ಹೊನ್ನಾವರ : ಪ್ರತಿಷ್ಠಿತ ಇಡಗುಂಜಿ ದೇವಸ್ಥಾನದಲ್ಲಿ ತಟ್ಟೆಗೆ ಬಿದ್ದ ದಕ್ಷಿಣೆ ಹಣಕ್ಕಾಗಿ ಅರ್ಚಕರ ನಡುವೆ ಗಲಾಟೆ.! ಇದು ಬೇಕಿತ್ತಾ ಸ್ವಾಮಿ.? ವಿಡಿಯೋ ವೈರಲ್.!
ಹೊನ್ನಾವರ ಜನವರಿ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಐತಿಹಾಸಿಕ ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ಭಕ್ತರು ನೀಡುವ ತಟ್ಟೆ ಹಣಕ್ಕಾಗಿ ಅರ್ಚಕರು ಬೀದಿಯಲ್ಲಿ ಕಿತ್ತಾಡಿಕೊಂಡಿರುವ ಘಟನೆ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಹೊಡೆದಾಡಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೇವಸ್ಥಾನದ ಅರ್ಚಕರಾದ ನರಸಿಂಹ ಭಟ್ ಮತ್ತು ರಮಾನಂದ ಭಟ್ ಅವರ ನಡುವೆ ಈ ಘರ್ಷಣೆ ನಡೆದಿದೆ. ಹಣಕ್ಕಾಗಿ ಒಬ್ಬರಿಗೊಬ್ಬರು ಜಗಳವಾಡುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಕೆಲವು ದಿನಗಳ ಹಿಂದೆ ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಭಕ್ತ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹಲವು ವರ್ಷಗಳಿಂದ ದೇವಸ್ಥಾನದ ಹಕ್ಕು ಮತ್ತು ಪೂಜಾ ಕೈಂಕರ್ಯಗಳ ವಿಷಯದಲ್ಲಿ ಕುಟುಂಬದ ನಡುವೆ ನಡೆಯುತ್ತಿರುವ ಒಳಜಗಳ ಹಾಗೂ ನ್ಯಾಯಾಲಯದ ದಾವೆಗಳೇ ಈ ಅಹಿತಕರ ಘಟನೆಗೆ ಕಾರಣ ಎನ್ನಲಾಗಿದ್ದು, ಪ್ರಸ್ತುತ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. ಈಗ ಭಕ್ತಿಯ ದಾರಿಯಲ್ಲಿ ನಡೆಯಬೇಕಾದ ಅರ್ಚಕರು ಪೂಜೆ ಮತ್ತು ಹಣದ ವಿಚಾರವಾಗಿ ಬೀದಿ ರಂಪಾಟ ಮಾಡಿಕೊಂಡಿರುವುದು ದೇವಸ್ಥಾನದ ಘನತೆಗೆ ಧಕ್ಕೆ ತಂದಿದ್ದಾರೆ ಈ ಕೂಡಲೇ ಇಂತವರನ್ನು ದೇಗುಲದಿಂದ ದೂರವಿಟ್ಟು ಮಂದಿರದ ಘನತೆಯನ್ನು ಕಾಪಾಡಬೇಕಾದ ದೋಡ್ಡ ಜವಬ್ದಾರಿ ಅ ಮಂದಿರದ ಹಿರಿಯರಿಗಿದೆ .


