ಬಗ್ಗೆ ಮಾಹಿತಿ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.
ಭೂಗಳ್ಳರನ್ನು ಹೆಚ್ಚಿನ ತನಿಖೆ ಒಳಪಡಿಸಿದ ಪೊಲೀಸರು.:
ಪೊಲೀಸ್ ಕ್ವಾರ್ಟರ್ಸ್ ಜಾಗವನ್ನೇ ನುಂಗಲು ಮುಂದಾಗಿದ್ದ ಈ ಗ್ಯಾಂಗ್ನ ಹಿಂದೆ ದೊಡ್ಡ ಜಾಲವೇ ಇರುವ ಸಾಧ್ಯತೆಯಿದೆ. ನಕಲಿ ದಾಖಲೆ ಸೃಷ್ಟಿಸಲು ಇವರಿಗೆ ಯಾವುದಾದರೂ ಇಲಾಖೆಯ ಒಳಗಿನ ವ್ಯಕ್ತಿಗಳು ಸಹಾಯ ಮಾಡಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರಿಗೆ ಅನುಮಾನವಿದ್ದು ತನಿಖೆ ನಡೆಸುತ್ತಿದ್ದೇವೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಲ್ಲೇಶ್ವರಂ ಪೊಲೀಸರ ಈ ಭರ್ಜರಿ ಕಾರ್ಯಾಚರಣೆಯಿಂದಾಗಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಸರ್ಕಾರಿ ಸ್ವತ್ತು ಉಳಿದಂತಾಗಿದೆ. ಸದ್ಯ ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಇವರು ನಗರದ ಬೇರೆ ಎಲ್ಲೆಲ್ಲಿ ಭೂ ಕಬಳಿಕೆ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.!


