ಉಪಚುನಾವಣೆ :

ಕರ್ನಾಟಕ ಉಪಚುನಾವಣೆ : ಬಾಗಲಕೋಟೆ, ದಾವಣಗೆರೆ ದಕ್ಷಿಣ ನಾಮಪತ್ರ ಸಲ್ಲಿಕೆ ಅವಧಿ ವಿಸ್ತರಣೆ?
news.ashwasurya.in
ಅಶ್ವಸೂರ್ಯ/ಬೆಂಗಳೂರು : ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಮಾರ್ಚ್ 24 ಕೊನೆಯ ದಿನವಾಗಿದೆ. ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಘೋಷಣೆಯಾಗಲಿದೆ.
ಬಿಜೆಪಿ ಉಪ ಚುನಾವಣೆಗೆ ಬಾಗಲಕೋಟೆಯಿಂದ ವೀರಣ್ಣ ಚರಂತಿಮಠ ಮತ್ತು ದಾವಣಗೆರೆ ದಕ್ಷಿಣದಿಂದ ಶ್ರೀನಿವಾಸ್ ದಾಸಕರಿಯಪ್ಪ ಅಭ್ಯರ್ಥಿಗಳು ಎಂದು ಘೋಷಣೆ ಮಾಡಿದೆ. ಇಬ್ಬರೂ ಸಹ ಶುಕ್ರವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಆದರೆ ಬಿಜೆಪಿ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿಯೊಂದನ್ನು ಸಲ್ಲಿಕೆ ಮಾಡಿದೆ. ನಾಮಪತ್ರ ಸಲ್ಲಿಕೆ ಅವಧಿಯನ್ನು ಮೂರು ದಿನಗಳ ರಜೆಯ ಕಾರಣ ವಿಸ್ತರಣೆ ಮಾಡಬೇಕು ಎಂದು ಮನವಿ ಮಾಡಿದೆ.
ಮಾರ್ಚ್ 19ರಂದು ಯುಗಾದಿ, ಮಾರ್ಚ್ 21ರಂದು ರಂಜಾನ್ ಮತ್ತು ಮಾರ್ಚ್ 22ರಂದು ಭಾನುವಾರ ಸರ್ಕಾರಿ ರಜೆ ಇದೆ. ಆದ ಕಾರಣ ಹಲವು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಲು ತೊಂದರೆಯಾಗಿದೆ. ನಾಮಪತ್ರ ಸಲ್ಲಿಕೆ ದಿನಾಂಕ ವಿಸ್ತರಣೆ ಮಾಡಿ ಎಂದು ಮನವಿ ಮಾಡಿದೆ.

ಕೇಂದ್ರ ಚುನಾವಣಾ ಆಯೋಗದ ವೇಳಾಪಟ್ಟಿ ಪ್ರಕಾರ :
ಮಾರ್ಚ್ 16 ಚುನಾವಣಾ ಅಧಿಸೂಚನೆ ಪ್ರಕಟಟ
ಮಾರ್ಚ್ 23 ನಾಮಪತ್ರ ಸಲ್ಲಿಕೆ ಮಾಡಲು ಕೊನೆ ದಿನ
ಮಾರ್ಚ್ 24 ನಾಮಪತ್ರಗಳ ಪರಿಶೀಲನೆ
ಮಾರ್ಚ್ 26 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ
ಏಪ್ರಿಲ್ 9ರಂದು ಮತದಾನ, ಮೇ 4ರಂದು ಫಲಿತಾಂಶ ಪ್ರಕಟ
ಈಗ ಬಿಜೆಪಿ ಬೇಡಿಕೆಯಂತೆ ನಾಮಪತ್ರ ಸಲ್ಲಿಕೆ ದಿನಾಂಕವನ್ನು ವಿಸ್ತರಣೆ ಮಾಡಿದರೆ ಉಳಿದ ಎಲ್ಲಾ ದಿನಾಂಕಗಳನ್ನು ವಿಸ್ತರಣೆ ಮಾಡಬೇಕಿದೆ. ಆದ್ದರಿಂದ ದಿನಾಂಕ ವಿಸ್ತರಣೆ ಮಾಡುವ ಸಾಧ್ಯತೆ ಕಡಿಮೆ ಎಂಬುದು ಸದ್ಯದ ಸುದ್ದಿ.
ಶಾಮನೂರು ಶಿವಶಂಕರಪ್ಪ ನಿಧನದ ಕಾರಣ ದಾವಣಗೆರೆ ದಕ್ಷಿಣ ಮತ್ತು ಎಚ್.ವೈ.ಮೇಟಿ ನಿಧನದ ಕಾರಣ ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆ ಎದುರಾಗಿದೆ. ಕಾಂಗ್ರೆಸ್ ಪಕ್ಷ ಇನ್ನೂ ಸಹ ಅಭ್ಯರ್ಥಿ ಘೋಷಣೆ ಮಾಡಿಲ್ಲ.


