
ಬೆಳಗಾವಿ : ಆತ್ಮಹತ್ಯೆಗೂ ಮುನ್ನ ಗೋಡೆಯ ಮೇಲೆ ಸಾವಿನ ಸಾಲು ಬರೆದಿಟ್ಟು ಕೊನೆ ಉಸಿರೆಳೆದ ಗೌರವ್ವ.!
ಬೆಳಗಾವಿ (Belagavi) ಜಿಲ್ಲೆಯ ಬೈಲಹೊಂಗಲ ತಾಲೂಕಿನ ಆನಿಗೋಳ ಗ್ರಾಮದಲ್ಲಿ ಮನಕಲಕುವ ಘಟನೆ ಸಂಭವಿಸಿದೆ. ಮಹಿಳೆಯೊಬ್ಬರು ಗೋಡೆ ಮೇಲೆ ಡೆತ್ ನೋಟ್ (Death Note) ಬರೆದಿಟ್ಟು ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ.
news.ashwasurya.in
ಅಶ್ವಸೂರ್ಯ/ಬೆಳಗಾವಿ :ಒಲ್ಲದ ಮನಸ್ಸಿನಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾದ ಮಹಿಳೆ
ಆತ್ಮಹತ್ಯೆ ಮಾಡಿಕೊಂಡಿದ್ದಾರೆ.!ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಗೌರವ್ವ ನೀಲ್ಲಪ್ಪ ಕೆಂಗಾನೂರ (36) ಎಂದು ಗುರುತಿಸಲಾಗಿದೆ. ಗೌರವ್ವ ವಿವಾಹಿತರಾಗಿದ್ದು, ಕುಟುಂಬದ ಜವಾಬ್ದಾರಿ ಹೊತ್ತಿದ್ದ ಮಹಿಳೆಯಾಗಿದ್ದರು ಎಂದು ತಿಳಿದುಬಂದಿದೆ. ಸಾಲದ ಒತ್ತಡ ಮತ್ತು ನಿರಂತರ ಕಿರುಕುಳದಿಂದ ಅವರು ಇತ್ತೀಚೆಗೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ.

ಸಾವಿಗೂ ಮುನ್ನ ಗೋಡೆಯ ಮೇಲೆ ಗೌರವ್ವ ಕೊನೆಯ ಸಾಲುಗಳು.!
ಗೌರವ್ವ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನಗಾದ ಅವಮಾನಕ್ಕೆ ಕಾರಣ ಯಾರು.? ನಾನು ಯಾರಿಂದ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೆಂದು ತನ್ನ ಮನೆಯ ಗೋಡೆಯ ಮೇಲೆ ತಮ್ಮ ಕೊನೆಯ ಸಂದೇಶವನ್ನು ಬರೆದಿಟ್ಟು ಹೋಗಿದ್ದಾರೆ. ಆ ಡೆತ್ ನೋಟಿನಲ್ಲಿ ಅವರು ತಮ್ಮ ಸಾವಿಗೆ ಕಾರಣರಾದವರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳಕ್ಕೆ ಬೇಸತ್ತಿದ್ದಾರೆ ಎನ್ನಲಾಗಿದ್ದು, ‘ನನ್ನ ಸಾವಿಗೆ ಕಾರಣ ಸಂಘದ ಸುಮವ್ವ, ಮಂಜವ್ವ ಮತ್ತು ಕಸ್ತೂರ’ ಎಂದು ಸ್ಪಷ್ಟವಾಗಿ ಬರೆದಿದ್ದಾರೆ ಎನ್ನಲಾಗಿದೆ. ಅಲ್ಲದೆ ತಮ್ಮ ಕುಟುಂಬದ ಬಗ್ಗೆ ಅಪಾರ ಕಾಳಜಿ ತೋರಿಸಿರುವ ಗೌರವ್ವ, ತಮ್ಮ ಕೊನೆಯ ಆಸೆಯನ್ನು ಬರಹ ರೂಪದಲ್ಲಿ ಹೇಳಿಕೊಂಡಿದ್ದಾರೆ.
ಸಾಯುವ ಅಂತಿಮ ಕ್ಷಣದಲ್ಲೂ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿದ್ದಾರೆ.!
