ಶಿವಮೊಗ್ಗ : ಮನುಕುಲದ ಏಳಿಗೆಗಾಗಿ ಶ್ರಮಿಸಿದ ಶ್ರೀ ವೇಮನ- ಭಾಷೆ ಬೇರೆಯಾದರೂ ಭಾವ ಒಂದೇ : ಚನ್ನಬಸಪ್ಪ , ಶಾಸಕರು.

news.ashwasurya.in
ಅಶ್ವಸೂರ್ಯ/ ಶಿವಮೊಗ್ಗ : ಭಾಷೆ ಯಾವುದಾದರೇನು ಭಾವ ಒಂದೇ ಎನ್ನುವಂತೆ ಮಹಾಯೋಗಿ ವೇಮನರು ತೆಲುಗಿನಲ್ಲಿ ವಚನ ರಚಿಸಿ ಮಹಾಕವಿಯಾಗಿದ್ದರೂ ಕನ್ನಡದಲ್ಲೂ ಅದೇ ಅರ್ಥ ನೀಡುತ್ತದೆ. ಭಾಷೆಯಿಂದಾಗಿ ಭಾವನೆ ದೂರ ಮಾಡಲು ಬರುವುದಿಲ್ಲವೆಂದು ಶಾಸಕರಾದ ಎಸ್ ಎನ್ ಚನ್ನಬಸಪ್ಪ ನುಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,

ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಮೊಗ್ಗ ರೆಡ್ಡಿ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
15 ನೇ ಶತಮಾನದಲ್ಲಿ ಮಹಾಕವಿ ಮತ್ತು ಮಹಾಯೋಗಿಯಾಗಿದ್ದ ಶ್ರೀ ವೇಮನರು ಮನುಕುಲದ ಏಳಿಗೆಗಾಗಿ ಶ್ರಮಿಸಿದರು. ಅವರು ಆಂಧ್ರದವರು ಅಂತ ನಮಗೆ ಅನ್ನಿಸುವುದೇ ಇಲ್ಲ. ಅವರು ಬೇರೆ ಭಾಷೆಯಲ್ಲಿ ವಚನ ರಚಿಸಿದ್ದರೂ. ಕನ್ನಡದಲ್ಲೂ ಅದೇ ಅರ್ಥ ನೀಡುತ್ತದೆ.

ವೇಮನರಂತಹ ಮಹಾಪುರುಷರು ಮನುಕುಲದ ಉದ್ದಾರಕ್ಕಾಗಿ ದೃಢ ಸಂಕಲ್ಪ ಹೊಂದಿ ಶ್ರಮಿಸಿದ್ದಾರೆ. ಯಾವುದೇ ಸಾಧನೆಗೆ ತಪಸ್ಸು ಮತ್ತು ದೃಢ ಮನಸ್ಸು ಬೇಕು. ಇಂತಹ ಮಹಾಪುರುಷರು ತಮ್ಮ ನಡೆ-ನುಡಿ, ಸಂಸ್ಕೃತಿ, ಪರಂಪರೆಯಿಂದಾಗಿ ರಾಷ್ಟ್ರಕ್ಕೆ ಶಕ್ತಿ ತುಂಬಿದ್ದಾರೆ.
ನಮ್ಮ ಪರಂಪರೆ, ಸಂಸ್ಕೃತಿ, ನೆಲೆಗಟ್ಟು ಏನೆಂದು ತಿಳಿಸಿದ್ದಾರೆ. ನಮ್ಮ ದೇಶ ಹಲವಾರು ಬಾರಿ ದಾಳಿಗೊಳಗಾದರೂ ಉಳಿಯಲು ಕಾರಣ ಇಂತಹ ಸಾಧಕರಾಗಿದ್ದಾರೆ. ಇಂತಹ ಮಹಾನ್ ಕವಿಗಳ ಜೀವನ ಚರಿತ್ರೆಯನ್ನು ಯುವಜನತೆಗೆ ತಿಳಿಸುವ ಮತ್ತು ನಾವು ಮೈಗೂಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಜಿಲ್ಲಾ ರೆಡ್ಡಿ ಸಂಘದ ಉಪಾಧ್ಯಕ್ಷರಾದ ಮೋಹನ್ ರೆಡ್ಡಿ ಮಾತನಾಡಿ,15 ನೇ ಶತಮಾನದಲ್ಲಿ ಆಂಧ್ರಪ್ರದೇಶದ ತೆಲುಗಿನ ಶ್ರೇಷ್ಟ ವಚನಕಾರ ಮಹಾಯೋಗಿ ವೇಮನರು ಮನುಕುಲದ ಉದ್ದಾರಕ್ಕಾಗಿ ಶ್ರಮಿಸಿದರು.

ಕನ್ನಡದ ಸರ್ವಜ್ಞ, ತಮಿಳಿನ ತಿರುವಳ್ಳುವರ್ನಂತೆ ಆಂಧ್ರದಲ್ಲಿ ವೇಮನವರು ಮಹಾಕವಿಯಾಗಿದ್ದಾರೆ ಎಂದು ಸ್ಮರಿಸಿದ ಅವರು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಾಗಿರುವ ನಮ್ಮ ಸಮುದಾಯ ಒಗ್ಗಟ್ಟಾಗಬೇಕು ಹಾಗೂ ವೇಮನರ ತತ್ವಾದರ್ಶಗಳನ್ನು ಯುವಜನತೆಗೆ ತಲುಪಿಸುವಂತಾಗಬೇಕು ಎಂದರು.
ಸೂಡಾ ಮಾಜಿ ಅಧ್ಯಕ್ಷರಾದ ಜ್ಞಾನೇಶ್ವರ್, ನಾಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್, ಸಮಾಜದ ಮುಖಂಡರು, ಅಧಿಕಾರಿಗಳು ಹಾಜರಿದ್ದರು.