ತಮ್ಮ ಕುಟುಂಬಕ್ಕೆ ಸಂದೇಶ ನೀಡಿರುವ ಗೌರವ್ವ, ಆರೂಡ ತಂಗಿಯನ್ನು ಚೆನ್ನಾಗಿ ನೋಡಿಕೋ. ಮಕ್ಕಳು ನಿಮ್ಮ ಜವಾಬ್ದಾರಿ. ಸಿದ್ದಪ್ಪ ಆರೂಡನನ್ನ 10ನೇ ತರಗತಿ ಪಾಸು ಮಾಡಿಸು, ಇದೇ ನನ್ನ ಕೊನೆಯ ಆಸೆ ಎಂದು ಬರೆದು ತಮ್ಮ ಜೀವನದ ಅಂತಿಮ ಕ್ಷಣಗಳಲ್ಲಿ ಕೂಡ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿದ್ದಾರೆ.

ಮೈಕ್ರೋ ಫೈನಾನ್ಸ್ ನವರಿಂದ ಕಿರುಕುಳದ ಆರೋಪ!
ಗ್ರಾಮಸ್ಥರ ಮಾಹಿತಿ ಪ್ರಕಾರ, ಗೌರವ್ವ ಕೆಲವು ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾಲ ಪಡೆದಿದ್ದರು. ಸಾಲದ ಕಂತು ಪಾವತಿಯಲ್ಲಿ ತಡವಾಗುತ್ತಿದ್ದಂತೆ ಸಂಘದ ಮಹಿಳೆಯರು ನಿರಂತರವಾಗಿ ಗೌರವ್ವನ ಮನೆಗೆ ಬಂದು ಅವಾಚ್ಯವಾಗಿ ನಿಂದಿಸಿ ತುಚ್ಚವಾಗಿ ಮಾತನಾಡುವುದು, ಮಾನಸಿಕ ಕಿರುಕುಳ ನೀಡುವುದು ನಡೆಯುತ್ತಿತ್ತು ಎನ್ನಲಾಗಿದೆ. ಇದರಿಂದ ಗೌರವ್ವ ಮಾನಸಿಕವಾಗಿ ನೊಂದಿದ್ದು, ದಿನದಿಂದ ದಿನಕ್ಕೆ ಗೌರವ್ವ ಒತ್ತಡಕ್ಕೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ.
ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣು.!
ಮನೆ ಸಮೀಪದವಿದ್ದ ಕೆರೆಗೆ ಹಾರಿದ್ದಾರೆ. ಎಂದು ಶಂಕಿಸಲಾಗಿದೆ. ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಬೈಲಹೊಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆರೆಯಿಂದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಪೊಲೀಸರ ತನಿಖೆ ಆರಂಭಿಸಿದ್ದು.
ಈ ಘಟನೆ ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗೋಡೆ ಮೇಲೆ ಬರೆದ ಡೆತ್ ನೋಟನ್ನು ಕಂಡ ಪೊಲೀಸರು, ಅದರ ಆಧಾರದ ಮೇಲೆ ತನಿಖೆ ಆರಂಭಿಸಿದ್ದಾರೆ. ಡೆತ್ ನೋಟಿನಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ದುರ್ಘಟನೆ ಆನಿಗೋಳ ಗ್ರಾಮದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಸಾಲದ ಹೆಸರಿನಲ್ಲಿ ಬಡವರನ್ನು ಮಾನಸಿಕವಾಗಿ ಹಿಂಸಿಸುವುದು ನಿಲ್ಲಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಘಟನೆ ಮತ್ತೊಮ್ಮೆ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ನಡೆಯುತ್ತಿರುವ ಆತ್ಮಹತ್ಯೆಗಳ ಗಂಭೀರತೆಯನ್ನು ಎತ್ತಿ ತೋರಿಸಿದೆ. ಸಾಲದ ಒತ್ತಡಕ್ಕೆ ಜೀವ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗದಂತೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಆಗ್ರಹವಾಗಿದೆ. ಗೌರವ್ವ ಅವರ ಸಾವು ಒಂದು ಕುಟುಂಬವನ್ನೇ ಕತ್ತಲಿಗೆ ತಳ್ಳಿದೆ. ಅವರ ಮಕ್ಕಳ ಭವಿಷ್ಯ ಮತ್ತು ಕುಟುಂಬದ ಬದುಕು ಇದೀಗ ಅತಂತ್ರ ಸ್ಥಿತಿಗೆ ತಲುಪಿದೆ.ಗೌರವ್ವನ ಸಾವಿಗೆ ಕಾರಣರಾಗಿರುವವರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕಿದೆ ಎನ್ನುವುದು ಗ್ರಾಮಸ್ಥರ ಆಗ್ರಹಿಸಿದ್ದಾರೆ…


